ಕರ್ನಾಟಕ ಕಾಂಗ್ರೆಸ್ ಚಟುವಟಿಕೆಗೆ ಎಐಸಿಸಿ ಗರಂ, ಖಡಕ್ ಎಚ್ಚರಿಕೆ!
ಬೆಂಗಳೂರು, ಸೆಪ್ಟೆಂಬರ್ 23 : ಕರ್ನಾಟಕ ಕಾಂಗ್ರೆಸ್ನಲ್ಲಿನ ಚಟುವಟಿಕೆಗಳ ಕುರಿತು ಎಐಸಿಸಿ ಅಸಮಾಧಾನಗೊಂಡಿದೆ. ಸಂಪುಟ ವಿಸ್ತರಣೆಗಾಗಿ ಬಂಡಾಯ ಚುಟುವಟಿಕೆಗಳನ್ನು ಆರಂಭಿಸಿರುವ ಎಲ್ಲಾ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಕೆಲವು ಶಾಸಕರ ಚಟುವಟಿಕೆಗಳನ್ನು ಹತೋಟಿಗೆ ತರಲು ವಿಫಲವಾದ ಕೆಪಿಸಿಸಿ ಎಐಸಿಸಿ ನಾಯಕರಿಗೆ ಈ ಕುರಿತು ಮಾಹಿತಿ ನೀಡಿತ್ತು. ಪಕ್ಷದ ನಿಯಮವನ್ನು ಮೀರಿ ನಡೆದುಕೊಂಡರೆ ನೋಟಿಸ್ ನೀಡುವ ಎಚ್ಚರಿಕೆಯನ್ನು ಪಕ್ಷ ನೀಡಿದೆ.
ಆಪರೇಷನ್ ಕಮಲ : ಸ್ಪಷ್ಟನೆ ಕೊಟ್ಟ ಡಾ.ಕೆ.ಸುಧಾಕರ್
ಸಂಪುಟ ವಿಸ್ತರಣೆಗೆ ಪಟ್ಟು ಹಿಡಿದಿರುವ ಕೆಲವು ಶಾಸಕರು ರೆಸಾರ್ಟ್ ರಾಜಕಾರಣ ಆರಂಭಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕೆಲವು ಶಾಸಕರು ಮುಂಬೈ, ಕೆಲವು ಶಾಸಕರು ತಮಿಳುನಾಡಿಗೆ ಹೋಗಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದು, ಸಂಪೂರ್ಣ ಗೊಂದಲ ಉಂಟಾಗಿದೆ.
ಕಾಂಗ್ರೆಸ್ ಶಾಸಕರಿಗೆ ಮುಂಬೈಗೆ ಹೋಗಲು ಹೇಳಿದ್ದೇ ನಾನು: ಕುಮಾರಸ್ವಾಮಿ
ಕೆಲವು ಶಾಸಕರು ಸಚಿವ ಸ್ಥಾನಬೇಕು ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತೆ ಕೆಲವು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದು, ಪಕ್ಷ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯನ್ನೂ ಕೆಲವರು ಪಾಲಿಸಿಲ್ಲ. ಆದ್ದರಿಂದ, ವಿಚಾರ ಹೈಕಮಾಂಡ್ ತನಕ ಹೋಗಿದೆ....
ಕಾಂಗ್ರೆಸ್ ಶಾಸಕರಿಗೆ ಮುಂಬೈಗೆ ಹೋಗಲು ಹೇಳಿದ್ದೇ ನಾನು: ಕುಮಾರಸ್ವಾಮಿ
ಶಿಸ್ತು ಕ್ರಮದ ಎಚ್ಚರಿಕೆ
ಬಹಿರಂಗವಾಗಿ ಹೇಳಿಕೆ ಕೊಡುವ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಲು ಎಐಸಿಸಿ ಮುಂದಾಗಿದೆ. ಪಕ್ಷದ ನಾಯಕರ ಮಾತು ಮೀರಿ ಹೇಳಿಕೆ ನೀಡಿದರೆ ಪಕ್ಷದ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಕೆಪಿಸಿಸಿಗೆ ಸೂಚನೆ ನೀಡಿದೆ. ಈ ಮೂಲಕ ಶಾಸಕರು ದಿನಕ್ಕೊಂದು ಕಡೆ ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದಕ್ಕೆ ತಡೆ ಹಾಕಲು ಮುಂದಾಗಿದೆ.
ವೇಣುಗೋಪಾಲ್ ಬೆಂಗಳೂರಿಗೆ
ಕರ್ನಾಟಕ ಕಾಂಗ್ರೆಸ್ನಲ್ಲಿ ಚುಟುವಟಿಕೆಗಳು ಬಿರುಸುಗೊಂಡ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಅವರು ಸಭೆ ನಡೆಸುವ ಸಾಧ್ಯತೆ ಇದೆ.
ಎಐಸಿಸಿ ಕಾರ್ಯದರ್ಶಿ ಮಧು ಯುಷ್ಕಿಗೌಡ ಅವರು ಚಿಕ್ಕಬಳ್ಳಾಪುರ ಶಾಸಕರ ಡಾ.ಕೆ.ಸುಧಾಕರ್ ಅವರಿಗೆ ಕರೆ ಮಾಡಿ ಬುದ್ಧಿವಾದ ಹೇಳಿದ್ದಾರೆ. ಆದ್ದರಿಂದ, ಅವರು ಟ್ವಿಟರ್ ಮೂಲಕ ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಬಿ.ಸಿ.ಪಾಟೀಲ್ ಸ್ಪಷ್ಟನೆ
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಲವಾಗಿ ಹಬ್ಬಿತ್ತು. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅವರು ಸಚಿವ ಸ್ಥಾನ ಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, 'ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸದ್ಯ, ಬಿಜೆಪಿಯವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ನನಗೆ ಸಚಿವ ಸ್ಥಾನ ಕೊಡಲೇಬೇಕು. ಸಚಿವನಾಗಲು ನನಗೆ ಎಲ್ಲಾ ಅರ್ಹತೆ ಇದೆ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕರೆ
ಮುಂಬೈನತ್ತ ಹೋಗಿದ್ದ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ. ಮತ್ತೊಂದು ಕಡೆ ಕೆ.ಸುಧಾಕರ್ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.