ಕಾವೇರಿ ನಿರ್ವಹಣಾ ಮಂಡಳಿ: ನಾರಿಮನ್ ಸಲಹೆ ಪಡೆದು ಮುಂದಿನ ಹೆಜ್ಜೆ
ಬೆಂಗಳೂರು, ಮಾರ್ಚ್ 09: ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಹಾಗೂ ಮುಂದೆ ರಾಜ್ಯ ಇಡಬೇಕಾದ ಹೆಜ್ಜೆಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರ ಜೊತೆಗೆ ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಮುಖಂಡರು, ರೈತ ನಾಯಕರು, ನಿರಾವರಿ ತಜ್ಞರು, ಸರ್ಕಾರ ಅಧಿಕಾರಿಗಳು, ಕಾನೂನು ತಜ್ಞರು ಭಾಗವಹಿಸಿದ್ದರು.
ಆರು ವಾರಗಳ ಒಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಗಡುವು ನಿಡಿರುವ ಕಾರಣ ಈ ಸಭೆಯನ್ನು ಕರೆಯಲಾಗಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಮತ್ತು ಕಾವೇರಿ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಪರಿಣಾಮ ಗಮಿನಿಸಿ ನಿರ್ಣಯ
ಕಾವೇರಿ ಜಲ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮಗಳನ್ನು ಗಮನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಕೆ ಬಗ್ಗೆ ರಾಜ್ಯದ ಪರ ವಕೀಲರಾದ ಫಾಲಿ ಎಸ್.ನಾರಿಮನ್ ಹಾಗೂ ಶಾಮ್ ದಿವಾನ್ ನೇತೃತ್ವದ ಕಾನೂನು ತಂಡದ ಅಭಿಪ್ರಾಯ ಪಡೆದು ನಿರ್ಧರಿಸಲು ತೀರ್ಮಾನಿಸಲಾಯಿತು.
ಕೇಂದ್ರಕ್ಕೆ ಮನವಿ
ಕಾನೂನು ಪರಿಣಿತರ ತಂಡ ನೀಡುವ ಅಭಿಪ್ರಾಯವೇ ಅಂತಿಮ. ಆನಂತರ ನಮ್ಮ ನಿಲುವನ್ನು ಕೇಂದ್ರದ ಮುಂದಿಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಅಂತರರಾಜ್ಯ ಕಾರ್ಯದರ್ಶಿಗಳ ಸಭೆ ಮುಗಿಸಿದ ಬಳಿಕ ನಾರಿಮನ್ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರಕ್ಕೆ ಮನವಿ
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಪ್ರಸ್ತಾಪವನ್ನು ಕಾವೇರಿ ಜಲ ವಿವಾದ ನ್ಯಾಯಾಧಿಕರಣದಲ್ಲಿ ಮಾಡಲಾಗಿತ್ತಾದರೂ, ಫೆಬ್ರವರಿ 16 ರಂದು ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸಿರುವುದಿಲ್ಲ ಎಂಬುದು ಗಮನಾರ್ಹ ಹಾಗಾಗಿ ಅದೇ ವಿಷಯವನ್ನು ಮುಂದಿಟ್ಟುಕೊಂಡು ನಿರ್ವಹಣಾ ಮಂಡಳಿ ರಚಸಿದಿರಲು ಕೇಂದ್ರಕ್ಕೆ ಮನವಿ.
ಸಾಧಕ ಬಾಧಕ ಪರಿಶೀಲನೆ
ತೀರ್ಪು ಹೊರಡಿಸಿದ ಆರು ವಾರಗಳೊಳಗೆ ಅಂತಾರಾಜ್ಯ ಜಲ ವಿವಾದ ಕಾಯ್ದೆ 1956ರ ಪರಿಚ್ಛೇಧ 6 (ಎ) ಪ್ರಕಾರ ವ್ಯಾಜ್ಯ ಪರಿಹಾರ ವೇದಿಕೆಯ ರಚಿಸುವ ಮೂಲಕ ಒಂದು ವ್ಯವಸ್ಥೆಯನ್ನು ರೂಪಿಸಲು ಸೂಚಿಸಲಾಗಿದೆ. ಇದರ ಸಾಧಕ ಬಾಧಕಗಳನ್ನೂ ಪರಿಶೀಲಿಸಿ ತಿಳಿಸಲು ರಾಜ್ಯ ಪರ ಕಾನೂನು ತಂಡಕ್ಕೆ ಸೂಚಿಸಲಾಗಿದೆ.
ಸಭೆಯ ಅನಿಸಿಕೆ ಆಧರಿಸಿ ನಿಲುವು
ಜಲ ಸಂಪನ್ಮೂಲ ಮಂತ್ರಾಲಯವು ಮಾರ್ಚ್ 9ರಂದು ಕಾವೇರಿ ಕಣಿವೆ ಪ್ರದೇಶ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಆ ಸಭೆಯಲ್ಲಿ ಹೊರಹೊಮ್ಮುವ ಅಭಿಪ್ರಾಯ-ಅನಿಸಿಕೆ, ಸಲಹೆ-ಸೂಚನೆಗಳನ್ನು ಆಧರಿಸಿ ರಾಜ್ಯದ ನಿಲುವನ್ನು ರೂಪಿಸಲಾಗುವುದು.
'ನೀರು ನಿರ್ವಹಣಾ ಮಂಡಳಿ ರಾಜ್ಯಕ್ಕೆ ಮಾರಕ'
ಪ್ರತಿಕೂಲ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ನೀರು ನಿರ್ವಹಣೆ ಮಂಡಳಿ ರಚನೆಗೆ ಅವಕಾಶ ನೀಡುವುದು ರಾಜ್ಯದ ಹಿತಕ್ಕೆ ಮಾರಕವಾಗಬಹುದು. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ತಿಳಿಸಿದ್ದಾಗಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ತಿಳಿಸಿದರು.