ಕಾಂಗ್ರೆಸ್ ಬಿಡಲಿದ್ದೆ, ಸಿಎಂ ಮನಃಪರಿವರ್ತನೆ ಮಾಡಿದರು; ಗುತ್ತೆದಾರ್
ಕಲಬುರಗಿ, ಡಿಸೆಂಬರ್ 16: 'ಕಾಂಗ್ರೆಸ್ ಪಕ್ಷ ಬಿಡುವ ಯೋಚನೆ ಮಾಡಿದ್ದೆ ಆದರೆ ಸಿದ್ದರಾಮಯ್ಯ ಅವರು ನನ್ನ ಮನಃಪರಿವರ್ತನೆ ಮಾಡಿದ್ದಾರೆ ಹಾಗಾಗಿ ಕಾಂಗ್ರೆಸ್ನಲ್ಲೇ ಇರುತ್ತೇನೆ' ಎಂದು ಶಾಸಕ ಮಾಲೀಕಯ್ಯ ಗುತ್ತೆದಾರ್ ಹೇಳಿದ್ದಾರೆ.
ಅಪ್ಜಲ್ಪುರದಲ್ಲಿ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ನಾನು ಕಾಂಗ್ರೆಸ್ ಪಕ್ಷ ಬಿಡುವ ಯೋಚನೆ ಮಾಡಿದ್ದೆ ಆದರೆ ಈಗ ಆ ಯೋಚನೆಯನ್ನು ಕೈಬಿಟ್ಟಿದ್ದೇನೆ, ನಾನು ಮತ್ತು ಮಾಲಕರೆಡ್ಡಿ ಮುಳುಗುವುದಾದರೆ ಸಿದ್ದರಾಮಯ್ಯ ಅವರ ಜೊತೆಗೇ ಮುಳುಗುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರ ವರ್ತನೆಯಿಂದ ನೊಂದಿದ್ದೆ ಆದರೆ ಸಿದ್ದರಾಮಯ್ಯ ಅವರು ನನ್ನ ಅಸಮಾಧಾನ ಹೋಗಲಾಡಿಸಿದ್ದಾರೆ, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಾನು ನಡೆಯಲಿದ್ದೇನೆ ಎಂದು ಹೇಳಿದರು.
ಮಾಲೀಕಯ್ಯ ಗುತ್ತೆದಾರ್ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮುನಿಸಿಕೊಂಡು ಬಹಿರಂಗವಾಗಿ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಹಾಗಾಗಿ ಅವರು ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆ ಎಂಬ ಊಹಾಪೋಹ ಕ್ಷೇತ್ರದಲ್ಲಿ ಹರಿದಾಡಿತ್ತು ಆದರೆ ಈಗ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.