ಕನ್ನಡ 'ಎನ್ನಡ' ಎನ್ನುವ ಕೆಜಿಎಫ್ ಭಾಗದ ಉಡಾಫೆ ರಾಜಕಾರಣಿಗಳು
ಕರ್ನಾಟಕದ ಒಂದೊಂದು ಭಾಗದಲ್ಲಿ ಬೇರೆ ಬೇರೆ ಭಾಷಿಗರ ಪ್ರಾಭಲ್ಯವೇ ಜಾಸ್ತಿ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ತೆಲುಗು, ಮುಂಬೈ ಕರ್ನಾಟದಕ ಭಾಗದಲ್ಲಿ ಹಿಂದಿ, ಕೋಲಾರ ಬೆಲ್ಟ್ ನಲ್ಲಿ ತೆಲುಗು, ತಮಿಳು. ಇನ್ನು ಬೆಂಗಳೂರು ಅಂತೂ ಬಹುಭಾಷಿಗರ ತವರೂರು.
ಕನ್ನಡಿಗರು ಕನ್ನಡವನ್ನು ನಮ್ಮ ರಾಜ್ಯಕ್ಕೆ ಬಂದ ಪರಭಾಷಿಗರಿಗೆ ಕಲಿಸದೇ, ತಾವೇ ಅವರವರ ಭಾಷೆಗಳನ್ನು ಕಲಿಯುತ್ತಿರುವುದರಿಂದಲೋ ಏನೋ, ಕರ್ನಾಟಕದಲ್ಲಿ ಕನ್ನಡದ ಅಸ್ತಿತ್ವಕ್ಕಾಗಿ ಹೋರಾಟಗಳು ಅಂದಿನಿಂದಲೂ ನಿರಂತರವಾಗಿ ನಡೆದುಕೊಂಡು ಬರುತ್ತಲೇ ಇದೆ.
ಅಧಿಕೃತ ಕನ್ನಡ ಧ್ವಜಕ್ಕೆ ಆಕ್ಷೇಪ ಇಲ್ಲ ಎಂದ ಚಂಪಾ!
ಕೆಲವು ದಿನಗಳ ಹಿಂದೆ, ಕಲಬುರಗಿ ಮಹಾನಗರಪಾಲಿಕೆಯ ನಾಮಫಲಕದಲ್ಲಿ ಉರ್ದು ಭಾಷೆ ಇಲ್ಲ ಎಂದು ಕನ್ನಡದ ಬೋರ್ಡಿಗೆ ಮಸಿಬಳೆದ ಘಟನೆಗಳು ನಮ್ಮ ಮುಂದಿವೆ. ಇನ್ನು ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ಬ್ಯಾನರ್,ಬಂಟಿಂಗ್ಸ್, ಕರಪತ್ರ ಮುಂತಾದವುಗಳು ಮುದ್ರಣವಾಗುವುದೇ ಬಹುತೇಕ ತಮಿಳು ಭಾಷೆಯಲ್ಲಿ.
ಕೆಜಿಎಫ್ ಭಾಗದಲ್ಲಿ ತಮಿಳಿನಲ್ಲಿ ಯಾಕೆ ಪ್ರಿಂಟ್ ಮಾಡಿಸುತ್ತಿದ್ದೀರಾ ಕನ್ನಡದಲ್ಲಿ ಯಾಕಿಲ್ಲ ಎಂದು ಕೇಳಿದರೆ, ಇಲ್ಲಿನ ರಾಜಕಾಣಿಗಳ ಉತ್ತರವೇ ಉಡಾಫೆಯದ್ದು. ಓಲೈಕೆ ರಾಜಕಾರಣಕ್ಕಾಗಿ ಇಂತಹ ಕೆಲಸವನ್ನು ಮಾಡುವ ರಾಜಕಾರಣಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ ಅಥವಾ ರಾಜಕೀಯಕ್ಕೆ ಸಂಬಂಧಿಸಿದಂತೆ ನಡೆಯುವ ಎಲ್ಲಾ ಕಾರ್ಯಕ್ರಮಗಳ ಭಿತ್ತಿಪತ್ರಗಳು ಇಲ್ಲಿ ಮುದ್ರಣವಾಗುವುದೇ ಹೆಚ್ಚಾಗಿ ತಮಿಳಿನಲ್ಲಿ. ಇಷ್ಟು ವರ್ಷದಿಂದ ಇಲ್ಲಿನ ಜನ ಕನಿಷ್ಠ ಕನ್ನಡ ಕಲಿಯುವ ಪ್ರಯತ್ನವನ್ನೂ ಮಾಡಲಿಲ್ಲ, ಕನ್ನಡಿಗರಿಗೆ ಇದರ ಇಚ್ಚಾಶಕ್ತಿಯೂ ಕಾಣುತ್ತಿಲ್ಲ, ರಾಜಕಾರಣಿಗಳಿಗಂತೂ ಅದರ ಅವಶ್ಯಕತೆಯೂ ಇಲ್ಲ.
ಮೋದಿ ಧೂಳೀಪಟ ಜೆಡಿಎಸ್ ನಿಂದ ಮಾತ್ರ ಸಾಧ್ಯ: ಕುಮಾರಸ್ವಾಮಿ ವಾಗ್ದಾಳಿ
ಈ ವಿಚಾರದಲ್ಲಿ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರೂ, ರಾಜಕಾರಣಿಗಳಿಂದ ಸಿಗುವ ಉತ್ತರ ಇವರಿಗೆ ಕನ್ನಡ ಎಂದರೆ ಎಷ್ಟು ನಿರ್ಲಕ್ಷ್ಯ ಎನ್ನುವುದಕ್ಕೆ ಸಾಕ್ಷಿ. ತಮಿಳರು ಇಲ್ಲಿ ಜಾಸ್ತಿ, ಅದಕ್ಕಾಗಿ ತಮಿಳಿನಲ್ಲೇ ಪ್ರಿಂಟ್ ಮಾಡಿಸುತ್ತಿದ್ದೇವೆ, ಏನೀವಾಗ ಎನ್ನುವ ಉತ್ತರ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಆರ್ಪಿಐ ಪಕ್ಷದ ಮುಖಂಡರಿಂದ ಬರುತ್ತದೆ.
ಇದು ಭಾರತ, ಎಲ್ಲಾ ಭಾಷೆಯವರಿಗೂ ಇಲ್ಲಿ ಜಾಗವಿದೆ, ತಾರತಮ್ಯ ಮಾಡಬಾರದು ಎನ್ನುವ ಇಲ್ಲಿನ ಸ್ಥಳೀಯ ಮುಖಂಡರಿಗೆ, ಹಾಗಿದ್ದಲ್ಲಿ ತಮಿಳುನಾಡಿನಲ್ಲಿ ಹಿಂದಿ ಭಾಷೆಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದೀರಾ ಎಂದು ಮರುಪ್ರಶ್ನೆ ಹಾಕಿದರೆ ಅದಕ್ಕೆ ಉತ್ತರವಿಲ್ಲ.
ಸ್ಥಳೀಯ ಮುಖಂಡರ ಫೇಸ್ ಬುಕ್ ಪೋಸ್ಟಿಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೂ, ತಮಿಳಿನ ಮೇಲಿನ ಇವರ ವ್ಯಾಮೋಹ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಚುನಾವಣೆಯ ವೇಳೆ, ತಮಿಳು ಭಾಷಿಗರನ್ನು ಓಲೈಸಿಕೊಳ್ಳುವ ಪ್ರಯತ್ನ ಇನ್ನೂ ಹೆಚ್ಚಾಗುತ್ತಲೇ ಇವೆ. (ಲೇಖನದಲ್ಲಿರುವ ಚಿತ್ರ ಒಂದು ಸ್ಯಾಂಪಲ್, ಎಲ್ಲಾ ಪಕ್ಷಗಳದ್ದು ಇದೇ ಗೋಳು)