ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವೀರಶೈವ ಮಹಾಸಭಾ ಆಗ್ರಹ!
ಬೆಂಗಳೂರು, ನ. 16: ಮರಾಠ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ 'ಮರಾಠ ಅಭಿವೃದ್ಧಿ ಪ್ರಾಧಿಕಾರ' ರಚನೆ ಮಾಡಿದೆ. ಅದರ ಬೆನ್ನಲ್ಲಿಯೆ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆಯ ಹಳೆಯ ಬೇಡಿಕೆ ಮತ್ತೆ ಚರ್ಚೆಗೆ ಬಂದಿದೆ. ಲಿಂಗಾಯತ ಸಮುದಾಯದ ಬಹುದಿನದ ಬೇಡಿಕೆ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಬೇಕೆಂದು ಭಾರತ ವೀರಶೈವ ಮಹಾಸಭಾದ ಕರ್ನಾಟಕ ಯುವ ಘಟಕ ಒತ್ತಾಯ ಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಮನೋಹರ್ ಅಬ್ಬಿಗೆರೆ ಅವರು, ನೀವು ಸರ್ವ ಜನಾಂಗದ ನಾಯಕರು, ದೀನ ದಲಿತರ ಆಶಾಕಿರಣ ಎಂಬುದನ್ನು ಖಂಡಿತವಾಗಿಯೂ ವೀರಶೈವ ಮಹಾಸಭಾ ಯುವ ಘಟಕ ಒಪ್ಪುತ್ತದೆ. ಆದರೆ ನಮ್ಮ ಬಹಳ ದಿನಗಳ ಬೇಡಿಕೆಯಾದ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಆಗಾಗ ನಿಮ್ಮಲ್ಲಿ ಮನವಿ ಮಾಡುತ್ತಲೇ ಬಂದಿದ್ದೇವೆ.
ಲಿಂಗಾಯತ ಸಮುದಾಯದ ಬೇಡಿಕೆ: ಇಕ್ಕಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ!
ಪ್ರಾಧಿಕಾರ ರಚನೆಯಿಂದ ಲಿಂಗಾಯತ ಸಮಾಜದ ಕಡು ಬಡವರು, ಸಮಾಜದ ಹಿಂದುಳಿದ ವರ್ಗಕ್ಕೆ, ಯುವಕರಿಗೆ ಹಾಗೂ ಇಡೀ ಸಮುದಾಯಕ್ಕೆ ಸಹಾಯವಾಗುತ್ತದೆ.
ಹೀಗಾಗಿ ನಮ್ಮ ಸಮಾಜದ ಎಲ್ಲ ನಾಯಕರ ಆಶಯ ಇದಾಗಿದ್ದು, ನಿಮಗೆ ಬಹಳಷ್ಟು ಬಾರಿ ಒತ್ತಾಯ ಹಾಗೂ ಮನವಿ ಮಾಡಿದ್ದೇವೆ. ಆದರೆ ತಾವು ಬೇರೆಲ್ಲ ಸಮುದಾಯಗಳಿಗೆ ನಿಗಮ ಮತ್ತು ಪ್ರಾಧಿಕಾರ ರಚನೆ ಮಾಡುತ್ತಿದ್ದೀರಿ. ಆದರೆ ಯಾಕೋ ನಮ್ಮ ಮನವಿಗೆ ನೀವು ಸ್ಪಂದಿಸುತ್ತಿಲ್ಲ.
Recommended Video
ಅದರಿಂದ ನಮಗೆ ಬಹಳ ಬೇಸರ ಆಗಿದೆ. ತಾವು ಆದಷ್ಟು ಬೇಗ ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಬೇಕೆಂದು ವೀರಶೈವ ಮಹಾಸಭಾ ಆಗ್ರಹಿಸುತ್ತದೆ ಎಂದು ಪತ್ರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಮನೋಹರ್ ಅಬ್ಬಿಗೆರೆ ಒತ್ತಾಯಿಸಿದ್ದಾರೆ.