ಸುಪ್ರೀಂ ತೀರ್ಪು ಬಂದಿದೆ, ವಿಶ್ವಾಸಮತಕ್ಕೆ ಕಾಯದೇ ಎಚ್ಡಿಕೆ ರಾಜೀನಾಮೆ ನೀಡಲಿ
ಬೆಂಗಳೂರು, ಜುಲೈ 17: ಅತೃಪ್ತ ಶಾಸಕರ ರಾಜೀನಾಮೆ ಆಂಗೀಕಾರ ವಿಳಂಬ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಿರಿಯ ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಶ್ವಾಸಮತಯಾಚನೆ ತನಕ ಕಾಯದೇ, ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದಿದ್ದಾರೆ.
ಸುಪ್ರೀಂ ಆದೇಶ LIVE: ಸ್ಪೀಕರ್ಗೆ ಸೂಚನೆ ಇಲ್ಲ, ಅತೃಪ್ತರಿಗೆ ವಿಪ್ ಇಲ್ಲ
ಮುಖ್ಯಮಂತ್ರಿಗಳಿಂದಾಗಿ ರಾಜ್ಯದಲ್ಲಿ ಅರಾಜಕತೆ ಎದ್ದಿದೆ, ಮುಖ್ಯಮಂತ್ರಿಗಳ ಮೇಲೆ ಮತ್ತು ಸಮ್ಮಿಶ್ರ ಸರಕಾರದ ಮೇಲೆ ಜನರಿಗೂ ನಂಬಿಕೆಯಿಲ್ಲ, ವಿಶ್ವಾಸಮತ ಗೆಲ್ಲುವ ವಿಶ್ವಾಸವೂ ಅವರಿಗಿಲ್ಲ, ಹಾಗಾಗಿ ಅವರು ರಾಜೀನಾಮೆ ನೀಡುವುದೇ ಸೂಕ್ತ ಎಂದು ಶೆಟ್ಟರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರಕಾರ, ಅತೃಪ್ತ ಶಾಸಕರು, ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲೇ ಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಹಾಗಾಗಿ, ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ.
ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಪೀಕರ್ ತಮ್ಮ ನಿರ್ಧಾರ ಪ್ರಕಟಿಸಬೇಕೆಂದು ಸೂಚಿಸಲು ಸಾಧ್ಯವಿಲ್ಲ ಎಂದಿರುವ ತ್ರಿಸದಸ್ಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠ, ಸ್ಪೀಕರ್ ತಮ್ಮ ವಿವೇಚನೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಿ ಎಂದು ನ್ಯಾಯಾಲಯ ಹೇಳಿದೆ.
ಇದೊಂದು ಮಧ್ಯಂತರ ಆದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸವಿವರವಾಗಿ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳೋಣ ಎಂದು ಸುಪ್ರೀಂಕೋರ್ಟ್ ಹೇಳಿದೆ.