ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಮಾತಿನುದ್ದಕ್ಕೂ ಬಸವಣ್ಣನ ಜಪ
ಬೆಳಗಾವಿ, ಫೆಬ್ರವರಿ 24: "ನುಡಿದಂತೆ ನಡೆ..." ಎಂದು ಬಸವಣ್ಣ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆಯುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಎಂದಾದರೂ ತಾವು ನುಡಿದಂತೆ ನಡೆದಿದ್ದಾರಾ?" ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಛಾಟಿ ಬೀಸುತ್ತಲೇ ಮಾತು ಆರಂಭಿಸಿದರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
ತಮ್ಮ ಕರ್ನಾಟಕ ಜನಾಶೀರ್ವಾದ ಯಾತ್ರೆಯ ಎರಡನೇ ಭಾಗವಾಗಿ ಬೆಳಗಾವಿಯ ಅಥಣಿಗೆ ಆಗಮಿಸಿರುವ ರಾಹುಲ್ ಗಾಂಧಿ "ನಮಸ್ಕಾರಾ... ಚೆನ್ನಾಗಿದ್ದೀರಾ?" ಎನ್ನುತ್ತ ಕನ್ನಡದಲ್ಲೇ ಮಾತು ಆರಂಭಿಸಿದರು.
ಈ ದೇಶದ ಪ್ರಧಾನಿಯಾಗಲು ಮೋದಿ ನಾಲಾಯಕ್: ಸಿದ್ದರಾಮಯ್ಯ
LIVE: Congress President Shri Rahul Gandhi's #JanaAashirwadaYatre from Athani, Belagavi https://t.co/ixJodXcwLa
— Karnataka Congress (@INCKarnataka) February 24, 2018
ತಮ್ಮ ಭಾಷಣದುದ್ದಕ್ಕೂ ಬಸವಣ್ಣನವರನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಕಳಬೇಡ, ಕೊಲಬೇಡ ಹುಸಿಯ ನುಡಿಯಲುಬೇಡ ಎಂಬ ಬಸವಣ್ಣನವರ ವನಚನಗಳನ್ನು ನೆನಪಿಸಿಕೊಂಡರು.
"ನುಡಿದಂತೆ ನಡೆ ಎಂದು ಬಸವಣ್ಣ ಹೇಳಿದರು. ಕಾಂಗ್ರೆಸ್ ಸರ್ಕಾರ ಬಡವರಿಗೆ ಏನು ಭರವಸೆ ನೀಡಿತ್ತೋ ಅದನ್ನು ಮಾಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಏನು ಹೇಳಿದರು? ಒಂದು ವರ್ಷದಲ್ಲಿ ಭಾರತದಲ್ಲಿರುವ ಎಲ್ಲಾ ಬಡವರ ಖಾತೆಗೆ ಹದಿನೈದು ಲಕ್ಷ ತಂದು ಹಾಕುತ್ತೇನೆ ಎಂದರು ಮೋದಿ. ಆದರೆ ಆ ಕೆಲಸವನ್ನು ಮಾಡಿದರಾ? ಎಂದು ಅವರು ಪ್ರಶ್ನಿಸಿದರು.
"20 ಲಕ್ಷ ಬಡವರಿಗೆ ಉದ್ಯೋಗ ನೀಡುವುದಾಗಿ ಹೇಳಿದರು. ಆದರೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆಯಾ? ನೀರವ್ ಮೋದಿಯಂಥವರು ದೇಶವನ್ನು ಕೊಳ್ಳೆಹೊಡೆದು ಹೋಗುತ್ತಿದ್ದಾರೆ" ಎಂದು ಲೇವಡಿ ಮಾಡಿದರು.