ಗೌರಿ ಹತ್ಯೆ ಆರೋಪಿಗೆ ಎಸ್ಐಟಿ ಹಿಂಸೆ: ನ್ಯಾಯಾಲಯಕ್ಕೆ ದೂರು
ಬೆಂಗಳೂರು, ಜುಲೈ 27: ಗೌರಿ ಹತ್ಯೆ ಆರೋಪಿಗೆ ಎಸ್ಐಟಿ ಪೊಲೀಸರು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಎಸ್ಐಟಿ ಪೊಲೀಸರು ಇತ್ತೀಚೆಗೆ ತುಮಕೂರಿನಲ್ಲಿ ಬಂಧಿಸಿದ ಸುರೇಶ್.ಎಚ್.ಎಲ್ ಅವರ ವಕೀಲರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು. ಎಸ್ಐಟಿ ಪೊಲೀಸರು 'ತಪ್ಪು ಒಪ್ಪಿಕೊಳ್ಳುವಂತೆ ತಮ್ಮ ಕಕ್ಷೀದಾರನ ಮೇಲೆ ಹಿಂಸಾತ್ಮಕ ಒತ್ತಡ ಹೇರಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!
ಸುರೇಶ್ ಅವರಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದು ಆತನಿಗೆ ಹಿಂಸೆ ನಿಡಿದ್ದಾರೆ. ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಬೆದರಿಸಿದ್ದಾರೆ. ಸುರೇಶ್ ಅವರ ಎಡದವಡೆ ಊದಿಕೊಂಡಿದ್ದು ಅವರು ಮಾತನಾಡದಂತಾಗಿದೆ ಎಂದು ಅವರು ಹೇಳಿದ್ದಾರೆ.
ಸುರೇಶ್ ದವಡೆಗೆ ಪೆಟ್ಟು
ಸುರೇಶ್ ಅವರು ನ್ಯಾಯಾಧೀಶರ ಬಳಿ ಸಹ ಮಾತನಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿ ವೈದ್ಯಕೀಯ ವರದಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.
ಸುರೇಶ್ ಅತ್ಯಂತ ಪ್ರಮುಖ ಆರೋಪಿ
ಎಸ್ಐಟಿಯು ಈ ಆಪಾದನೆಯನ್ನು ತಳ್ಳಿ ಹಾಕಿದೆ. ಸುರೇಶ್ ಅತ್ಯಂತ ಪ್ರಮುಖ ಸಾಕ್ಷಿಯಾಗಿದ್ದು. ಆತನಿಗೆ ಹತ್ಯೆಯ ಬಗ್ಗೆ ಮಾಹಿತಿ ಗೊತ್ತಿತ್ತು ಹಾಗೂ ಹತ್ಯೆಯ ಅರಿವಿದ್ದರೂ ಹಂತಕರಿಗೆ ಆತ ತನ್ನ ಮನೆಯನ್ನು ಬಾಡಿಗೆಗೆ ನೀಡಿದ್ದ ಎಂದು ಆವರು ಹೇಳಿದ್ದಾರೆ.
ಬೈಕ್ ಮತ್ತು ಬಂದೂಕಿನ ಬಗ್ಗೆ ಸುರೇಶ್ಗೆ ಗೊತ್ತಿದೆ
ಸುಳ್ಯದಲ್ಲಿ ಬಂಧಿಸಲಾಗಿದ್ದ ಪರಮೇಶ್ವರ್ ನಾಯಕ್ ಸುರೇಶ್ ಬಗ್ಗೆ ನಿಖರ ಮಾಹಿತಿ ನೀಡಿದ್ದು, ಹತ್ಯೆ ದಿನ ಬಳಸಿದ ವಾಹನವನ್ನು ಸುರೇಶನೇ ವ್ಯವಸ್ಥೆ ಮಾಡಿದ್ದ ಹಾಗಾಗಿ ಆತನಿಗೆ ಹತ್ಯೆ ದಿನ ಬಳಸಿದ್ದ ಬೈಕ್ ಮತ್ತು ಬಂದೂಕು ಎಲ್ಲಿದೆ ಎಂಬುದು ಗೊತ್ತಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಹತ್ಯೆ ಬಗ್ಗೆ ಪೂರ್ಣ ಮಾಹಿತಿ ಸುರೇಶ್ಗಿದೆ
ಎಸ್ಐಟಿ ಪ್ರಕಾರ ಸುರೇಶ್ ಅತ್ಯಂತ ಪ್ರಮುಖ ಸಾಕ್ಷ್ಯವಾಗಿದ್ದು ಆತನಿಗೆ ಹತ್ಯೆಯ ಪೂರ್ಣ ಮಾಹಿತಿ ಮೊದಲೇ ಇತ್ತು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಎಸ್ಐಟಿಯು ನಾಲ್ಕು ಜನರನ್ನು ಬಂಧಿಸಿದ್ದು. ಸುರೇಶ್ ಅವರನ್ನು ತುಮಕೂರಿನಲ್ಲಿ ಬಂಧಿಸಿದ್ದರು.
ಸನಾತನ ಸಂಸ್ಥೆಯ ಸದಸ್ಯ ಸುರೇಶ್
ಬಂಧಿತ ಸುರೇಶ್ನಿಗೆ ಸನಾತನ ಸಂಸ್ಥೆಯೊಂದಿಗೆ ನಿಕಟ ಸಂಬಂಧ ಇದೆ ಎಂದು ಎಸ್ಐಟಿ ಹೇಳಿದೆ. ಗೋವಾದಲ್ಲಿ ನಡೆದ ಹಿಂದೂ ಕಾರ್ಯಕ್ರಮದಲ್ಲಿ ಆತ ಭಾಗವಹಿಸಿದ್ದ. ಅಲ್ಲದೆ ಅಮೋಲ್ ಕಾಳೆ ಹಾಗೂ ಮನೋಹರ ಯಡವೆ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.