ಇನ್ನೂ ನಿಂತಿಲ್ಲ ಆಪರೇಷನ್ ಕಮಲ; ಈ ಸಾರಿ ಯಾರಿಗೆ ಗಾಳ?
ಬೆಂಗಳೂರು, ಡಿಸೆಂಬರ್ 8; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದೇ ಬಿಂಬಿತವಾಗಿರುವ ಉಪ ಚುನಾವಣೆಯ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ. 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಬಿಜೆಪಿ ಪಡೆ ಇದೆ.
ಕನಿಷ್ಠ ಹತ್ತು ಸ್ಥಾನಗಳನ್ನು ಗೆಲ್ಲುತ್ತೇವೆ ನಾವು ಎಂದು ಬಿಜೆಪಿ ನಾಯಕರು ಹೊರನೋಟಕ್ಕೆ ಬೀಗುತ್ತಿದ್ದರೇ, ಯಡಿಯೂರಪ್ಪ ಆದಿಯಾಗಿ ಹಲವು ಬಿಜೆಪಿ ನಾಯಕರಿಗೆ ಎಂಟು ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳು ಬಂದರೆ ಏನು ಮಾಡುವುದು ಎಂಬ ಚಿಂತೆ ಒಳಗೊಳಗೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ತೆರೆಮರೆಯಲ್ಲಿ ಇನ್ನೂ ಕೂಡ ಆಪರೇಷನ್ ಕಮಲದ ಪ್ರಯತ್ನವನ್ನು ಕೈ ಬಿಟ್ಟಿಲ್ಲ.
ಉಮೇಶ ಕಾರಜೋಳ ಅಖಾಡಕ್ಕೆ
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮಗ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾದ ಖಜಾಂಚಿ ಉಮೇಶ ಕಾರಜೋಳ ಅವರು ರಾಯಚೂರು ಜಿಲ್ಲೆಯ ಲಿಂಗಸ್ಗೂರು ಶಾಸಕ ಡಿ.ಎಸ್.ಹೂಲಗೇರೆ ಅವರನ್ನು ಇತ್ತೀಚೆಗೆ ರಾಯಚೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಮತ್ತೆ ಆಪರೇಷನ್ ಕಮಲದ ಆತಂಕವನ್ನು ವಿರೋಧ ಪಕ್ಷಗಳಲ್ಲಿ ಹುಟ್ಟಿಹಾಕಿದೆ. ಡಿ.ಎಸ್.ಹೂಲಗೇರೆ ಅವರು ಸದ್ಯ ಲಿಂಗಸ್ಗೂರು ಮೀಸಲು ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಮನಸ್ಸು ಮಾಡುತ್ತಾರಾ ಹೂಲಗೇರೆ?
ಉಮೇಶ ಕಾರಜೋಳ ಹಾಗೂ ಡಿ.ಎಸ್.ಹೂಲಗೇರೆ ಅವರು ಒಂದೇ ಸಮುದಾಯದವರಾಗಿದ್ದು, ಉಮೇಶ್ ಅವರು ಹೂಲಗೇರೆ ಅವರನ್ನು ಇತ್ತೀಚೆಗೆ ಒಂದೇ ಬಾರಿ ಭೇಟಿಯಾಗಿಲ್ಲ. ಐದಾರು ಬಾರಿ ಭೇಟಿಯಾಗಿರುವುದೇ ಆಪರೇಷನ್ ಕಮಲಕ್ಕೆ ಹೂಲಗೇರೆ ಅವರು ಬಿಳ್ಳುತ್ತಾರಾ ಎಂಬ ಅನುಮಾನಕ್ಕೆ ಪುಷ್ಠಿ ಕೊಟ್ಟಿದೆ. ಒಂದು ವೇಳೆ ಫಲಿತಾಂಶ ಬಿಜೆಪಿಗೆ ಕೈ ಕೊಟ್ಟರೇ, ಹೂಲಗೇರೆ ಅವರು ಬಿಜೆಪಿಗೆ ಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿ ಮೂಡಿ ಬರುತ್ತಿವೆ. ಆದರೆ, ಉಮೇಶ್ ಹಾಗೂ ಶಾಸಕ ಹೂಲಗೇರೆ ಅವರು ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಜಾರಿಕೊಂಡಿದ್ದಾರೆ.
ವಿರೋಧ ಪಕ್ಷಗಳಿಗೆ ಆತಂಕ
ನಾಳೆ ಬರುವ ಉಪ ಚುನಾವಣೆಯಲ್ಲಿನ ಬಿಜೆಪಿ ಸರಳ ಬಹುಮತದ ಸೀಟು ಗೆಲ್ಲುವುದಿಲ್ಲ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದರು. ಆದ್ರೆ ಇದೀಗ ಕಮಲ ಪಾಳೆಯ ಮತ್ತೆ ಆಪರೇಶನಕ್ ಕಮಲದ ಭೀತಿಯನ್ನ ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಗೆ ಒಡ್ಡಿದೆ. ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯೆ ಕೊಡಲಿದೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮತ್ತೊಂದು ಸುತ್ತಿನ ಡ್ರಾಮಾ?
ನಾಳೆ 15 ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿರುವುದರಿಂದ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳ ಚಿತ್ತ ಸಂಪೂರ್ಣ ಅತ್ತ ನೆಟ್ಟಿದೆ. ಒಂದು ವೇಳೆ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಬಂದರೆ ಸರ್ಕಾರ ಸುಗಮವಾಗಿ ನಡೆಯಲಿದೆ. ಇಲ್ಲದಿದ್ದರೇ ಮತ್ತೊಂದು ಸುತ್ತಿನ ರಾಜಕೀಯ ಡ್ರಾಮಾಕ್ಕೆ ಕರ್ನಾಟಕ ಸಾಕ್ಷಿಯಾಗಲಿದೆ.