ಕೆಇಎನಲ್ಲಿ 20 ಹುದ್ದೆ ಮಂಜೂರು, ಅನುಮತಿಗೆ ಪ್ರಸ್ತಾವನೆ ಸಲ್ಲಿಕೆ: ಅಶ್ವಥ್ ನಾರಾಯಣ್
ಬೆಂಗಳೂರು, ಡಿಸೆಂಬರ್ 01: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಹೊಸ ಸ್ಪರ್ಶ ಕೊಡಲಾಗಿದೆ. ಕೆಇಎನಲ್ಲಿ ನೇಮಕಾತಿ ವಿಭಾಗ ಮತ್ತು ಸೀಟು ಹಂಚಿಕೆ ವಿಭಾಗಗಳನ್ನು ಸೃಷ್ಟಿಸಿ, 20 ಹೊಸ ಹುದ್ದೆ ಮಂಜೂರು ಮಾಡಲಾಗಿದೆ. ಇದಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಿಂದ ನಡೆದ 'ಸುಶಾಸನ ಮಾಸ' ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಓಪನ್?
ನೀಟ್ ಪರೀಕ್ಷೆ ನಂತರ ಉಂಟಾದ ಗೊಂದಲಗಳನ್ನು ನಿವಾರಿಸಲು ಚಿಂತನೆ ನಡೆದಿದೆ. ಅದರ ಭಾಗವಾಗಿ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆಯನ್ನು ಮತ್ತಷ್ಟು ಸರಳಗೊಳಿಸಲಿದ್ದೇವೆ. ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆ ಇನ್ನಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.
ಸ್ಕಿಲ್ ಕನೆಕ್ಟ್ ಪೋರ್ಟಲ್ಗೆ ಹೊಸ ರೂಪ
ಆಧುನಿಕ ಕಾಲಘಟ್ಟದಲ್ಲಿ ಕಲಿಕೆಯಲ್ಲಿ ಕೌಶಲ್ಯ ಅತ್ಯಗತ್ಯವಾಗಿದೆ. ಈ ಕಾರಣದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆಯ ಸ್ಕಿಲ್ ಕನೆಕ್ಟ್ ಪೋರ್ಟಲ್ಗೆ ಸಹ ಹೊಸ ರೂಪ ಕೊಡಲಾಗಿದೆ. ಇದರಿಂದ ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರ ನಡುವೆ ಸಕ್ರಿಯ ಸಂಬಂಧ ಸಾಧ್ಯವಾಗಲಿದೆ.
ಐಟಿಐ ಅಂಕಪಟ್ಟಿಗಳ ಡಿಜಿಟಲೀಕರಣ ಮತ್ತು ಅವುಗಳನ್ನು ರಾಷ್ಟ್ರೀಯ ಶೈಕ್ಷಣಿಕ ಮಟ್ಟಕ್ಕೆ ಅಪ್ಲೋಡ್ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು 60 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಕಂಪನಿಯ ವತಿಯಿಂದ ಉತ್ಕೃಷ್ಟ ತರಬೇತಿ ಕೊಡಿಸಲು ನಿರ್ಧರಿಸಿದ್ದೇವೆ ಎಂದರು.
ಪೋರ್ಟಲ್ನಿಂದ ಏಕಕಾಲಕ್ಕೆ ಹೆಚ್ಚು ಕೆಲಸ
ಸ್ಕಿಲ್ ಕನೆಕ್ಟ್ ಪೋರ್ಟಲ್ ಅಡಿಯಲ್ಲಿ ಇಂಗ್ಲಿಷ್ ಕಲಿಕೆ ಲ್ಯಾಬ್ಗಳ ಸ್ಥಾಪನೆ, ಜಪಾನಿಸ್ ಭಾಷೆ ಕಲಿಕೆಗೆ ಅವಕಾಶ, ಲೋಕೋಸ್ ತಂತ್ರಾಂಶದ ಮೂಲಕ ಸ್ವಸಹಾಯ ಸಂಘಗಳ ಮಾಹಿತಿ, ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲು ನೆರವಾಗಲಿದೆ. 10 ಸಾವಿರ ಜನರಿಗೆ ಏಕಕಾಲದಲ್ಲಿ ನೇಮಕಾತಿ ಪತ್ರ ವಿತರಿಸಬಹುದಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬಾಗಲಕೋಟೆ, ಕೊಪ್ಪಳ, ದಾವಣಗೆರೆಗಳಲ್ಲಿ ನಿರ್ಮಿಸುತ್ತಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಗದಗಿನ ಮಿನಿ ತಾರಾಲಯವನ್ನು ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ಅತ್ಯುನ್ನತ 5 ಸಂಸ್ಥೆ ಜತೆ ಒಡಂಬಡಿಕೆಗೆ
ಸುಶಾಸನ ಮಾಸಾಚರಣೆಯಲ್ಲಿ ಟ್ಯಾಲೆನ್ಷೀಯಾ ಗ್ಲೋಬಲ್, ಇನ್ನೋವ್ಸೋರ್ಸ್, ಫ್ಯೂಯೆಲ್, ಎಐಎಸ್ಇಸಿಟಿ ಮತ್ತು ಇನ್ಫಿಕ್ವಿಟಿ ಆಟೋ ಟೆಕ್ನಾಲಜೀಸ್ ಕಂಪನಿಗಳ ಜತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಒಪ್ಪಂದಗಳಿಗೆ ಸಹಿ ಹಾಕಿದರು.
ಟ್ಯಾಲೆನ್ಷಿಯಾ ಕಂಪನಿಯು ಮೂರು ವರ್ಷಗಳಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ 1,500 ಜನರಿಗೆ ಉದ್ಯೋಗ ನೀಡಿದೆ. ಜೊತೆಗೆ ಅಷ್ಟೇ ಸಂಖ್ಯೆಯ ಜನರಿಗೆ ಉದ್ಯೋಗ ತರಬೇತಿ ನೀಡಿದೆ. ಇನ್ನೋವ್ಸೋರ್ಸ್ ಕಂಪನಿಯು ರಾಜ್ಯದ 1.20 ಲಕ್ಷ ಅರ್ಹರಿಗೆ, ಫ್ಯೂಯೆಲ್ ಕಂಪನಿಯು 19 ಸಾವಿರ ತಂತ್ರಜ್ಞರಿಗೆ ಮತ್ತು ಕೆಲವು ಕ್ಷೇತ್ರಗಳ 6 ಸಾವಿರ ಜನರಿಗೆ (ಒಟ್ಟು 25,000) ಎಐಎಸ್ಇಸಿಟಿ ಕಂಪನಿಯು ರಾಜ್ಯದ 6 ಸಾವಿರ ಅಭ್ಯರ್ಥಿಗಳಿಗೆ ಮತ್ತು ಇನ್ಫಿಕ್ವಿಟಿ ಕಂಪನಿಯು 250 ಜನರಿಗೆ ಉದ್ಯೋಗಾವಕಾಶ ಒಸಗಿಸಿದೆ ಎಂದು ಪ್ರದೀಪ ವಿವರಿಸಿದರು.
ವಿವಿಗಳಲ್ಲಿ ಕನಿಷ್ಠ 1ಕೋರ್ಸ್ ಆನ್ಲೈನ್
ರಾಜ್ಯ ವಿಶ್ವವಿದ್ಯಾಲಯಗಳಲ್ಲಿ 2023ರ ಮಾರ್ಚ್ ವೇಳೆಗೆ ಕನಿಷ್ಠ ಪಕ್ಷ ಒಂದು ಡಿಗ್ರಿ ಕೋರ್ಸಾದರೂ ಆನ್ಲೈನ್ ರೂಪದಲ್ಲಿ ಆರಂಭವಾಗಲಿದೆ. ಈ ತಿಂಗಳ ಕೊನೆಯ ವೇಳೆಗೆ ಪ್ರತಿ ವಿಶ್ವವಿದ್ಯಾಲಯ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಜತೆಗೆ 3 ತಿಂಗಳಲ್ಲಿ ಕನಿಷ್ಠ ಪಕ್ಷ 5 ಉದ್ಯಮ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಅಶ್ವಥ್ ನಾರಾಯಣ್ ವಿವರಿಸಿದರು.
ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿಯಾಗಿದೆ. ಇದು ಸಾರ್ವಜನಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನವಾಗಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಒತ್ತು ಕೊಡಲಾಗಿದೆ ಎಂದರು.