ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸುಸ್ತಾಗಿ ಹೋದ ರಾಜ್ಯದ ಜನರು
ಬೆಂಗಳೂರು, ಜು.30: ಮಳೆ ಹಾಗೂ ಬಿಸಿಲಿನ ಕಣ್ಣಾಮುಚ್ಚಾಲೆಗೆ ರಾಜ್ಯದ ಜನರು ಹೈರಾಣಾಗಿದ್ದು, ಡೆಂಗ್ಯೂ, ಚಿಕೂನ್ ಗುನ್ಯಾ ಇನ್ನಿತರೆ ರೋಗಗಳಿಂದ ತತ್ತರಿಸಿದ್ದಾರೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ. ಕಾಲರಾ, ವಿಷಮಶೀರ ಜ್ವರ, ಉದರ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ.
ಮಳೆಗಾಲ ಆರಂಭದಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ, ಆದರೆ ಈ ಮಳೆಗಾಲದಲ್ಲಿ ಈ ರೋಗಗಳಿಗಿಂತ ಕಾಲರಾ, ವಿಷಮಶೀತ ಜ್ವರವೇ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಕಳೆದ 5 ತಿಂಗಳಲ್ಲಿ 1,11,073 ಮಂದಿ ಅಸ್ವಸ್ಥರಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶದಿಂದ ತಿಳಿದುಬಂದಿದೆ.
ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?
ಮಳೆ ನೀರಿನ ಜತೆಗೆ ಕಸ ಹಾಗೂ ರಾಸಾಯನಿಕ ಪದಾರ್ಥಗಳು ಕೆರೆ, ಬಾವಿಗಳನ್ನು ಸೇರುತ್ತಿವೆ. ಇಂಥ ನೀರು ಕುಡಿದು ಅಸ್ವಸ್ಥಗೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ರಾಜ್ಯದ ಬಹುತೇಕ ಕಡೆ ಜಠರ ವ್ರಣ ಹಾಗೂ ವಿಷಮಶೀತ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ 56,769 ಮಂದಿ ಕಲುಷಿತ ನೀರು ಹಾಗೂ ಆಹಾರ ಸೇವಿಸಿ ಅಸ್ವಸ್ಥರಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. 43,620 ಮಂದಿ ಜಠರ ವ್ರಣದಿಂದ ಬಳಲಿದ್ದು,12,892 ಮಂದಿ ವಿಷಮಶೀತ ಜ್ವರ ಹಾಗೂ 244 ಜನ ವೈರಲ್ ಹೆಪಟೈಟಿಸ್ ರೋಗಕ್ಕೆ ತುತ್ತಾಗಿದ್ದಾರೆ. ಕಲಬುರಗಿಯಲ್ಲಿ 24,104 ಮಂದಿ ಸಾಂಕ್ರಾಮಿಕ ರೋಗಕ್ಕೆ ಒಳಗಾಗಿದ್ದಾರೆ. ಬೆಳಗಾವಿಯಲ್ಲಿ 19,347, ಮೈಸೂರಿನಲ್ಲಿ 13,214, ದಾವಣಗೆರೆ 10,101, ಚಿಕ್ಕಬಳ್ಳಾಪುರ 7,547, ಚಿತ್ರದುರ್ಗ 7,760, ಹಾವೇರಿ 7,150, ಯಾದಗಿರಿ 7,017, ಕೊಪ್ಪಳ 6,168 ಹಾಗೂ ಕಲಬುರಗಿಯಲ್ಲಿ 5,678 ಪ್ರಕರಣಗಳು ಬೆಳಕಿಗೆ ಬಂದಿವೆ.
ನೀವು ಕುಡಿಯುವ ನೀರು ಸುರಕ್ಷಿತವೇ?
ನೀರನ್ನು ಕುಡಿಯುವಾಗ ಒಮ್ಮೆ ಪರೀಕ್ಷಿಸಿ ಇಲ್ಲವಾದಲ್ಲಿ ನೀರನ್ನು ಖುದಿಸಿ ಕುಡಿಯುವುದು ಉತ್ತಮ. ನೀರಿನಲ್ಲಿ ಫ್ಲೊರೈಡ್ ಅಂಶ ಕಂಡುಬಂದಲ್ಲಿ ಶುದ್ಧೀಕರಿಸಿ ಕುಡಿಯಬೇಕು. ಕೊಳವೆಬಾವಿ ನೀರನ್ನು ಕಾಯಿಸಿ ತಣ್ಣಗಾದ ಬಳಿಕ ಉಪಯೋಗಿಸಿದರೆ ಉತ್ತಮ. ಬಾಟಲಿಗೆ ನಿತ್ಯವೂ ಹೊಸದಾಗಿ ನೀರು ತುಂಬಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗದಿಂದ ದೂರವಿರಬಹುದು.
ಸ್ವಚ್ಛತೆಗೆ ಆದ್ಯತೆ ನೀಡಿ
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಊಟ ಹಾಗೂ ತಿಂಡಿ ಸೇವಿಸುವಾಗ ಕೈ ತೊಳೆಯುವುದನ್ನು ಮರೆಯಬಾರದು. ಮೂಗು, ಬಾಯಿ ಅಥವಾ ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದಲೂ ವೈರಸ್ಗಳು ದೇಹ ಪ್ರವೇಶಿಸುವ ಸಾಧ್ಯತೆಯಿರುತ್ತದೆ. ಶೌಚಕ್ಕೆ ಹೋಗಿ ಬಂದ ಬಳಿಕ, ಸಾಕುಪ್ರಾಣಿಗಳನ್ನು ಮುಟ್ಟಿದ ನಂತರ, ಕಸ ಎಸೆದ ಬಳಿಕ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಶುದ್ಧವಾದ ಬಟ್ಟೆಯಿಂದ ಒರೆಸಿಕೊಳ್ಳಿ.
ಕಳೆದ 5 ತಿಂಗಳಲ್ಲಿ ಅತ್ಯಧಿಕ
ಕಳೆದ 5 ತಿಂಗಳಲ್ಲಿ ಗ್ಯಾಸ್ಟ್ರೋಎಂಟರೈಟಿಸ್ನಿಂದ (ಜಠರ ಮತ್ತು ಕರುಳಿನ ಉರಿಯೂತ) 70,315 ಮಂದಿ ಅಸ್ವಸ್ಥರಾಗಿದ್ದು, 3 ಮಂದಿ ಮೃತಪಟ್ಟಿದ್ದಾರೆ. ವೈರಲ್ ಹೆಪಟೈಟಿಸ್ಗೆ 2,548 ಮಂದಿ ಅಸ್ವಸ್ಥರಾಗಿದ್ದು, ಓರ್ವ ವ್ಯಕ್ತಿ ಮರಣ ಹೊಂದಿದ್ದಾನೆ. ವಿಷಮಶೀತ ಜ್ವರದಿಂದ 38,195 ಹಾಗೂ ಕಾಲರಾದಿಂದ 15 ಮಂದಿ ಅಸ್ವಸ್ಥರಾಗಿದ್ದಾರೆ, ಮೂವರು ಅಸುನೀಗಿದ್ದಾರೆ.
ಆರೋಗ್ಯವಾಗಿರಲು ಹೀಗೆ ಮಾಡಿ
ಶುಚಿ, ಬಿಸಿ ಆಹಾರ ಸೇವಿಸಿರಿ.ನೀರನ್ನು ಕುದಿಸಿ ಕುಡಿಯುವುದನ್ನು ರೂಢಿಸಿಕೊಳ್ಳಿಮನೆ ಸುತ್ತಮುತ್ತ ನೀರು ನಿಲ್ಲದಂತೆ ನೊಡಿಕೊಳ್ಳಿ. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಿ.ಮಲಗುವಾಗ ಸೊಳ್ಳೆ ಪರದೆ ಬಳಸುವುದನ್ನು ಮರೆಯದಿರಿ.ಸ್ನಾನ ಮಾಡಿದ ಬಳಿಕ, ಮಳೆಯಲ್ಲಿ ನೆನೆದಾಗ ತಲೆಯನ್ನು ಒಣಬಟ್ಟೆಯಲ್ಲಿ ಚೆನ್ನಾಗಿ ಒರೆಸಿಕೊಳ್ಳಬೇಕು.ಕೈ-ಕಾಲು ಬೆರಳು ಸಂಧಿಯಲ್ಲಿ ಚರ್ಮ ಬಿಳಿಯಾಗಿ ಕಿತ್ತು ಹೊಗುವಂತಿದ್ದರೆ ಬೆರಳು ತೊಳೆದು, ಬಟ್ಟೆಯಿಂದ ಚೆನ್ನಾಗಿ ಒರೆಸಿ, ಪೌಡರ್ ಹಾಕಿಕೊಳ್ಳಬೇಕು.ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.