ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ; ವಿಜಯದಶಮಿಗೆ ನಿರ್ಧಾರ: ಕೆಸಿಎಆರ್-ಹೆಚ್ಡಿಕೆ
ಬೆಂಗಳೂರು, ಮೇ 26: ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸುವುದು ಮತ್ತು ತೃತೀಯ ರಂಗದ ಕನಸು ಹೊತ್ತು ದೇಶ ಸುತ್ತುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಸುಧೀರ್ಘವಾಗಿ ಚರ್ಚಿಸಿದರು.
ಮುಂದಿನ ದಸರಾ ವೇಳೆಗೆ ದೇಶದಲ್ಲಿ ಬಿಜೆಪಿಗೆ ಪರ್ಯಾಯವಾದ ರಾಜಕೀಯ ಶಕ್ತಿಯನ್ನು ರೂಪಿಸುವ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿದ ಕೆಸಿಆರ್ ಅವರು, ಸುಮಾರು ಮೂರೂವರೆ ಗಂಟೆಗೂ ಹೆಚ್ಚುಕಾಲ ಗೌಡರ ಜತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಈ ಸಭೆಯಲ್ಲಿ ದೇವೇಗೌಡರು, ಕೆಸಿಎಆರ್ ಅರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು.
ಕರ್ನಾಟಕದ ರಾಜಕೀಯವೂ ರಾಷ್ಟ್ರ ರಾಜಕಾರಣದ ಬಗ್ಗೆ ಸಮಗ್ರವಾಗಿ ಕೆಸಿಆರ್ ಅವರು ದಳಪತಿಗಳ ಜತೆ ಮಾತುಕತೆ ನಡೆಸಿದರು. ಸುದೀರ್ಘ ಸಭೆಯ ನಂತರ ಕೆ.ಚಂದ್ರಶೇಖರ ರಾವ್ ಮತ್ತು ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಉಜ್ವಲ್ ಹಿಂದೂಸ್ತಾನ್ ಬೇಕಿದೆ
"ಉಜ್ವಲ್ ಹಿಂದೂಸ್ತಾನ್ ನಮಗೆ ಬೇಕಿದೆ. ಜನರು ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವಶಕ್ತಿ ಇದ್ದರೂ, ದೇಶದಲ್ಲಿ ಹಲವು ಸಂಪನ್ಮೂಲಗಳಿದ್ದರೂ ಇವತ್ತಿಗೂ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ, ಪರಿಹಾರ ಇಲ್ಲ. ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಕಷ್ಟದಲ್ಲಿ ಇದ್ದಾರೆ. ಭರವಸೆಗಳನ್ನು ಸಾಕಷ್ಟು ಕೊಡಬಹುದು. ಆದರೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಯುವಕರಿಗೆ ಉದ್ಯೋಗ ಕೊಟ್ರಾ? ದೇಶದಲ್ಲಿ ಎಲ್ಲವೂ ಸಮಸ್ಯೆಗಳೇ," ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೆ.ಚಂದ್ರಶೇಖರರಾವ್ ಹರಿಹಾಯ್ದರು.
ದೇಶದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆಯಾಗಲಿದೆ ಹಾಗೂ ದೇಶವೂ ಬದಲಾಗಲಿದೆ. ಎರಡು-ಮೂರು ತಿಂಗಳು ಕಾಯಿರಿ ಎಂದು ಕೆಸಿಆರ್ ಅವರು ಸೂಚ್ಯವಾಗಿ. ದೇಶದ ಸರ್ಕಾರ, ಸಮಸ್ಯೆಗಳ ಬಗ್ಗೆ ದೇವೇಗೌಡರ ಜತೆ ಸುದೀರ್ಘ ಚರ್ಚೆ ಮಾಡಿದ್ದೇನೆ. ದೇಶದಲ್ಲಿ ಬದಲಾವಣೆ ತರಬೇಕಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದರು.
ಕರ್ನಾಟಕದ ರಾಜಕೀಯ ಕೂಡ ನನಗೆ ಗೊತ್ತಿದೆ
ಕರ್ನಾಟಕದ ರಾಜಕೀಯ ಕೂಡ ನನಗೆ ಗೊತ್ತಿದೆ. ಕರ್ನಾಟಕದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ಭಾರತ ಬದಲಿಸುವ ಕೆಲಸ ನಮ್ಮಿಂದ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದರು ಅವರು.
ಪರ್ಯಾಯ ಶಕ್ತಿ ಅನಿವಾರ್ಯ: ಹೆಚ್ಡಿಕೆ
ದೇಶಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆ ಅನಿವಾರ್ಯವಾಗಿದೆ. ಮೂರನೇ ಶಕ್ತಿ ಇಂದು ಅತ್ಯಗತ್ಯವಾಗಿದ್ದು, ಎರಡು-ಮೂರು ತಿಂಗಳಲ್ಲಿ ಸ್ಪಷ್ಟತೆ ಸಿಗಲಿದೆ. ಒಂದು ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ. ಈ ಪಕ್ಷಗಳ ಮುಖಂಡರ ಜತೆ ತೆಲಂಗಾಣ ಸಿಎಂ ಚಂದ್ರಶೇಖರರಾವ್ ಅವರು ಚರ್ಚೆ ಮಾಡುತ್ತಿದ್ದಾರೆ. ಹಿಂದಿನ ಪ್ರಯತ್ನಕ್ಕಿಂತ ಹೊಸ ರೀತಿ ಪ್ರಯತ್ನ ಮಾಡ್ತಿದ್ದಾರೆ. ದೇಶದ ಸಂಪತ್ತು ಕಡುಬಡವರಿಗೆ ತಲುಪಬೇಕು. ಸಂಪತ್ತು ದೇಶದ ಬೆಳವಣಿಗೆಗೆ ಸಹಕಾರವಾಗಬೇಕು. ಆ ನಿಟ್ಟಿನಲ್ಲಿ ಚಂದ್ರಶೇಖರ್ ರಾವ್ ಅವರು ಚರ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ದಸರಾ ವೇಳೆ ಉತ್ತಮ ನಿರ್ಧಾರ:
ದಸರಾ ಅಂದರೆ ಯುದ್ಧಕ್ಕೆ ಹೋಗುವ ಸಂದರ್ಭ. ಹಾಗಾಗಿ ದಸರಾ ವೇಳೆ ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮೂರನೇ ಶಕ್ತಿ ಇಂದು ಅನಿವಾರ್ಯವಾಗಿದೆ. ಆಗ ತೆಗೆದುಕೊಂಡ ನಿರ್ಣಯ ಬೇರೆ, ಈಗ ತೆಗೆದುಕೊಳ್ಳುವ ನಿರ್ಣಯ ಬೇರೆ. ದೇಶದ ಇತಿಹಾಸಕ್ಕೆ ಇದು ಫೌಂಡೇಷನ್ ಹಾಕಲಿದೆ. ದೇಶ ಹಲವು ಸಮಸ್ಯೆ ಎದುರಿಸುತ್ತಿದೆ. ಜನರ ಸಮಸ್ಯೆ ಮುಂದಿಟ್ಟುಕೊಂಡೇ ಹೋಗುತ್ತೇವೆ. ಎಲ್ಲರೂ ಸೇರಿಯೇ ಇದಕ್ಕೆ ಶಕ್ತಿ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಆತ್ಮೀಯ ವಾತಾವರಣ:
ಹೈದರಾಬಾದ್ನಿಂದ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಳಿದ ಕೆಸಿಆರ್ ಅವರು ನೇರವಾಗಿ ದೇವೇಗೌಡರ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ತೆಲಂಗಾಣ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.
ಬಳಿಕ ತಮ್ಮ ನಿವಾಸಕ್ಕೆ ಆಗಮಿಸಿದ ಕೆಸಿಆರ್ ಅವರನ್ನು ದೇವೇಗೌಡರು ಆತ್ಮೀಯವಾಗಿ ಬರಮಾಡಿಕೊಂಡರು. ಭೋಜನದ ನಂತರ ಇಬ್ಬರು ನಾಯಕರು ಮಾತುಕತೆಗೆ ತೆರಳಿದರು. ತೆಲಂಗಾಣ ರಾಷ್ಟ್ರ ಸಮಿತಿಯ ರಾಜ್ಯಸಭೆ ಸದಸ್ಯ ಶಾಸಕರಾದ ಸಂತೋಷ್ ಕುಮಾರ್, ಶಾಸಕರಾದ ಜೀವನ್ ರೆಡ್ಡಿ, ಜಾಜುಲ ಸುರೇಂದ್ರ, ಕೃಷ್ಣಮೋಹನ ರೆಡ್ಡಿ, ರಾಜೇಂದರ್ ರೆಡ್ಡಿ ಅವರು ಕೆಸಿಆರ್ ಜತೆಯಲ್ಲಿ ಗೌಡರ ನಿವಾಸಕ್ಕೆ ಆಗಮಿಸಿದ್ದರು.
Recommended Video