ಡಿಸೆಂಬರ್ 1ರಿಂದ 31ರವರೆಗೆ ಆಗುಂಬೆ ಘಾಟಿ ರಸ್ತೆ ಸಂಚಾರ ಬಂದ್
ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದರಿಂದ ಅಗುಂಬೆ ಘಾಟಿ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ಸಂಚಾರಕ್ಕೆ ತೊಂದರೆ ಅಗಬಾರದು ಎಂಬ ಕಾರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ
ಬೆಂಗಳೂರು, ನವೆಂಬರ್ 30: ಮಲೆನಾಡು ಹಾಗೂ ಕರಾವಳಿ ಕರ್ನಾಟಕದ ಮಧ್ಯೆ ಸಂಪರ್ಕಕ್ಕೆ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಳ್ಳಲಿದ್ದು, ಡಿಸೆಂಬರ್ 1ರಿಂದ 31ರವರೆಗೆ ಮುಚ್ಚಲಾಗುವುದು. ಆದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಿರುವುದಿಲ್ಲ.
2.40 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಹದಿನಾಲ್ಕು ಕಡಿದಾದ ತಿರುವುಗಳಿರುವ ಈ ರಸ್ತೆಯ ಏಳು ತಿರುವುಗಳಲ್ಲಿ ತಡೆಗೋಡೆಗಳು ಹಾಳಾಗಿವೆ. ಆದ್ದರಿಂದ ಗುಂಡಿಗಳನ್ನು ತುಂಬುವುದು, ಕಾಂಕ್ರೀಟ್ ಹಾಕುವ ಆಲೋಚನೆಯಿದ್ದು, ಇದಕ್ಕಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']
ಈ ಯೋಜನೆಗೆ 3.50 ಕೋಟಿ ರುಪಾಯಿ ವೆಚ್ಚವಾಗುವ ಅಂದಾಜಿದೆ. ದುರಸ್ತಿ ಕಾರ್ಯದ ನಿಮಿತ್ತ ರಸ್ತೆ ಬಂದ್ ಅಗುವುದರಿಂದ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮೂಡಬಿದಿರೆ, ಕಾರ್ಕಳ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ; ಕುಂದಾಪುರ-ಮಾಸ್ತಿಕಟ್ಟೆ-ಶಿವಮೊಗ್ಗ ಸಿದ್ದಾಪುರ, ಎಡೂರು ಮತ್ತು ತೀರ್ಥಹಳ್ಳಿ;
ಮತ್ತು ಕುಂದಾಪುರ-ಸಿದ್ದಾಪುರ-ಶಿವಮೊಗ್ಗ ರಸ್ತೆಯಲ್ಲಿ ಮಾಸ್ತಿಕಟ್ಟೆ, ರೇವ್ ಕ್ರಾಸ್, ಕೊಂಡ್ಲೂರು ಮತ್ತು ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದಾಗಿದೆ. ಈ ಮಧ್ಯೆ ಆಗುಂಬೆ, ಗುಡ್ಡೇಕೇರಿ, ಹೊಸೂರು, ಕವರಿಹಕ್ಳು, ಮೇಗರವಳ್ಳಿ ಮತ್ತು ನಾಲೂರು ನಿವಾಸಿಗಳು ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಆಗ್ರಹಿಸಿದ್ದಾರೆ.[ಉಡುಪಿ: ಸೋಮೇಶ್ವರ ಹೋಟೆಲಿನ 'ಭಕ್ತ' ಇನ್ನಿಲ್ಲ]
ತೀರ್ಥಹಳ್ಳಿಯಿಂದ ಉಡುಪಿ, ಮಂಗಳೂರಿಗೆ ಅಗುಂಬೆ ಮಾರ್ಗವಾಗಿ ಬಸ್ ಗಳು ಸಂಚರಿಸುತ್ತಿದ್ದವು. ಇದೀಗ ಆ ಬಸ್ ಗಳ ಸಂಚಾರ ನಿಲ್ಲುವುದರಿಂದ ಆ ಮಾರ್ಗದ ಹಳ್ಳಿಗಳಲ್ಲಿ ವಾಸಿಸುವರಿಗೆ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಈ ಮಾರ್ಗದಲ್ಲಿರುವ ನೂರಾರು ವಿದ್ಯಾರ್ಥಿಗಳು ತೀರ್ಥಹಳ್ಳಿಗೆ ಬರುತ್ತಾರೆ. ಈಗ ಆಗುಂಬೆ ಘಾಟಿ ರಸ್ತೆ ಸಂಚಾರಕ್ಕೆ ಬಂದ್ ಆಗುವುದರಿಂದ ಅವರಿಗೆಲ್ಲ ತೊಂದರೆಯಾಗುತ್ತದೆ.
ಆಗುಂಬೆ ಘಾಟಿ ಕೆಲಸ ಪೂರ್ತಿ ಆಗುವವರೆಗೆ ತೀರ್ಥಹಳ್ಳಿಯಿಂದ ಆಗುಂಬೆವರೆಗೆ ಮೇಗರವಳ್ಳಿ ಮೂಲಕ ಕರ್ನಾಟಕ ರಾಜ್ಯ ರಸ್ತೆ ನಿಗಮದ ಬಸ್ ಗಳು ಸಂಚರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.