ವರ್ಷ 4 ಕಳೆದರೂ ಅಮಾನ್ಯ ನೋಟುಗಳ ದಂಧೆ ಇನ್ನೂ ಜೀವಂತ: ಯಾರು ಈ ತೆರೆಯ ಹಿಂದಿನ ಕಿಂಗ್ ಪಿನ್?
ಬೆಂಗಳೂರು, ಆ 1: ನವೆಂಬರ್ 08, 2016ರಂದು, ಮೇರೆ ಪ್ಯಾರೇ ದೇಶ್ ವಾಸಿಯೋ ಎಂದು ಪ್ರಧಾನಿ ನರೇಂದ್ರ ಮೋದಿ, ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬ್ಯಾನ್ ಮಾಡಿ, ಇಂದಿಗೆ, ಹೆಚ್ಚುಕಮ್ಮಿ ನಾಲ್ಕು ವರ್ಷಗಳಾಗುತ್ತಾ ಬಂತು. ಆದರೆ..
ನೋಟುಗಳ ಅಪನಗದೀಕರಣಗೊಂಡ ನಂತರ, ಇಂತಿಷ್ಟು ಕಮಿಷನ್ನಿಗೆ ಹಳೇ ನೋಟಿಗೆ, ಹೊಸ ನೋಟು ಕೊಡುವ ಅಡ್ಡದಾರಿಯನ್ನು ಹಿಡಿದವರು, ಕೋಟ್ಯಾಧಿಪತಿಗಳಾದರು ಎನ್ನುವ ಸುದ್ದಿಯನ್ನು ಬಹಳಷ್ಟು ಕೇಳಿದ್ದಾಗಿದೆ.
ಅಮೆರಿಕದಲ್ಲಿ ಟಿಕ್ಟಾಕ್ ಬ್ಯಾನ್: ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಅದೆಲ್ಲಾ ಆಗಿದ್ದು ಒಂದು ಕಾಲನಿಮಿತದಲ್ಲಿ. ಆದರೆ, ನೋಟ್ ಬ್ಯಾನ್ ಆಗಿ ಈಗ ವರ್ಷ ನಾಲ್ಕು ಮುಗಿಯುತ್ತಾ ಬಂದರೂ, ಈ ದಂಧೆ ಇನ್ನೂ ಜೀವಂತವಾಗಿದೆ ಎಂದರೆ ನಂಬಲೇ ಬೇಕು. ಯಾಕೆಂದರೆ, ಬೆಂಗಳೂರು ನಗರದಲ್ಲಿ ಕಳೆದೆರಡು ದಿನಗಳಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಗಳು, ಈ ಮಾತನ್ನು ಸತ್ಯವಾಗಿಸುತ್ತದೆ.
ಮನೆಯಲ್ಲಿ ಬಚ್ಚಿಟ್ಟ ಹಳೇ ನೋಟುಗಳು ಈಗ ವೇಸ್ಟ್ ಪೇಪರ್ ಗಳಾಗಿದ್ದರೂ, ಈ ದಂಧೆಯನ್ನೇ ಕೆಲವರು ಈಗಲೂ ನಡೆಸುತ್ತಿದ್ದಾರೆಂದರೆ, ಅಂತಿಂತವರ ನೆರಳಿಲ್ಲದೇ ಇದನ್ನು ನಡೆಸುವುದಾದರೂ ಹೇಗೆ ಸಾಧ್ಯ? ಹಾಗಿದ್ದರೆ ಈ ದಂಧೆಯ ಹಿಂದಿನ ಪ್ರಳಯಾಂತಕರು ಯಾರಿರಬಹುದು? ಇನ್ನೂ ಹೊರಗೆ ಬರದ ಹಳೆಯ ನೋಟುಗಳ ಸಂಖ್ಯೆ ದೇಶದಲ್ಲಿ ಎಷ್ಟಿರಬಹುದು? ವರದಿಯಾದ ಎರಡು ಪ್ರಕರಣಗಳು:
ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕ
ಮಾಗಡಿ ರಸ್ತೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದರು
ಪ್ರಕರಣ 1: ಜುಲೈ 28ರಂದು, ಮಾಗಡಿ ರಸ್ತೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಮೂವತ್ತು ಲಕ್ಷ ಹಳೆಯ ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದ ಈ ಮೂವರನ್ನು ಜಾಲಹಳ್ಳಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಈ ಮೂವರ ಹಿಂದೆ, ಇನ್ನಿಬ್ಬರಿದ್ದಾರೆ, ಅವರು ಪರಾರಿಯಾಗಿದ್ದಾರೆ. ರಿಸರ್ವ್ ಬ್ಯಾಂಕ್ ಅಧಿಕಾರಿಗಳು ನಮಗೆ ಪರಿಚಯ ಎಂದು ಬಂಧಿತ ಮೂವರು ಆರೋಪಿಗಳನ್ನು, ಪರಾರಿಯಾದವರು ನಂಬಿಸಿದ್ದಾರೆ. "ತಲೆಮರೆಸಿಕೊಂಡಿರುವ ಇಬ್ಬರು ಸಿಕ್ಕರೆ, ಎಲ್ಲಾ ವಿಚಾರ ಬಯಲಾಗಲಿದೆ"ಎಂದು ಡಿಸಿಪಿ (ಉತ್ತರ) ಶಶಿಕುಮಾರ್ ಹೇಳಿದ್ದಾರೆ.
ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ
ಪ್ರಕರಣ 2: ಜುಲೈ 30ರಂದು ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಇವರಿಂದ 96 ಲಕ್ಷ ರೂಪಾಯಿ ಮೌಲ್ಯದ ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಬಂಧಿತರ ಹಿಂದೆ ಕೇರಳ ಮೂಲದ ವ್ಯಕ್ತಿಯ ಛಾಯೆಯಿದೆ.
ಹಳೆಯ ನೋಟಿಗೆ, ಹೊಸ ನೋಟು
ಹಳೆಯ ನೋಟಿಗೆ, ಹೊಸ ನೋಟು ಕೊಡುವ ಈ ದಂಧೆಗೆ ಯಶವಂತಪುರ ಪೊಲೀಸರಿಂದ ಬಂಧಿತರಾದವರು ತಮಗೆ ಶೇ.20 ಕಮಿಷನ್ ಸಿಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ, ಹಳೇ ನೋಟು ಎಷ್ಟೇ ಇರಲಿ, ಅದನ್ನು ತೆಗೆದುಕೊಳ್ಳುತ್ತೇವೆ ಎಂದು ಕೇರಳ ಮೂಲದ ವ್ಯಕ್ತಿಗಳಿಬ್ಬರು ಆಫರ್ ನೀಡಿದ್ದಾರೆಂದು ವರದಿಯಾಗಿದೆ. ಕೇರಳ ಮೂಲದ ವ್ಯಕ್ತಿ ಯಾರು ಎನ್ನುವುದು ಇನ್ನೂ ಬಹಿರಂಗಗೊಳ್ಳಬೇಕಿದೆ.
ಅಮಾನ್ಯ ನೋಟುಗಳ ದಂಧೆ ಇನ್ನೂ ಜೀವಂತ: ತೆರೆಯ ಹಿಂದಿನ ಪ್ರಳಯಾಂತಕ?
ಈ ರೀತಿಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಲ್ಲಿ ಸಂಶಯ ಮೂಡುವ ವಿಚಾರ ಏನಂದರೆ, ಹಳೇ ನೋಟಿಗೆ, ಹೊಸ ನೋಟು ಇನ್ನೂ ಎಕ್ಸ್ ಚೇಂಜ್ ಆಗುತ್ತಿದೆಯೇ? ಹಾಗಿದ್ದರೆ, ಇದಕ್ಕೆ ಉನ್ನತ ಮಟ್ಟದಲ್ಲಿ ಪ್ರಭಾವಿಶಾಲಿಗಳಿಲ್ಲದಿದ್ದರೇ ಇದು ಸಾಧ್ಯವೇ? ಹಾಗಿದ್ದರೆ ಇದರ ಹಿಂದಿನ ಕಿಂಗ್ ಪಿನ್ ಯಾರು? ಕೊನೆಗೆ, ಇದ್ಯಾವುದೂ ಅಲ್ಲದಿದ್ದರೆ, ಹಳೇ ನೋಟನ್ನು ಯಾವ ಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ? ಈ ರೀತಿಯ ಪ್ರಶ್ನೆಗಳಿಗೆ, ಕಠಿಣ ಪೊಲೀಸ್ ವಿಚಾರಣೆಯಿಂದ ಮಾತ್ರ ಉತ್ತರ ಹೊರಬರಲು ಸಾಧ್ಯ.