ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ತುಪ್ಪ ಸುರಿದ ಎಕೆ ಸುಬ್ಬಯ್ಯ
ಮಡಿಕೇರಿ, ಜುಲೈ 16 : ಇಡೀ ಕೊಡಗಿನ ಜನ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಹೋರಾಟ ನಡೆಸುತ್ತಿದ್ದರೆ ಹಿರಿಯ ವಕೀಲ, ವಿಧಾನಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಕೆಜೆ ಜಾರ್ಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಆತ್ಮಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಸಮಾಜ ಘಾತುಕ ಕೃತ್ಯವಾಗಿದ್ದು, ಉನ್ನತ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗುವದು ಖಂಡನೀಯ ಕ್ರಮ ಎಂದು ಹೇಳಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. [ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ : ಬಂದ್ ಸಂಪೂರ್ಣ ಯಶಸ್ವಿ]
ಕೆ.ಜೆ.ಜಾರ್ಜ್ ಅವರಿಗೆ ಬೆಂಬಲ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾರ್ಜ್ ಅವರಿಂದ ಕಿರುಕುಳ ಆಗಿದ್ದರೆ ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗ ಏಕೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ? ಎಂದು ಪ್ರಶ್ನಿಸಿದರು. [ಗಣಪತಿ ಆತ್ಮಹತ್ಯೆ ಸಿಐಡಿ ವರದಿ ಸೋರಿಕೆ, ಸರಕಾರಕ್ಕೆ ಮುಜುಗರ?]
ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯ ಮಾಡುವ ಮೂಲಕ ಕೊಚ್ಚೆಯಲ್ಲಿ ಮೀನು ಹಿಡಿಯುವ ಕೆಲಸವನ್ನು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರಲ್ಲದೆ, ಗಣಪತಿ ಆತ್ಮಹತ್ಯೆಗೆ ಮನೋವ್ಯಾಕುಲವೇ ಕಾರಣ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ ಸುಬ್ಬಯ್ಯ, 174 ಸೆಕ್ಷನ್ ಪ್ರಕಾರ ಈಗಾಗಲೇ ತನಿಖೆ ಆರಂಭಗೊಂಡಿದ್ದು, ಇದರ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ಎಂದು ತಿಳಿದುಬಂದಲ್ಲಿ ಎಫ್ಐಆರ್ ದಾಖಲಿಸಲು ಅವಕಾಶವಿದೆ. ಆದರೆ 174ರಡಿಯಲ್ಲೇ ತನಿಖೆಯನ್ನು ಕೈಗೊಳ್ಳಲು ಬಿಡದೆ ಅರ್ಥಹೀನ ಆಂದೋಲನದ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.
ಆತ್ಮಹತ್ಯೆ ಮಾಡಿಕೊಂಡ ಎಂ.ಕೆ. ಗಣಪತಿ ಹಾಗೂ ಡಿವೈಎಸ್ಪಿ ಕಲ್ಲಪ್ಪ ಅವರು ಕೇಸರೀಕರಣಗೊಂಡಿದ್ದರು. ಇವತ್ತು ಕೇಸರೀಕರಣಗೊಂಡ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಗಣಪತಿ ಅವರ ಆತ್ಮಹತ್ಯೆಗೆ ಸಂಘ ಪರಿವಾರವೇ ನೇರ ಹೊಣೆ ಎಂದು ಬಿಜೆಪಿ ವಿರುದ್ಧವೇ ತಿರುಗುಬಾಣ ಬಿಟ್ಟರು. [ಗಣಪತಿ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ : ಪ್ರತಾಪ್]
ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಹಲವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಹುಚ್ಚರಂತೆ ಹೇಳಿಕೆ ನೀಡುತ್ತಿದ್ದು, ಅವರ ರೋಗಕ್ಕೆ ಔಷಧಿ ಇಲ್ಲದಂತಾಗಿದೆ ಎಂದು ಸುಬ್ಬಯ್ಯ ವ್ಯಂಗ್ಯವಾಡಿದರು.
ಸುಬ್ಬಯ್ಯ ಅವರ ಹೇಳಿಕೆಗಳು ಕೊಡಗಿನಲ್ಲಿ ಕಿಚ್ಚು ಹಚ್ಚಲು ಕಾರಣವಾಗಿದೆ. ಈ ಹಿಂದೆಯೂ ಹಲವು ಘಟನೆಗಳ ಸಂದರ್ಭ ಸುಬ್ಬಯ್ಯ ಅವರ ಹೇಳಿಕೆಗಳಿಗೆ ಪ್ರತಿಭಟನೆ, ಖಂಡನೆ, ಹಲ್ಲೆಗಳು ನಡೆದಿದ್ದವು. ಇದೀಗ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.