ಕಾಂಗ್ರೆಸ್ ಹೈಕಮಾಂಡ್ ಚಿತ್ತ ಇನ್ನೊಬ್ಬರತ್ತ: ಸಿದ್ದರಾಮಯ್ಯಗೆ ಕಷ್ಟಕಷ್ಟ..
ಮುಕ್ಕಾಲು ಕರ್ನಾಟಕ ಪ್ರವಾಹ ಪೀಡಿತವಾಗಿರುವುದರಿಂದ ಮತ್ತು ಸದ್ಯಕ್ಕೆ ಅಸೆಂಬ್ಲಿ ಅಧಿವೇಶನ ಇಲ್ಲದೇ ಇರುವುದರಿಂದ, ವಿರೋಧ ಪಕ್ಷದ ನಾಯಕನಾರು ಎನ್ನುವ ಪ್ರಶ್ನೆಗೆ ಬ್ರೇಕ್ ಬಿದ್ದಿತ್ತು.
ಆದರೆ, ಕಾಂಗೆಸ್ಸಿನ ಹೈಕಮಾಂಡ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರುವುದರಿಂದ ವಿರೋಧ ಪಕ್ಷದ ನಾಯಕನ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಮತ್ತೆ ಮುನ್ನಲೆಗೆ ಬಂದಿದೆ. ಶಾಸಕಾಂಗ ಪಕ್ಷದ ನಾಯಕರೇ ವಿರೋಧ ಪಕ್ಷದ ನಾಯಕರಾಗುವುದು 'ವಾಡಿಕೆ'ಯಾದರೂ, ಆ ಪದ್ದತಿಗೆ ಬ್ರೇಕ್ ಹಾಕಲು ಕಾಂಗ್ರೆಸ್ಸಿನ ದೊಡ್ಡವರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿದ್ದರಾಮಯ್ಯ
ಅಸಲಿಗೆ, ಇಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ಆಗುತ್ತಿರುವ ಸಮಸ್ಯೆ ಏನಂದರೆ, ಒಂದು ಹುದ್ದೆಗೆ ನಾಲ್ಕು ಜನ ಟವೆಲ್ ಹಾಕಿರುವುದು. ಕಾಂಗ್ರೆಸ್ ಮೂಲಗಳ ಪ್ರಕಾರ, ವಿರೋಧ ಪಕ್ಷದ ನಾಯಕನ ಸ್ಥಾನ ಸಿದ್ದರಾಮಯ್ಯನವರಿಗೆ ಒಲಿಯುವುದು ಅಷ್ಟೇನೂ ಸುಲಭವಲ್ಲ.
ಏಕಚಕ್ರಾಧಿಪತಿ ಯಡಿಯೂರಪ್ಪಗೆ ಸಿದ್ದರಾಮಯ್ಯ ಪ್ರಶ್ನೆ!
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗಿನಿಂದ ಒಳಗಿಂದೊಳಗೆ ಒಂದು ಗುಂಪು ಅವರ ವಿರುದ್ದ ಕಿಡಿಕಾರುತ್ತಿದ್ದದ್ದು ಗೊತ್ತಿರುವ ವಿಚಾರ. ಆ ಗುಂಪು ಈಗ ಸಕ್ರಿಯವಾಗಿರುವುದರಿಂದ, ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುವುದು ಅನುಮಾನ ಎನ್ನುವ ವಾತಾವರಣವಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಕುಮಾರ್ ಅವರ ಹೆಸರನ್ನು ಮುನ್ನಲೆಗೆ ತಂದಿದ್ದರು
ಈ ಸ್ಥಾನಕ್ಕೆ ಸಿದ್ದರಾಮಯ್ಯ, ಡಾ. ಪರಮೇಶ್ವರ್, ಡಿ ಕೆ ಶಿವಕುಮಾರ್ ಮತ್ತು ಎಚ್ ಕೆ ಪಾಟೀಲ್ ಪ್ರಯತ್ನಿಸುತ್ತಿದ್ದರು. ಈ ಸ್ಥಾನ ಕೈತಪ್ಪಿ ಹೋಗುವ ಸಾಧ್ಯತೆಯಿದೆ ಎಂದರಿತ ಸಿದ್ದರಾಮಯ್ಯ, ತಮ್ಮ ಆಪ್ತ ಮತ್ತು ಉತ್ತಮ ವಾಗ್ಮಿಯೂ ಆಗಿರುವ ರಮೇಶ್ ಕುಮಾರ್ ಅವರ ಹೆಸರನ್ನು ಮುನ್ನಲೆಗೆ ತಂದಿದ್ದರು. ಸ್ಪೀಕರ್ ಆಗಿ ಸಮರ್ಥವಾಗಿ ಕೆಲಸ ಮಾಡಿದ್ದ ಮತ್ತು ಅತೃಪ್ತ ಶಾಸಕರ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ, ರಮೇಶ್ ಹೆಸರನ್ನು ಹೈಕಮಾಂಡ್ ಒಪ್ಪಬಹುದು ಎನ್ನುವುದು ಸಿದ್ದರಾಮಯ್ಯನವರ ಲೆಕ್ಕಾಚಾರವಾಗಿತ್ತು.
ಕಾಂಗ್ರೆಸ್ಸಿನ ನಿಯತ್ತಿನ ಕಟ್ಟಾಳು ಎಚ್ ಕೆ ಪಾಟೀಲ್
ಆದರೆ, ರಮೇಶ್ ಕುಮಾರ್ ಅವರ ಹೆಸರನ್ನು ಹೈಕಮಾಂಡ್ ಮಾನ್ಯ ಮಾಡುವುದು ಸಂಶಯ ಎನ್ನುವ ಮಾತುಗಳು ಹರಿದಾಡುತ್ತಿವೆ. ಮೂಲಗಳ ಪ್ರಕಾರ, ಉತ್ತರ ಕರ್ನಾಟಕದ ಪ್ರಭಾವೀ ಮುಖಂಡ ಮತ್ತು ಕಾಂಗ್ರೆಸ್ಸಿನ ನಿಯತ್ತಿನ ಕಟ್ಟಾಳು ಎಚ್ ಕೆ ಪಾಟೀಲ್ ಅವರ ಹೆಸರು ಈ ಹುದ್ದೆಗೆ ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದಾಗ, ಪಾಟೀಲ್ ಸಾಹೇಬ್ರು ಬೇಸರಿಸಿಕೊಂಡಿದ್ದು ಗೊತ್ತಿರುವ ವಿಚಾರ.
ಕಾಂಗ್ರೆಸ್ ಘಟಕದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ
ಮುಖ್ಯಮಂತ್ರಿಯಾಗಿದಾಗಿನಿಂದ ರಾಜ್ಯ ಕಾಂಗ್ರೆಸ್ ಘಟಕದ ಪ್ರಶ್ನಾತೀತ ನಾಯಕರಂತಿದ್ದ ಸಿದ್ದರಾಮಯ್ಯನವರ ತಂತ್ರಗಳು ಈ ಬಾರಿ ಫಲಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯನರಲ್ಲೇ ಉಳಿಸಿಕೊಂಡು, ಜೊತೆಗೆ, ಹೈಕಮಾಂಡ್ ಪ್ರಭಾವೀ ಸ್ಥಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ನೀಡುವ ತೀರ್ಮಾನಕ್ಕೆ ಬಂದಿದೆ ಎನ್ನುವ ಸುದ್ದಿಯಿದೆ.
ಸೋನಿಯಾ ಗಾಂಧಿ ಎಐಸಿಸಿಸಿನ ಹಂಗಾಮಿ ಅಧ್ಯಕ್ಷೆ
ಸಮ್ಮಿಶ್ರ ಸರಕಾರ ಪತನಗೊಂಡ ನಂತರ, ಕಾಂಗ್ರೆಸ್ಸಿನ ಒಂದು ಗುಂಪು, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯನವರನ್ನು ಹೊರತಾಗಿ, ಬೇರೊಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಒತ್ತಡವನ್ನು ಹೇರಿತ್ತು ಎನ್ನುವುದು ಈಗ ಗೌಪ್ಯವಾಗಿ ಉಳಿದಿಲ್ಲ. ಈಗ, ಸೋನಿಯಾ ಗಾಂಧಿ ಎಐಸಿಸಿನ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ವಿರೋಧ ಪಕ್ಷದ ನಾಯಕನ ಹುದ್ದೆಯ ಸಂಬಂಧ ಚಟುವಟಿಕೆ ಬಿರುಸುಗೊಂಡಿದೆ.
ಎಚ್ ಕೆ ಪಾಟೀಲ್ ಗೆ ಬಹುತೇಕ ವಿರೋಧ ಪಕ್ಷದ ನಾಯಕನ ಸ್ಥಾನ
ಸದ್ಯದ ಮಾಹಿತಿಯ ಪ್ರಕಾರ, ಎಚ್ ಕೆ ಪಾಟೀಲ್ ಬಹುತೇಕ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆಯಾಗುವುದು ಖಚಿತ ಎಂದು ಹೇಳಲಾಗುತ್ತಿದ್ದು, ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಬಹುದು. ಆ ಮೂಲಕ, ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರ ಹಿಡಿತವನ್ನು ಕಮ್ಮಿ ಮಾಡುವ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೋ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.