ಸಂಕ್ರಾಂತಿ ನಂತರ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬದಲಾವಣೆ!
ಬೆಂಗಳೂರು, ಜನವರಿ 10; ಕರ್ನಾಟಕದ ವಿಧಾನಸಭೆ ಚುನಾವಣೆ ಇನ್ನು ಒಂದು ವರ್ಷ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಪ್ರಮುಖ ಮೂರು ಪಕ್ಷಗಳಲ್ಲಿ ಬೇರೆ ಪಕ್ಷಕ್ಕೆ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಪಕ್ಷಾಂತರದ ದೊಡ್ಡ ಇತಿಹಾಸವಿದೆ. ಇದನ್ನೊಮ್ಮೆ ಅಧ್ಯಯನ ಮಾಡಿಬಿಟ್ಟರೆ ಯಾರೂ ಸಿದ್ಧಾಂತಕ್ಕಾಗಿ ಬಡಿದಾಡಿದವರೇ ಅಲ್ಲ. ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಪಕ್ಷಾಂತರ ನಡೆಸಿದವರೇ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಮತದಾರರ ಮನವೊಲಿಸಲು ಸಾಕಷ್ಟು ಕಸರತ್ತುಗಳಲ್ಲಿ ತೊಡಗಿದೆ. ಸಂಕ್ರಾಂತಿ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಿಜೆಪಿಗೆ, ಬಿಜೆಪಿ ಹಾಗೂ ಜೆಡಿಎಸ್ನಿಂದ ಕಾಂಗ್ರೆಸ್ಗೆ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಜೆಡಿಎಸ್ಗೆ ಒಂದಷ್ಟು ಶಾಸಕರು, ಮುಖಂಡರ ವಲಸೆಗೆ ಮಹೂರ್ತ ನಿಗದಿಯಾಗಿದೆ. ಮೂರೂ ಪಕ್ಷಗಳಲ್ಲಿ ಜಿಗಿತ ಆಗಲಿದೆ. ಇದು ಪಕ್ಷಗಳ ಗೆಲುವಿನ ಲೆಕ್ಕಾಚಾರದ ಮೇಲೆ ಬೀರುವ ಪರಿಣಾಮ ಸಣ್ಣಮಟ್ಟದ್ದೇನಲ್ಲ. ಇದೆಲ್ಲವನ್ನೂ ತಣಿಸಿ ಬಂಡಾಯದ ಬಿಸಿ ತಟ್ಟದಂತೆ ನೋಡಿಕೊಂಡು ಒಳಗೊಳಗೆ ಪ್ರಾರಂಭವಾಗುವ ಸಿಟ್ಟು ಶಮನ ಮಾಡಿ, ಒಳ ಏಟು ಬೀಳದಂತೆ ಜಾಗೃತೆ ವಹಿಸಿ ಚುನಾವಣೆ ನಡೆಸುವುದು ಒಂದು ದೊಡ್ಡ ಸವಾಲೇ ಸರಿ.
2023ರ ವಿಧಾನಸಭೆ ಚುನಾವಣೆ ಮಾರ್ಚ್, ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ನಡೆಯುವ ಸಂಭವವಿದೆ. ಆಗಲೇ ಹಾಲಿ, ಮಾಜಿ ಶಾಸಕರು ಸುರಕ್ಷಿತ ಕ್ಷೇತ್ರಗಳತ್ತ ಚಿತ್ತ ಹರಿಸಿದ್ದಾರೆ. ತತ್ವ, ಸಿದ್ಧಾಂತ ಯಾವುದನ್ನೂ ಲೆಕ್ಕಿಸದೇ ಗೆಲ್ಲುವುದೇ ಮಾನದಂಡವಾಗಿಟ್ಟುಕೊಂಡಿರುವ ಅನೇಕರು ತಮಗೆ ಸುರಕ್ಷಿತ ಎನಿಸಿದ ಪಕ್ಷಗಳತ್ತ ವಲಸೆ ಹೋಗುತ್ತಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಸ್ಥಳೀಯ ಮುಖಂಡರು ಮತ್ತು ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ಜೋರಾಗಿದೆ. ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್ನತ್ತ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ವಲಸೆ ಹೋಗುತ್ತಿದ್ದರೆ, ತೆನೆ ಹೊತ್ತ ಮಹಿಳೆ ಕೂಡ ಅನ್ಯ ಪಕ್ಷಗಳ ಅತೃಪ್ತರಿಗೆ ಗಾಳ ಹಾಕಿದೆ.
ಇದ್ದುದ್ದರಲ್ಲೇ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಕಡೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಇನ್ನು ಒಂದು ವರ್ಷ ಇರುವಾಗಲೇ ಟಿಕೆಟ್ ಖಾತರಿಪಡಿಸಿಕೊಂಡು ಕ್ಷೇತ್ರದಲ್ಲಿ ಮತದಾರರ ಮನಗೆಲ್ಲುವುದು ಇವರ ಉದ್ದೇಶವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕಡೆ ವಲಸಿಗರ ಸಂಖ್ಯೆ ಹೆಚ್ಚುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಯಾರ್ಯಾರು, ಯಾವ ಕಡೆ ಹೋಗುತ್ತಾರೆ? ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗುವ ಸಂಭವವಿದ್ದರೂ ಕೆಲವರು ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ಕಡೆ ಜಿಗಿಯಲು ಹಾತೊರೆಯುತ್ತಿದ್ದಾರೆ. ಚುನಾವಣೆ ಸಮೀಪಿಸುವವರೆಗೂ ಗುಟ್ಟು ರಟ್ಟು ಮಾಡದೆ ಕೊನೆ ಕ್ಷಣದಲ್ಲಿ ಟಿಕೆಟ್ ಖಚಿತವಾಗುತ್ತಿದ್ದಂತೆ ಪಕ್ಷ ಬದಲಿಸುವುದು ಇವರ ಮುಖ್ಯ ಉದ್ದೇಶ.
ಜೆಡಿಎಸ್ ಪಕ್ಷಕ್ಕೆ ದೊಡ್ಡ ನಷ್ಟ
2018ರ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ಮೇಕರ್ ಸ್ಥಾನ ಗಳಿಸಿದ ಜೆಡಿಎಸ್ಗೆ ಮುಂಬರುವ ಚುನಾವಣೆಯಲ್ಲಿ ಭಾರೀ ಹೊಡೆತ ಕೊಡುವ ಲಕ್ಷಣಗಳು ಗೋಚರಿಸಿವೆ. 2019ರ ಲೋಕಸಭೆ ಚುನಾವಣೆಯಿಂದ ಆರಂಭವಾಗಿರುವ ದಳಪತಿಗಳ ಅಧಃಪತನ ಈಗಲೂ ಕೂಡ ಮುಂದುವರೆದಿದೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋತು ಪಕ್ಷ ಕೈ ಸುಟ್ಟುಕೊಂಡ ನಂತರ ಜೆಡಿಎಸ್ಗೆ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆವರೆಗೂ ಸಿಹಿಗಿಂತ ಕಹಿಯೇ ಜಾಸ್ತಿಯಾಗಿದೆ. ಪಕ್ಷದ ವರಿಷ್ಠ ದೇವೇಗೌಡ ಒಂದು ಕಡೆಯಾದರೆ, ಅಧಿಕಾರದ ಹಾಪಹಪಿಗೆ ಬಿದ್ದಿರುವ ಕುಮಾರಸ್ವಾಮಿ ತಪ್ಪು ನಿರ್ಧಾರಗಳಿಂದಾಗಿ ಅನೇಕ ಶಾಸಕರು ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಮೈಸೂರು ಭಾಗದಲ್ಲಿ ಭರ್ಜರಿ ಬೆಳೆ ಬೆಳೆದಿತ್ತು. ಕಾವೇರಿ ಜಲಾನಯನ ತೀರಾ ಪ್ರದೇಶಗಳಲ್ಲೇ ಜೆಡಿಎಸ್ ನಿರೀಕ್ಷೆಗೂ ಮೀರಿದ ಹೆಚ್ಚಿನ ಸ್ಥಾನಗಳನ್ನು ಗಳಿಸಿದ ಪರಿಣಾಮ ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಗಿ ಅಧಿಕಾರ ಕಳೆದುಕೊಳ್ಳುವಂತಾಯಿತು.
ಸಾಲು-ಸಾಲು ನಾಯಕರು ಪಕ್ಷ ಬಿಡುತ್ತಿದ್ದಾರೆ
ಇದೀಗ ಜೆಡಿಎಸ್ನ ಎಡವಟ್ಟಿನಿಂದಾಗಿ ಆ ಪಕ್ಷದ ಸಾಲು ಸಾಲು ನಾಯಕರು ಜೆಡಿಎಸ್ ಬಿಟ್ಟು ಹೊರಟಿದ್ದಾರೆ. ಈಗಾಗಲೇ ಬಹುತೇಕ ಜೆಡಿಎಸ್ನಿಂದ ಸಂಬಂಧ ಕಳೆದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ, ಟಿ. ನರಸೀಪುರದ ಅಶ್ವಿನ್ಕುಮಾರ್, ಪಿರಿಯಾಪಟ್ಟಣದ ಮಹದೇವು, ಅರಕಲಗೂಡಿನ ಎ. ಟಿ. ರಾಮಸ್ವಾಮಿ, ಅರಸೀಕೆರೆ ಶಿವಲಿಂಗೇಗೌಡ, ಬೇಲೂರಿನ ಲಿಂಗೇಶ್ ಸೇರಿದಂತೆ ಅನೇಕರು ದಳಪತಿಗಳಿಗೆ ಶಾಕ್ ನೀಡಲು ಮುಂದಾಗಿದ್ದಾರೆ.
ವಿಶೇಷವೆಂದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ಗೆ ಏಟಿನ ಮೇಲೆ ಏಟು ಕೊಡುತ್ತಿರುವುದು ಕಾಂಗ್ರೆಸ್. ಬಿಜೆಪಿಗೆ ಈ ಭಾಗದಲ್ಲಿ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಹೀಗಾಗಿ ದಳಪತಿಗಳು ಹಳೆ ಮೈಸೂರಿನಲ್ಲಿ ಸಾಧ್ಯವಾದಷ್ಟು ಹೈಜಾಕ್ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಹಳೇ ಮೈಸೂರಿನಲ್ಲಿ ಜೆಡಿಎಸ್ ಶಕ್ತಿಯನ್ನು ಕುಂದಿಸಿದರೆ ಸಹಜವಾಗಿ ಅದರ ಲಾಭ ಕಾಂಗ್ರೆಸ್ಗೆ ಸಿಗಲಿದೆ ಎಂಬ ಲೆಕ್ಕಾಚಾರಿದಂದಲೇ ಕೈ ಪಡೆ ಜೆಡಿಎಸ್ಗೆ ಏಟಿನ ಮೇಲೆ ಏಟು ನೀಡುತ್ತಿದೆ.
ಬಿಜೆಪಿಯಲ್ಲೂ ಇದೇ ಕಥೆ
ಆಡಳಿತಾರೂಢ ಬಿಜೆಪಿಯಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಆಪರೇಷನ್ ಕಮಲದಿಂದ ಪಕ್ಷ ತೊರೆದಿದ್ದ ಅನೇಕರು ಮತ್ತೆ ಮಾತೃಪಕ್ಷದತ್ತ ಮುಖ ಮಾಡುವ ಹವಣಿಕೆಯಲ್ಲಿದ್ದಾರೆ. ಎಸ್. ಟಿ. ಸೋಮಶೇಖರ್, ಬೈರತಿ ಬಸವರಾಜ್, ನಾರಾಯಣಗೌಡ, ಬಿ. ಸಿ. ಪಾಟೀಲ್, ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ ಸೇರಿದಂತೆ ಅನೇಕರು ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಮಾಜಿ ಶಾಸಕ ಎ. ಮಂಜು ಈಗಾಗಲೇ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ.
Recommended Video
ಆಪರೇಷನ್ ಕಮಲ ತಂತ್ರ
2008ರ ವಿಧಾನಸಭಾ ಚುನಾವಣೆಯಲ್ಲಿ 110 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಬಿಜೆಪಿ ಸಿದ್ದರಾಮಯ್ಯ ಬಳಸಿದ್ದ ತಂತ್ರವನ್ನೇ ಅನುಸರಿಸಿತ್ತು. ತನ್ನ ಶಾಸಕರ ಬೆಂಬಲದ ನೆಲೆ ವಿಸ್ತರಿಸಿಕೊಳ್ಳಲು, ಜೆಡಿಎಸ್-ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿಸಿತ್ತು. ಇದು ಆಪರೇಷನ್ ಕಮಲ ಎಂದು ಕುಖ್ಯಾತಿ ಪಡೆಯಿತು. ಹೆಚ್ಚೂ ಕಡಿಮೆ 20ಕ್ಕೂ ಹೆಚ್ಚು ಶಾಸಕರು ಆಪರೇಷನ್ ಕಮಲಕ್ಕೆ ಗುರಿಯಾದರು. ಇದು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೊಂಡ ನಂತರ ವಿಭಿನ್ನ ರೀತಿಯ ಪಕ್ಷಾಂತರ ಎನ್ನುವ ಗಂಭೀರ ಟೀಕೆಗೆ ಗುರಿಯಾಯಿತು.
ಈ ಪಕ್ಷಾಂತರದಲ್ಲಿ ಅಧಿಕ ಸಂಖ್ಯೆಯ ಪಕ್ಷಾಂತರಿಗಳು ಗೆಲುವು ಸಾಧಿಸಿದ್ದರು. 60ರ ದಶಕದ ಉತ್ತರಾರ್ಧದಲ್ಲಿ ಆರಂಭಗೊಂಡ ಪಕ್ಷಾಂತರ ಪರ್ವ, ಪಕ್ಷಾಂತರ ನಿಷೇಧ ಕಾಯಿದೆ ಎನ್ನುವ ಪ್ರಬಲ ಅಂಕುಶದ ನಡುವೆಯೂ ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಲೇ ಇದೆ. ಇದೆಲ್ಲವನ್ನೂ ಮೂರೂ ಪಕ್ಷಗಳು ಹೇಗೆ ನಿಭಾಯಿಸಲಿವೆ? ಎಂಬುದನ್ನು ಕಾದು ನೋಡಬೇಕಾಗಿದೆ.