ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?
ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿ ಎಂಬ ಕೂಗು ಇಂದು ನಿನ್ನೆಯದಲ್ಲ. ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವ ಬಂದ ನಂತರ ಆ ಕೂಗು ಮತ್ತೆ ಆರಂಭವಾಗಿದೆ.
ಹೊಸ ಸರ್ಕಾರದ ಸಂಪುಟದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ಸ್ಥಾನ ಸಿಕ್ಕದಿರುವುದು ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದಿರುವುದು ಪ್ರತ್ಯೇಕ ರಾಜ್ಯದ ಹೋರಾಟದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಪ್ರತ್ಯೇಕ ರಾಜ್ಯ: ಆಗಸ್ಟ್ 2ರಂದು ಉತ್ತರ ಕರ್ನಾಟಕ ಬಂದ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಈ ಹಿನ್ನೆಲೆಯಲ್ಲಿ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆನೀಡಿದೆ. ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳು ಈ ಬಂದ್ ಗೆ ಬೆಂಬಲ ನೀಡಲಿದೆ. ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳೂ ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದು ಈ ಹೋರಾಟ ತೀವ್ರ ಸ್ವರೂಪ ಪಡೆಯುವಂತೆ ಮಾಡಿದರೆ ಅಚ್ಚರಿಯಿಲ್ಲ.
ಪ್ರತ್ಯೇಕ ರಾಜ್ಯ ಹೋರಾಟ ನೇತೃತ್ವ ವಹಿಸಲು ಸಿದ್ಧ: ಶ್ರೀರಾಮುಲು
ಅಷ್ಟಕ್ಕೂ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಬೇಡಿಕೆ ಯಾಕಾಗಿ? ಆಗಸ್ಟ್ 2 ರಂದು ಕರೆ ನೀಡಿರುವ ಬಂದಿಗೆ ಕಾರಣವೇನು? ಯಾವೆಲ್ಲ ರಾಜಕಾರಣಿಗಳು ಈ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ? ಇಲ್ಲಿದೆ ಮಾಹಿತಿ...
ಏನಿದು ಪ್ರತ್ಯೇಕ ರಾಜ್ಯದ ಕೂಗು?
ರಾಜಧಾನಿ ಬೆಂಗಳೂರು ದಕ್ಷಿಣ ಕರ್ನಾಟಕ ಭಾಗದಲ್ಲಿ ಬರುವುದರಿಂದ ಪೂರ್ತಿ ಆಡಳಿತದ ಕೇಂದ್ರ ಅಲ್ಲಿಯೇ ಇದೆ. ಯಾರೇ ಮುಖ್ಯಮಂತ್ರಿಗಳಾಗಿ ಬಂದರೂ ದಕ್ಷಿಣ ಕರ್ನಾಟಕ ಭಾಗಕ್ಕೆ ನೀಡಿದಷ್ಟು ಸೌಲಭ್ಯವನ್ನು, ಕೊಡಗೆಯನ್ನು ಉತ್ತರ ಕರ್ನಾಟಕ ಭಾಗಕ್ಕೆ ನೀಡುತ್ತಿಲ್ಲ. ಸದಾ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಆ ಕಾರಣದಿಂದಲೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದರಿಂದ ಆಡಳಿತ ಯಂತ್ರವೂ ಉತ್ತರ ಕರ್ನಾಟಕದಲ್ಲೇ ಇದ್ದಂತಾಗುತ್ತದೆ. ಆಗ ಈ ಭಾಗ ಅಭಿವೃದ್ಧಿಯೂ ಆಗುತ್ತದೆ ಎಂಬುದು ಇಲ್ಲಿನ ಜನರ ಅಂಬೋಣ.
ಉತ್ತರ ಕರ್ನಾಟಕ ಜಿಲ್ಲೆಗಳು ಯಾವವು?
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳ ಈ 12 ಜಿಲ್ಲೆಗಳು ಉತ್ತರ ಕರ್ನಾಟಕ ವ್ಯಾಪ್ತಿಗೆ ಬರುತ್ತವೆ.
ಸುವರ್ಣ ಸೌಧ ನಿರ್ಮಿಸಿದ್ದೇಕೆ?
ಉತ್ತರ ಕರ್ನಾಟಕಕ್ಕೂ ಪ್ರಾಶಸ್ತ್ಯ ನೀಡಬೇಕು ಎಂಬ ಕಾರಣದಿಂದಲೇ ಬೆಳಗಾವಿಯಲ್ಲಿ ಸುವರ್ಣಸೌಧವನ್ನು ನಿರ್ಮಿಸಲಾಯ್ತು. ಆದರೆ ಉತ್ತರ ಕರ್ನಾಟಕದ ಸಮಸ್ಯೆ ಮಾತ್ರ ಇದರಿಂದ ಪರಿಹಾರವಾಗಿಲ್ಲ. ರಾಜ್ಯದ ಮುಖ್ಯಮಂತ್ರಿಗಳೆಲ್ಲ ಬಹುಪಾಲು ದಕ್ಷಿಣ ಕರ್ನಾಟಕ ಭಾಗದವರೇ ಆಗಿರುವುದರಿಂದ ಅವರೆಲ್ಲ ಆ ಭಾಗಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದ ನಂಜುಂಡಪ್ಪ ವರದಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯಿಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಮಹದಾಯಿ ಹೋರಾಟಕ್ಕಿಲ್ಲ ಬೆಲೆ!
ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ನೀರು ಒದಗಿಸುವ ಮಹದಾಯಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಈ ಕುರಿತು ಅದೆಷ್ಟು ಬಂದ್ ಗಳು, ಹೋರಾಟಗಳು ನಡೆದರೂ ಸರ್ಕಾರ ತಲೆಕೆಡಿಸಿಕೊಂಡಂತಿಲ್ಲ. 'ಕಾವೇರಿ ವಿವಾದ'ದ ವಿಷಯದಲ್ಲಿ ತೋರಿದ ಉತ್ಸಾಹವನ್ನು ಮಹದಾಯಿ ವಿಷಯದಲ್ಲಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪಾಪು ಬೆಂಬಲ
ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. 'ರಾಜ್ಯ ಸರ್ಕಾರ ಮೈಸೂರು ಭಾಗಕ್ಕಾಗಿಯೇ ರಚನೆಯಾದಂತಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸುವವರೆಗೂ ನಮ್ಮ ಹೋರಾಟ ನಡೆಯುತ್ತದೆ. ಪ್ರತ್ಯೇಕ ರಾಜ್ಯದ ಧ್ವನಿ ಗಟ್ಟಿಯಾಗುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಹೇಳಿದ್ದಾರೆ.
ಹೋರಾಟದ ನೇತೃತ್ವಕ್ಕೆ ಶ್ರೀರಾಮುಲು ರೆಡಿ!
ಮೊಳಕಾಲ್ಮೂರು ಶಾಸಕ, ಬಿಜೆಪಿ ನಾಯಕ ಶ್ರೀರಾಮುಲು ಅವರು ಸಹ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡಿದ್ದು, ಈ ಭಾಗದ ಜನರಿಗೆ ಅನ್ಯಾಯವಾದರೆ ರಾಜೀನಾಮೆಗೂ ಸಿದ್ಧ. ಈ ಅನ್ಯಾಯ ಮುಂದುವರಿಯಲು ಬಿಡುವುದಿಲ್ಲ. ಪ್ರತ್ಯೇಕ ರಾಜ್ಯದ ಹೋರಾಟದ ಮುಂದಾಳತ್ವ ವಹಿಸಲು ನಾನು ಸಿದ್ಧ ಎಂದಿದ್ದಾರೆ.
ಯಡಿಯೂರಪ್ಪ ಏನಂತಾರೆ?
ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಖಂಡ ಕರ್ನಾಟಕ ಒಡೆಯಬಾರದು. ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಲಾಗಿದೆ ಎಂಬ ಮಾತಿನಲ್ಲಿ ಹುರುಳಿದೆ. ಆದ್ದರಿಂದ ಈ ಕುರಿತು ಸರ್ಕಾರದ ಗನ ಸೆಳೆಯುವ ಪ್ರಯತ್ನ ಮಾಡೋಣ. ಪ್ರತ್ಯೇಕ ರಾಜ್ಯವೇ ಎಲ್ಲಾ ಸಮಸ್ಯೆಗೂ ಪರಿಹಾರವಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.