ಸುಪ್ರೀಂ ತೀರ್ಪು ಹೊರಬಿದ್ದರೂ ಮುಂದುವರಿದ ಎಚ್ ವಿಶ್ವನಾಥ್ ಅನಿಶ್ಚಿತತೆ
ಹದಿನೇಳು ಶಾಸಕರ ಅನರ್ಹತೆಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಲೇವಾರಿ ಮಾಡಿದೆ. ಸ್ಪೀಕರ್ ಅವರ ಅನರ್ಹತೆ ಆದೇಶವನ್ನು ಸುರ್ಪೀಂ ಎತ್ತಿಹಿಡಿದರೂ, ಉಪಚುನಾವಣೆಗೆ ಸ್ಪರ್ಧಿಸಲು ಓಕೆ ಎಂದಿದೆ.
"ಸರ್ವೋಚ್ಚ ನ್ಯಾಯಾಲಯದ ಪ್ರಕಾರ 'ಅನರ್ಹ'ರಾದವರು ಮತ್ತೆ ಚುನಾವಣೆಗೆ ಜನರ ಮುಂದೆ ಹೇಗೆ ಹೋಗುತ್ತಾರೆ ಎನ್ನುವುದು ಅರ್ಥವಾಗದ ವಿಚಾರ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಹದಿನೇಳು ಶಾಸಕರಲ್ಲಿ ಹುಣಸೂರಿನಿಂದ ಗೆದ್ದಿದ್ದ ಎಚ್. ವಿಶ್ವನಾಥ್ ಕೂಡಾ ಒಬ್ಬರು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕ ಸ್ಥಾನಕ್ಕೂ ಇವರು ರಾಜೀನಾಮೆ ನೀಡಿದ್ದರು.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಅವರು ಸಚಿವರಾಗಬೇಕಿದ್ದರೆ, ಮತ್ತೆ ಚುನಾವಣೆಯಲ್ಲಿ ಗೆದ್ದು ಬರಬೇಕಾಗುತ್ತದೆ. ಆದರೆ, ಇವರ ಲೆಕ್ಕಾಚಾರ ಇದಾಗಿರಲಿಲ್ಲ.
ಎಚ್. ವಿಶ್ವನಾಥ್ ಅಷ್ಟೇನೂ ಉತ್ಸುಕರಾಗಿರಲಿಲ್ಲ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮತ್ತೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಎಚ್. ವಿಶ್ವನಾಥ್ ಅಷ್ಟೇನೂ ಉತ್ಸುಕರಾಗಿರಲಿಲ್ಲ. ಅವರ ಲೆಕ್ಕಾಚಾರ ಏನಿತ್ತೆಂದರೆ, ವಿಧಾನಪರಿಷತ್ ಸದ್ಯಸರಾಗುವ ಬಯಕೆ ಅವರಿಗಿತ್ತು ಎಂದು ಹೇಳಲಾಗುತ್ತಿದೆ.
ಇವರ ಲೆಕ್ಕಾಚಾರಕ್ಕೆ ಸುಪ್ರೀಂ ತಣ್ಣೀರೆರೆಚಿದೆ
ಸದ್ಯಕ್ಕೆ ಸಚಿವರಾಗಿ, ನಂತರ ಪರಿಷತ್ ಸ್ಥಾನ ಖಾಲಿಯಾದಾಗ ಮೇಲ್ಮನೆ ಸದಸ್ಯರಾಗುವ ಇರಾದೆಯನ್ನು ವಿಶ್ವನಾಥ್ ಇಟ್ಟುಕೊಂಡಿದ್ದರು. ಆದರೆ, ಇವರ ಲೆಕ್ಕಾಚಾರಕ್ಕೆ ಸುಪ್ರೀಂ ತಣ್ಣೀರೆರೆಚಿದೆ. ಈಗ,, ಒಂದೋ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಬರಬೇಕು. ಇಲ್ಲದಿದ್ದರೆ, ಮೇಲ್ಮನೆಯಲ್ಲಿ ಸ್ಥಾನ ಖಾಲಿಯಾಗುವವರೆಗೆ ಕಾಯಬೇಕು.
ವಿಧಾನಪರಿಷತ್ ಸ್ಥಾನ ಖಾಲಿಯಾಗಲು ಇನ್ನೂ ಏಳು ತಿಂಗಳಿದೆ
ವಿಧಾನಪರಿಷತ್ ಸ್ಥಾನ ಖಾಲಿಯಾಗಲು ಇನ್ನೂ ಏಳು ತಿಂಗಳಿದೆ. ಅಂದರೆ, ವಿಶ್ವನಾಥ್ ಮುಂದಿನ ವರ್ಷದ ಜೂನ್ ತಿಂಗಳ ವರೆಗೆ ಕಾಯಬೇಕಿದೆ. ಇಲ್ಲದಿದ್ದರೆ, ಯಾರಿಂದಾದರೂ ರಾಜೀನಾಮೆ ಕೊಡಿಸಿ, ಸಚಿವ ಸ್ಥಾನ ಪಡೆದುಕೊಳ್ಳಬೇಕಾಗುತ್ತದೆ. ಸದ್ಯದ ಮಟ್ಟಿಗೆ ಅದು ಕಷ್ಟ.
ವಿಶ್ವನಾಥ್ ಅವರೇ ಜಿಟಿಡಿ ಬಳಿ ಮಾತನಾಡಿದ್ದರು
ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಸಿ.ಪಿ,ಯೋಗೇಶ್ವರ್ ಮತ್ತು ಜಿ,ಟಿ.ದೇವೇಗೌಡರ ಪುತ್ರ ಹರೀಶ್ ಗೌಡ ಅವರ ಹೆಸರು ಕೇಳಿಬರುತ್ತಿತ್ತು. ಖುದ್ದು, ವಿಶ್ವನಾಥ್ ಅವರೇ ಜಿಟಿಡಿ ಬಳಿ ಮಾತನಾಡಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಸ್ಪರ್ಧಿಸಲೇ ಬೇಕಾದ ಅನಿವಾರ್ಯತೆಯಲ್ಲಿರುವ ಎಚ್.ವಿಶ್ವನಾಥ್
ಈಗ ಸಚಿವ ಸ್ಥಾನ ಬೇಕಾದರೆ, ಸ್ಪರ್ಧಿಸಲೇ ಬೇಕಾದ ಅನಿವಾರ್ಯತೆಯಲ್ಲಿರುವ ಎಚ್.ವಿಶ್ವನಾಥ್ ಅವರ ಮುಂದಿನ ನಡೆ ಏನೆಂದು ಕಾದುನೋಡಬೇಕಿದೆ. ಮೂಲಗಳ ಪ್ರಕಾರ, ವಿಶ್ವನಾಥ್ ಸ್ಪರ್ಧಿಸಿದರೆ, ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇರುವುದಿಲ್ಲ.