ಸದಾಶಿವ ಆಯೋಗದ ವರದಿ : ಕಾನೂನು ಸಲಹೆ ಪಡೆಯಲು ನಿರ್ಧಾರ
ಬೆಂಗಳೂರು, ಜನವರಿ 16 : ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿಯ ಬಲಗೈ ಬಣ ಒಪ್ಪಿಗೆ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲ ನೀಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ, ವರದಿ ಜಾರಿಗೆ ಒಪ್ಪಿಗೆ ಸಿಕ್ಕಿದೆ. ಎರಡೂ ಸಮುದಾಯಗಳ ಮುಖಂಡರು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, 'ಬಲಗೈ ಮತ್ತು ಎಡಗೈ ಸಮುದಾಯದವರು ಒಂದೇ ತಾಯಿಯ ಮಕ್ಕಳಿದ್ದಂತೆ. ಮೀಸಲಾತಿ ಜಾರಿಗೆ ಬಂದಾಗ ಒಟ್ಟಿಗೆ ಪಡೆದಿದ್ದೇವೆ' ಎಂದರು.
'ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಕಿತ್ತಾಡುವುದು ಬೇಡ. ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಬಲಗೈ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ' ಎಂದು ಆಂಜನೇಯ ಸ್ಪಷ್ಟಪಡಿಸಿದರು.
'ಕಾನೂನು ತಜ್ಞರ ಅಭಿಪ್ರಾಯ ಪಡೆದು, ನಂತರ ದಲಿತ ಸಂಘಟನೆಗಳ ಜೊತೆ ಮತ್ತೊಮ್ಮೆ ಸಭೆ ನಡೆಸಿ ಸಚಿವ ಸಂಪುಟದ ಮುಂದೆ ವರದಿಯನ್ನು ಇಟ್ಟು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧಾರವನ್ನು ಕೈಗೊಳ್ಳಲಿದ್ದೇವೆ' ಎಂದು ಆಂಜನೇಯ ವಿವರಿಸಿದರು.
'ವರದಿಯ ಅನ್ವಯ ಬಲಗೈ ಸಮುದಾಯಕ್ಕೆ ಶೇ 5, ಎಡಗೈ ಸಮಯದಾಯಕ್ಕೆ ಶೇ 6ರಷ್ಟು ಮೀಸಲಾತಿ ಸಿಗಲಿದೆ. ಕಾನೂನಿನಲ್ಲಿ ಅವಕಾಶವಿದ್ದರೆ ತಲಾ 5.5ರಷ್ಟು ಹಂಚಿಕೆ ಮಾಡುವಂತೆ ಕೆಲವರು ಸಲಹೆ ನೀಡಿದ್ದಾರೆ' ಎಂದರು.
'ಎರಡೂ ಸಮುದಾಯಗಳ ಸಂಸದರು ಮತ್ತು ಶಾಸಕರ ಸಭೆಯನ್ನು ಮತ್ತೊಮ್ಮೆ ಕರೆಯುತ್ತೇವೆ. ಅವರನ್ನು ಒಪ್ಪಿಸಿ ಆದಷ್ಟು ಬೇಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ' ಎಂದು ಸಚಿವರು ಹೇಳಿದರು.