ಅನೈತಿಕ ಸಂಬಂಧದ ಅನುಮಾನ, ಹೆಂಡತಿ ದೇಹ ತುಂಡಾಗಿ ಕತ್ತರಿಸಿದ ಗಂಡ
ದೊಡ್ಡಬಳ್ಳಾಪುರ, ಫೆಬ್ರವರಿ 22: ಪತ್ನಿ ಜೀವನಾಂಶ ಕೇಳುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನೇ ಪತಿ ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮಹಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಗ್ರಾಮದ ರಾಜೇಶ್ ತನ್ನ ಹೆಂಡತಿ ಲಕ್ಷ್ಮೀಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ.
ದೊಡ್ಡಬಳ್ಳಾಪುರದ ಬೊಮ್ಮಹಳ್ಳಿಯ ರಾಜೇಶನಿಗೆ ಇದೇ ತಾಲೂಕಿನ ತಪಸ್ಸಿಹಳ್ಳಿಯ ಲಕ್ಷ್ಮೀ ಜತೆ ಎಂಟು ವರ್ಷದ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಎರಡು ವರ್ಷ ಸಂಸಾರ ಸುಖವಾಗಿಯೂ ಇತ್ತು. ಆ ನಂತರ ಗರ್ಭಿಣಿಯಾದ ಲಕ್ಷ್ಮೀ ತನ್ನ ತವರಿಗೆ ತೆರಳಿದ್ದಾರೆ. ಈ ವೇಳೆ ರಾಜೇಶ್ ಮತ್ತೊಂದು ಮದುವೆಯಾಗಿದ್ದಾನೆ.
ಅನೈತಿಕ ಸಂಬಂಧ, ಗಂಡನ ಮರ್ಮಾಂಗಕ್ಕೆ ಸಂಚಕಾರ
ಈ ವಿಚಾರ ತಿಳಿದ ಲಕ್ಷ್ಮೀ ಪತಿಯಿಂದ ವಿಚ್ಛೇದನ ಕೊಡಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಲಕ್ಷ್ಮೀಗೆ ವಿಚ್ಛೇದನ ನೀಡಿ, ಐದು ಸಾವಿರ ಜೀವನಾಂಶ ನೀಡುವಂತೆ ಕೋರ್ಟ್ ರಾಜೇಶನಿಗೆ ಆದೇಶಿಸಿದೆ. ಕೆಲ ವರ್ಷ ಜೀವನಾಂಶ ನೀಡಿದ ರಾಜೇಶ, ಆ ನಂತರ ಹಿಂದೇಟು ಹಾಕಿದ್ದಾನೆ. ಆ ಸನ್ನಿವೇಶದಲ್ಲಿ ಆಕೆ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ವೇಳೆ ರಾಜೇಶ, ಹೆಂಡತಿಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ. ಆಕೆ ಜತೆ ಸಂಸಾರ ಮಾಡುವುದಾಗಿ ಕೋರ್ಟ್ ನಲ್ಲಿ ಹೇಳಿದ್ದಾನೆ. ಅದಕ್ಕೆ ಹೆಂಡತಿ ಲಕ್ಷ್ಮೀ ಸಹ ಒಪ್ಪಿದ್ದಾನೆ. ಇಬ್ಬರು ಹೆಂಡತಿಯರ ಜೊತೆ ಸಂಸಾರ ಆರಂಭಿಸಿದ ರಾಜೇಶ ಕೆಲವೇ ದಿನಗಳಲ್ಲಿ ಮತ್ತೆ ಲಕ್ಷ್ಮಿಯೊಂದಿಗೆ ವಿನಾಕಾರಣ ಜಗಳ ಆರಂಭಿಸಿ, ಅನೈತಿಕ ಸಂಬಂಧದ ಆರೋಪ ಮಾಡಿದ್ದಾನೆ.
ಓಂಶಕ್ತಿ ಮಾಲೆ ಧರಿಸಿದ್ದ ಲಕ್ಷ್ಮಿ ಅಲ್ಲಿಂದ ವಾಪಸಾದ ಮೇಲೆ ಮತ್ತೆ ಜಗಳ ಮಾಡಿದ ರಾಜೇಶ ಆಕೆಯನ್ನು ದೊಣ್ಣೆಯಲ್ಲಿ ಹೊಡೆದು ಸಾಯಿಸಿದ್ದಾನೆ. ಆಕೆಯ ಮೃತ ದೇಹವನ್ನು ಊರಿನ ಹೊರಗಿನ ತೋಪಿಗೆ ತೆಗೆದುಕೊಂಡು ಹೋಗಿ, ರುಂಡ- ಮುಂಡ ಬೇರ್ಪಡಿಸಿದ್ದಾನೆ. ದೇಹವನ್ನು ನಾಲ್ಕು ಭಾಗವಾಗಿ ಕತ್ತರಿಸಿ, ದೇಹದ ಭಾಗವನ್ನು ಗುಂಡಸಂದ್ರ ಕೆರೆ ಬಳಿಯಲ್ಲಿ ಹೂತು ಹಾಕಿ, ತಲೆಯನ್ನು ಸುಟ್ಟು ಹಾಕಿದ್ದಾನೆ.
ದೂರು ದಾಖಲಾದ ನಂತರ ರಾಜೇಶನನ್ನು ಪೊಲೀಸರು ವಿಚಾರಣೆ ಮಾಡಿದಾಗ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕೊಲೆಯಲ್ಲಿ ರಾಜೇಶನ ಕುಟುಂಬದವರು ಭಾಗಿಯಾಗಿದ್ದಾರೆ ಎಂದು ಲಕ್ಷ್ಮೀ ಪೋಷಕರು ದೂರುತ್ತಿದ್ದು, ರಾಜೇಶನ ಕುಟುಂಬದವರು ತಲೆ ಮರೆಸಿಕೊಂಡಿದ್ದಾರೆ.