ಅಗ್ನಿಪಥ್ ಯೋಜನೆಗೆ ಜನರ ರೋಷಾಗ್ನಿ..! ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಲರ್ಟ್
ಬೆಂಗಳೂರು, ಜೂನ್, 17: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಜನರ ರೋಷಾಗ್ನಿಗೆ ಕಾರಣವಾಗಿದೆ. ರಕ್ಷಣಾ ಪಡೆಯ ಮಹತ್ವಾಕಾಂಕ್ಷಿ ಯೋಜನೆ ಎಂದು ಹೇಳಲಾಗುತ್ತಿರುವ ಕೇಂದ್ರ ಸರ್ಕಾರದ ಕಳೆದ ಎರಡು ದಿನಗಳ ಹಿಂದೆ ಘೋಷಿಸಿದ್ದ ಅಗ್ನಿಪಥ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕರ್ನಾಟಕ ರೈಲ್ವೇ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
Recommended Video
ಅಗ್ನಿಪಥ್ ಯೋಜನೆ ಖಂಡಿಸಿರುವ ಪ್ರತಿಭಟನಾಕಾರರು ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದೆ. ಬಿಹಾರ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಸೋಗಿನಲ್ಲಿ ರೈಲು ತಡೆ, ಕಲ್ಲು ತೂರಾಟಗಳು ನಡೆದಿವೆ. ತೆಲಂಗಾಣದಲ್ಲಿ ಫೈರಿಂಗ್ನಿಂದ ಒಬ್ಬ ಯುವಕ ಬಲಿಯಾಗಿದ್ದಾನೆ.
ಬಿಹಾರ ಡಿಸಿಎಂ ಮನೆ ಮೇಲೆ ಉದ್ರಿಕ್ತರ ದಾಳಿ; ಅಗ್ನಿಪಥ್ ವಿರೋಧಿಸಿ ಶುಕ್ರವಾರವೂ ಹಲವೆಡೆ ಪ್ರತಿಭಟನೆ, ಹಿಂಸಾಚಾರ
ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಏರಿಕೆಯನ್ನು ಮಾಡಿದ್ದರು ಹೋರಾಟದ ಕಾವು ಕಡಿಮೆಯಾಗಿಲ್ಲ. 17 ವರ್ಷದಿಂದ 23 ವರ್ಷ ವಯೋಮಾನಕ್ಕೆ ಅಗ್ನಿಪಥ್ ಯೋಜನೆಯಲ್ಲಿ ಯುವಕರನ್ನು ಸೇರಿಸಿಕೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಕೆಲವೊಂದು ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಾವು ಇಳಿಯುತ್ತಿಲ್ಲ.
ರೈಲ್ವೆ ನಿಲ್ದಾಣದಲ್ಲಿ ಕೈಗೊಳ್ಳಬೇಕಿರುವ ಕ್ರಮ ಕುರಿತ ಚರ್ಚೆ
ನೆರೆಯ ರಾಜ್ಯದ ಹೋರಾಟದ ಕಾವು ಸೇರಿದಂತೆ ದೇಶದಲ್ಲಿ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಈ ದಿಢೀರ್ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ರೈಲ್ವೆ ಪೊಲೀಸರು ತುರ್ತು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ದೇಶನ ನೀಡಿದ್ದಾರೆ.
ಆರ್ಪಿಎಫ್ ಪೊಲೀಸರಿಗೆ ನಿರ್ದೇಶನ
ಅಗ್ನಿಪಥ್ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ರಾಜ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಇದರಿಂದಾಗಿ ಎಚ್ಚೆತ್ತುಕೊಂಡಿರುವ ನೈರುತ್ಯ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಆರ್ಪಿಎಫ್ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಮತ್ತೊಂದೆಡೆ ಭದ್ರತಾ ವಿಭಾಗದ ರೈಲ್ವೇ ಅಧಿಕಾರಿಗಳು ಆಯಾ ವಿಭಾಗದ ರೈಲ್ವೇ ಪೊಲೀಸರಿಗೆ ಆಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.
ರೈಲ್ವೆ ಹಳಿಗಳ ಬಳಿಯು ಕಾವಲಿಗೆ ಸೂಚನೆ
ಬೆಂಗಳೂರಿನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಯಶವಂತಪುರ, ಕಂಟ್ಮೋನೆಂಟ್ ರೈಲು ನಿಲ್ದಾಣ, ಹುಬ್ಬಳಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಾಕೀತು ಮಾಡಲಾಗಿದೆ. ರೈಲ್ವೇ ನಿಲ್ದಾಣಗಳ ಜೊತೆಗೆ ರೈಲ್ವೆ ಹಳಿಗಳ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ರೈಲು ತಡೆ ಸಾಧ್ಯತೆ ಹಿನ್ನೆಲೆಯಲ್ಲಿ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ.
ಪ್ರಯಾಣಿಕರ ಸೋಗಿನಲ್ಲಿ ಪ್ರತಿಭಟನೆ ಸಾಧ್ಯತೆ
ಕಾನೂನು ಪ್ರಕಾರ ರೈಲ್ವೆ ನಿಲ್ದಾಣದಲ್ಲಿ ಅಥವಾ ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ, ಧರಣಿ, ಅಥವಾ ರೈಲು ತಡೆಗೆ ಮುಂದಾಗುವುದು ನಿಷಿದ್ದಿವಾಗಿದೆ. ಕೆಲ ಪ್ರತಿಭಟನಾಕಾರರು ಪ್ರಯಾಣಿಕರ ವೇಷಧರಿಸಿ ಒಳಬಂದು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಸಿಕಂದರಬಾದ್ ರೈಲಿಗೆ ಬೆಂಕಿ ಇಟ್ಟು ಕಲ್ಲು ತೂರಾಟ ಅವಕಾಶ ಹೆಚ್ಚಿರುವುದರಿಂದ ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ತಪಾಸಣಾ ಹೆಚ್ಚಿಸಲಾಗಿದೆ. ಅನುಮಾನಾಸ್ಪಾದ ವ್ಯಕ್ತಿಗಳನ್ನ ಕಂಡುಬಂದರೆ ವಶಕ್ಕೆ ಪಡೆಯುವಂತೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
"ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆ ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಆಲರ್ಟ್ ಆಗಿರುವಂತೆ ಸಂಬಂಧ ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ'' ರೈಲ್ವೆ ಎಸ್ಪಿ ಸಿರಿಗೌರಿ ತಿಳಿಸಿದ್ದಾರೆ.