ಡಿಕೆಶಿಗೆ ಹೆಚ್ಚಿನ ಶಕ್ತಿ, ಸಿದ್ದರಾಮಯ್ಯ ಯುಗಾಂತ್ಯ? ಹೈಕಮಾಂಡ್ ಪ್ಲಾನ್ ಏನು?
ಬೆಂಗಳೂರು, ಆಗಸ್ಟ್ 26: ಲೋಕಸಭೆ ಚುನಾವಣೆ ಸೋಲುಂಡ ಬಳಿಕ ಕಾಂಗ್ರೆಸ್ ಮಂಥನದಲ್ಲಿ ತೊಡಗಿದ್ದು, ಹಲವು ಹೊಸ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಕರ್ನಾಟಕ ಕಾಂಗ್ರೆಸ್ನಲ್ಲಿಯೂ ಹೊಸ ರಾಜಕೀಯ ಪ್ರಯೋಗಗಳನ್ನು ಎಐಸಿಸಿ ಮಾಡಲಿದೆ.
ಹಿರಿಯರಿಗೆ ಅವಕಾಶವನ್ನು ಕಡಿಮೆಗೊಳಿಸಿ ಯುವಕರಿಗೆ ಅವಕಾಶ ನೀಡುವ ನಿರ್ಣಯವನ್ನು ಎಐಸಿಸಿ ಥಿಂಕ್ ಟ್ಯಾಂಕ್ ತಳೆದಿದ್ದು, ಅದರಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರವನ್ನು ಮೊಟಕುಗೊಳಿಸಿ ಹೊಸಬರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ರಾಜ್ಯ ಕಾಂಗ್ರೆಸ್ಗೆ ಹೊಸ ಚೈತನ್ಯ ತುಂಬಲು ಎಐಸಿಸಿ ಮುಂದಾಗಿದೆ.
ಕರ್ನಾಟಕ ಕಾಂಗ್ರೆಸ್ಗೆ ಪ್ರಸ್ತುತ ಸಿದ್ದರಾಮಯ್ಯ ಅವರೇ ಟಾಪ್ ಒನ್ ನಾಯಕರಾಗಿದ್ದಾರೆ. ಆದರೆ ಆ ಸ್ಥಾನದಿಂದ ಅವರನ್ನು ಬದಿಗೆ ಸರಿಸಿ ಹೊಸ ನಾಯಕರು ಆ ಸ್ಥಾನವನ್ನು ತುಂಬಲು ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡುವ ಗುರಿ ಕಾಂಗ್ರೆಸ್ ಗೆ ಇದೆ. ಹಾಗಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಕೆಲವು ಅತಿಮುಖ್ಯ ಬದಲಾವಣೆಗಳನ್ನು ಮಾಡಲು ಎಐಸಿಸಿ ಚಿಂತಿಸಿದೆ.
ವಿರೋಧ ಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಅವರನ್ನು ಆ ಸ್ಥಾನದಿಂದ ತಪ್ಪಿಸಿ, ಕೃಷ್ಣ ಬೈರೇಗೌಡ ಅವರನ್ನು ವಿಪಕ್ಷ ಸ್ಥಾನ ನಾಯಕ ಸ್ಥಾನ ನೀಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ಕೇವಲ ಶಾಸಕಾಂಗ ಪಕ್ಷದ ನಾಯಕನಿಗೆ ಸೀಮಿತಗೊಳಿಸಲು ಎಐಸಿಸಿ ನಿರ್ಧರಿಸಿದೆ.
ದಿನೇಶ್ ಗುಂಡೂರಾವ್ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಅಭ್ಯರ್ಥಿಯೇ ಆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಿ, ಆ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ನೇಮಿಸುವ ಸರ್ವ ಸಾಧ್ಯತೆ ಇದೆ. ಆ ಮೂಲಕ ಪಕ್ಷದ ಮೇಲೆ ಸಿದ್ದರಾಮಯ್ಯ ಹಿಡಿತ ಪೂರ್ಣವಾಗಿ ತೆಗೆದುಹಾಕುವುದು ಎಐಸಿಸಿ ಯೋಜನೆ.
ಗುಂಪು ರಾಜಕೀಯ ಅಂತ್ಯಗೊಳಿಸಲು ತಂತ್ರ
ಡಿಕೆ.ಶಿವಕುಮಾರ್ ಗೆ ಹೆಚ್ಚಿನ ಶಕ್ತಿ ಮತ್ತು ಅಧಿಕಾರ ನೀಡಿ, ಪಕ್ಷದ ಸಂಘಟನೆಗೆ ಹೆಚ್ಚು ಆದ್ಯತೆ ನೀಡುವುದು ಎಐಸಿಸಿ ಯೋಜನೆ ಆಗಿದೆ. ಅಲ್ಲದೆ, ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿರುವ ಗುಂಪು ರಾಜಕೀಯವನ್ನು ಅಂತ್ಯಗೊಳಿಸುವುದು ಎಐಸಿಸಿ ತಂತ್ರ.
ಪರೋಕ್ಷ ಟಾಂಗ್ ನೀಡಿದ ಡಿ.ಕೆ.ಶಿವಕುಮಾರ್
ಸುದ್ದಿಗೆ ಪೂರಕವೆಂಬಂತೆ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಸಿದ್ದರಾಮಯ್ಯಗೆ ಈ ಬಾರಿ ವಿಪಕ್ಷ ನಾಯಕ ಸ್ಥಾನ ಸಿಗುವುದಿಲ್ಲವೆಂದು ಹೇಳಿದ್ದಾರೆ. 'ನನಗೆ ಸ್ವಂತ ಮನೆ ಇದೆ, ಯಾರಿಗೆ ಕಾರು, ಮನೆ ಬೇಕಿದೆಯೋ ಅವರು ವಿಪಕ್ಷ ನಾಯಕ ಸ್ಥಾನಕ್ಕೆ ಲಾಭಿ ಮಾಡಲಿ' ಎಂದಿದ್ದರು.
ಉಪಚುನಾವಣೆ ತಯಾರಿಗೆ ಇಷ್ಟೆಲ್ಲಾ ಬದಲಾವಣೆ
ಇನ್ನು ಆರು ತಿಂಗಳ ಒಳಗಾಗಿ ದೊಡ್ಡ ಉಪಚುನಾವಣೆ ಬರಲಿದ್ದು, ಆ ಉಪಚುನಾವಣೆ ಸರ್ಕಾರವನ್ನು ನಿರ್ಧರಿಸುವ ಉಪಚುನಾವಣೆ ಆಗಿರಲಿದೆ. ಹಾಗಾಗಿ ಆ ಉಪಚುನಾವಣೆಗೆ ಸಿದ್ಧತೆ ನಡೆಸಲು ಈಗಿನಿಂದಲೇ ಸಜ್ಜಾಗಲು ಕಾಂಗ್ರೆಸ್ ಮುಂದಾಗಿದ್ದು, ಅದೇ ಕಾರಣದಿಂದ ಮಹತ್ವದ ಬದಲಾವಣೆಗೆ ತೆರೆದುಕೊಳ್ಳುತ್ತಿದೆ.
ಗುಲಾಂ ನಬಿ ಆಜಾದ್, ವೇಣುಗೋಪಾಲ್ ರಾಜ್ಯಕ್ಕೆ
ನಾಳೆ ಗುಲಾಂ ನಬಿ ಆಜಾದ್, ಕೆ.ಸಿ.ವೇಣುಗೋಪಾಲ್ ಅವರುಗಳು ರಾಜ್ಯಕ್ಕೆ ಬರುತ್ತಿದ್ದು, ವಿರೋಧಪಕ್ಷ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ತೀರ್ಮಾನ ನಾಳೆ ಮುಗಿಯಲಿದೆ. ಮೇಲಿನಂತೆಯೇ ಆದಲ್ಲಿ ಸಿದ್ದರಾಮಯ್ಯ ಯುಗಾಂತ್ಯವಾಗಿ ಡಿ.ಕೆ.ಶಿವಕುಮಾರ್ ಯುಗ ಆರಂಭವಾಗುವ ಸಾಧ್ಯತೆ ಇದೆ.