ಮುಜರಾಯಿ ದೇಗುಲ: ಶಾಸಕರಿಗೆ 40 ಲಕ್ಷ ದೇಣಿಗೆ
ಪಕ್ಷ ಯಾವುದೇ ಆದರೂ ಎಲ್ಲ ಶಾಸಕರಿಗೂ ಅವರವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುಜರಾಯಿ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಈ ದೇಣಿಗೆ ಪಡೆಯಲಿದ್ದಾರೆ ಎಂದು ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ವಿಧಾನಪರಿಷತ್ತಿನಲ್ಲಿ ಸೋಮವಾರ ಹೇಳಿದ್ದಾರೆ.
'ವಿಧಾನಸಭೆ ಸದಸ್ಯರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ವಿಧಾನಪರಿಷತ್ ಸದಸ್ಯರಿಗೆ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಜತೆಗೆ, ಪಕ್ಷವನ್ನು ಆಧರಿಸಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ' ಎಂದು ಬಿಜೆಪಿ ಸದಸ್ಯ ವಿಜಯ್ ಶಂಕರ್ ಅವರು ಗಂಭೀರ ಆರೋಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು 'ಸದಸ್ಯರ ನಡುವೆ ಯಾವುದೇ ಭೇದಭಾವ ಮಾಡಿಲ್ಲ. ಎಲ್ಲ ಸದಸ್ಯರಿಗೂ ಅನುದಾನ ನೀಡಲಾಗುವುದು' ಎಂದು ಹೇಳಿದರು.
'ಶಾಸಕರು ತಮ್ಮ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿಗೆ ಎಷ್ಟು ಅನುದಾನ ಬೇಕು ಎಂಬ ಬಗ್ಗೆ ವಿವರವನ್ನು ಕಳುಹಿಸಿದರೆ ಇಲಾಖೆಯು ತಕ್ಷಣ ಅದನ್ನು ಪರಿಶೀಲಿಸಿ, ಅನುದಾನ ಬಿಡುಗಡೆ ಮಾಡಲಿದೆ' ಎಂದು ಮುಜರಾಯಿ ಸಚಿವರು ಸ್ಪಷ್ಟಪಡಿಸಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ 617 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಜರಾಯಿ ಮತ್ತು ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ 2010-11ರಲ್ಲಿ 2939 ದೇವಾಲಯಗಳಿಗೆ 199 ಕೋಟಿ, 2011-12ರಲ್ಲಿ 4253 ದೇವಾಲಯಗಳಿಗೆ 167 ಕೋಟಿ, ಮತ್ತು 2012-13ರಲ್ಲಿ 5835 ದೇವಾಲಯಗಳಿಗೆ 250 ಕೋಟಿ ರೂ. ಬಿಡುಡಗೆ ಮಾಡಲಾಗಿದೆ.
ರಾಜ್ಯದಲ್ಲಿ ಒಟ್ಟು 34,453 ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, 2013-14 ನೇ ಸಾಲಿನಲ್ಲಿ ಇದುವರೆಗೂ 27 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಮುಜರಾಯಿ ಸಚಿವ ಹುಕ್ಕೇರಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.