ಸರಕಾರಿ ಜಾಲತಾಣಗಳಲ್ಲಿ ಕನ್ನಡದ ಕಂಪು : ಸಿದ್ದು ಪಣ
ಬೆಂಗಳೂರು, ಅಕ್ಟೋಬರ್ 31 : ಮುಂದಿನ ವರ್ಷದಲ್ಲಿ ಜಾಲತಾಣಗಳು ಸಂಪೂರ್ಣ ಕನ್ನಡೀಕರಣವಾಗಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭ ಗ್ರಾಹ್ಯತೆ ಕುರಿತ ವರದಿ ಸ್ವೀಕರಿಸಿ ಮಾತನಾಡಿದರು.
ಸರಕಾರಿ ವೆಬ್ ಸೈಟುಗಳಲ್ಲಿ ಕನ್ನಡವಿಂದು ಅಸ್ತವ್ಯಸ್ತವಾಗಿದೆ. ಹಲವಾರು ಅಂತರ್ಜಾಲ ತಾಣಗಳು ಇನ್ನೂ ಕನ್ನಡದಲ್ಲಿ ಕಣ್ಣನ್ನೇ ತೆರೆದಿಲ್ಲ, ಕೆಲವು ತೆರೆದಿದ್ದರೂ ಇತ್ತೀಚಿನ ಮಾಹಿತಿಗಳು ಸಮಗ್ರವಾಗಿ ಸಿಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಸರಕಾರ ಕೈಗೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದೆ.
ಕಾರ್ಯಕ್ರಮದಲ್ಲಿ ಟಿಜಿ ಶ್ರೀನಿಧಿ ಅವರು ಸಂಪಾದಿಸಿರುವ 'ಕಂಪ್ಯೂಟರ್ ಪದವಿವರಣ ಕೋಶ' ಪುಸ್ತಕವನ್ನೂ ಸಹ ಬಿಡುಗಡೆ ಮಾಡಿದ ಮಾನ್ಯ ಮುಖ್ಯಮಂತ್ರಿಗಳು ತಂತ್ರಜ್ಞಾನದ ಅರಿವು ಬಹಳ ಮುಖ್ಯವಾಗಿದ್ದು ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಕೆ ಮಾಡುವುದರಿಂದ ಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ಜಾಲತಾಣಗಳಲ್ಲಿ ಕನ್ನಡ ವ್ಯಾಪಕವಾಗಿ ಮತ್ತು ನಿರಂತರವಾಗಿ ಬಳಕೆಯಾಗಬೇಕು ಎಂಬುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯ ಮಾತ್ರವಲ್ಲ ಸರ್ಕಾರದ ಆಶಯವೂ ಅದೇ ಆಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟ ಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ರಾಜ್ಯೋತ್ಸವದ ಮುನ್ನಾದಿನವಾದ ಇಂದು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ಯಾವ ಶಿಫಾರಸ್ಸುಗಳಿವೆ ಎಂಬುದನ್ನು ಓದಿದ ನಂತರ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಟ್ಟುನಿಟ್ಟಾಗಿ ಅಳವಡಿಸಿಕೊಂಡರೆ ಆಡಳಿತ ಇನ್ನಷ್ಟು ಜನಸ್ನೇಹಿ ಆಗಲಿದೆ, ಸರಕಾರದ ಆಶಯಗಳು ಸುಲಭವಾಗಿ ಜನರಿಗೆ ತಲುಪಲಿವೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ.
ಕನ್ನಡ ಜೀವಂತ ಭಾಷೆ ಅದು ಹೊಸ ಜ್ಞಾನ ಶಾಖೆಗಳಿಗೆ ತೆರೆದುಕೊಳ್ಳಬೇಕು. ಇಂದಿನ ಯುವ ಪೀಳಿಗೆ ಪ್ರಯೋಗಶೀಲವಾಗಿರುವುದರಿಂದ ಹೊಸ ಜ್ಞಾನ ಶಾಖೆಗೆ ತೆರೆದುಕೊಳ್ಳಲು ಯುವಕರು ಪ್ರಯತ್ನಶೀಲರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಭಿಪ್ರಾಯಪಟ್ಟರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ, ತಂತ್ರಾಂಶ ತಜ್ಞರಾದ ಬೇಳೂರು ಸುದರ್ಶನ್, ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಡಾ. ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮುರಳುಸಿದ್ದಪ್ಪ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಸಾಹಿತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.