ಯಡಿಯೂರಪ್ಪ ಅವರ ನಂಬಿದ್ದ 'ಮಾಜಿ ಅನರ್ಹ'ರಿಗೆ ಆಘಾತ: ಕೆಲವರಿಗಷ್ಟೆ ಸಚಿವ ಸ್ಥಾನ?
ಬೆಂಗಳೂರು, ಜನವರಿ 10: ಯಡಿಯೂರಪ್ಪ ಅವರನ್ನೇ ನಂಬಿದ್ದ 'ಮಾಜಿ ಅನರ್ಹ' ಶಾಸಕರಿಗೆ ಆತಂಕ ಎದುರಾಗಿದೆ. ಸಂಪುಟ ವಿಸ್ತರಣೆ ಸಮಯ ಕೆಲವರಿಗಷ್ಟೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಯಡಿಯೂರಪ್ಪ ಗೆ ಸೂಚಿಸಿದೆ.
ಎಲ್ಲಾ ಅನರ್ಹ ಶಾಸಕರಿಗೂ ಸಚಿವ ಸ್ಥಾನ ಕೊಡುವುದಾಗಿ ಯಡಿಯೂರಪ್ಪ ಉಪಚುನಾವಣೆಗೆ ಮೊದಲೇ ಹೇಳಿದ್ದರು. ಅವರ ಹೇಳಿಕೆಯನ್ನೂ ಪರಿಗಣಿಸಿಯೇ ಮತ ಚಲಾಯಿಸಿದ್ದ ಮತದಾರರ 11 ಅನರ್ಹರು ಸೇರಿ 12 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಯಡಿಯೂರಪ್ಪ ಸರ್ಕಾರವನ್ನು ಸುಭದ್ರಗೊಳಿಸಿದ್ದರು.
ಮೂಲ ಬಿಜೆಪಿಗರಿಗೆ ಯಡಿಯೂರಪ್ಪರಿಂದ ಸಂಕ್ರಾಂತಿ ಉಡುಗೊರೆ?
ಆದರೆ ಈಗ ಯಡಿಯೂರಪ್ಪ ಅವರನ್ನು ನಂಬಿಕೊಂಡು ಪಕ್ಷ ಬಿಟ್ಟು ಬಂದಿದ್ದ ಮಾಜಿ ಅನರ್ಹರಿಗೆ ಆತಂಕ ಎದುರಾಗಿದೆ. ಗೆದ್ದಿರುವ ಹನ್ನೊಂದು ಮಾಜಿ ಅನರ್ಹರಿಗೂ ಸಚಿವ ಸ್ಥಾನ ಸಿಕ್ಕುವುದು ಅನುಮಾನವಾಗಿದೆ.
ಪಕ್ಷ ಬಿಟ್ಟು ಇಲ್ಲಿ ಬಂದವರಿಗಿಂತಲೂ ಮೂಲ ಬಿಜೆಪಿಗರಿಗೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್ ಯಡಿಯೂರಪ್ಪ ಗೆ ಸೂಚನೆ ನೀಡಿದೆ. ಇದರಿಂದ ಸಹಜವಾಗಿಯೇ ಯಡಿಯೂರಪ್ಪ ಆತಂಕಕ್ಕೆ ಈಡಾಗಿದ್ದಾರೆ. ಮತ್ತೊಂದೆಡೆ ಅನರ್ಹರು ಸಹ ಆತಂಕಕ್ಕೆ ಬಿದ್ದಿದ್ದಾರೆ.
ಅನರ್ಹರಿಗೆ ಮಾತು ಕೊಟ್ಟಿದ್ದ ಯಡಿಯೂರಪ್ಪ
ಉಪಚುನಾವಣೆಯಲ್ಲಿ ಗೆದ್ದರೂ-ಸೋತರೂ ಬಿಜೆಪಿ ಸರ್ಕಾರ ರಚಿಸಲು ಶಾಸಕ ಸ್ಥಾನ ತ್ಯಜಿಸಿ ಬಂದ ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತೇನೆಂದು ಯಡಿಯೂರಪ್ಪ ಹೇಳಿದ್ದರು. ಆದರೆ ಈಗಿನ ಪರಿಸ್ಥಿತಿಯಂತೆ ಗೆದ್ದವರಿಗೂ ಸಚಿವ ಸ್ಥಾನ ಸಿಗುವುದು ಕಷ್ಟಕರವಾಗಿದೆ. ಮಾಹಿತಿಯಂತೆ ಉಪಚುನಾವಣೆ ಗೆದ್ದಿರುವ ಹನ್ನೊಂದು ಮಾಜಿ ಅನರ್ಹರಲ್ಲಿ 6-7 ಮಂದಿಗೆ ಮಾತ್ರವೇ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಆಕ್ರೋಶ ಹೊರಹಾಕಿರುವ ರಮೇಶ್ ಜಾರಕಿಹೊಳಿ
ಈ ಬಗ್ಗೆ ಮಾಜಿ ಅನರ್ಹರ ಗುಂಪಿನ ನಾಯಕ ರಮೇಶ್ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಬಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ತಮ್ಮ ಆಕ್ರೋಶವನ್ನು ಹೊರಹಾಕಿ, 'ಮಾತು ನೀಡಿದಂತೆ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು' ಎಂದು ಒತ್ತಡ ಹೇರಿದ್ದಾರೆ. ಯಡಿಯೂರಪ್ಪ ಸಹ ಮಾಜಿ ಅನರ್ಹರನ್ನು ಸಂಪುಟ ಸೇರಿಸಿಕೊಳ್ಳಲು ಆಸಕ್ತರಾಗಿದ್ದು, ಹೈಕಮಾಂಡ್ ಮನವೊಲಿಸುವ ಯತ್ನದಲ್ಲಿ ನಿರತರಾಗಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಬಹುದೊಡ್ಡ ಸಂಕಷ್ಟ..!
ಹೈಕಮಾಂಡ್ ಬಳಿ ದೂರು ನೀಡಿರುವ ಮೂಲ ಬಿಜೆಪಿಗರು
ಮಾಜಿ ಅನರ್ಹರಿಗೆ ನೀಡಲಾಗುತ್ತಿರುವ ಅಧಿಕ ಆದ್ಯತೆ ಕುರಿತು ಮೂಲ ಬಿಜೆಪಿ ಶಾಸಕರು ಹೈಕಮಾಂಡ್ ಬಳಿ ದೂರು ನೀಡಿರುವ ಕಾರಣ ಹೈಕಮಾಂಡ್ ಯಡಿಯೂರಪ್ಪ ಗೆ ಸಂದೇಶ ರವಾನಿಸಿದೆ. ರೇಣುಕಾಚಾರ್ಯ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಕರಾವಳಿಯ ಹಲವು ಹಿರಿಯ ಶಾಸಕರು ಈಗಾಗಲೇ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನಗೊಂಡಿದ್ದಾರೆ.
ಧನುರ್ಮಾಸ ಮುಗಿದ ಬಳಿಕ ಸಂಪುಟ ವಿಸ್ತರಣೆ
ಯಾವ-ಯಾವ ಮಾಜಿ ಅನರ್ಹರಿ ಸಚಿವ ಸ್ಥಾನ ಸಿಗುತ್ತೆ, ಯಾರಿಗೆ ಸಿಗುವುದಿಲ್ಲ ಎಂಬುದು ಜನವರಿ 14 ರ ನಂತರ ಗೊತ್ತಾಗಲಿದೆ. ಸಂಪುಟ ವಿಸ್ತರಣೆಯು ಧನುರ್ಮಾಸ ಮುಗಿದ ನಂತರ ನಡೆಯಲಿದೆ ಎಂದು ಮೊದಲೇ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.