ಮರುಮೌಲ್ಯಮಾಪನ: ಹೊನ್ನಾವರದ ಪ್ರಮಥಾ SSLCಯಲ್ಲಿ ರಾಜ್ಯಕ್ಕೆ ಫಸ್ಟ್
ಕಾರವಾರ, ಜುಲೈ 2: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ರಾಜ್ಯಕ್ಕೆ 3ನೇ ರ್ಯಾಂಕ್ ಬಂದಿದ್ದ ಜಿಲ್ಲೆಯ ಹೊನ್ನಾವರದ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಮಥಾ ಗಜಾನನ ಭಟ್, ಮರುಮೌಲ್ಯಮಾಪನದಿಂದಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
2016- -17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆದಿದ್ದ ಪ್ರಮಥಾ ಮರುಮೌಲ್ಯಮಾಪನದಲ್ಲಿ ಪುನಃ 2 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಈ ಹಿಂದೆ ಫಲಿತಾಂಶ ಘೋಷಣೆಯಾದಾಗ ಒಟ್ಟು ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದರು. ಇದೀಗ ಈ ಸಾಲಿಗೆ ಪ್ರಮಥಾ ಕೂಟಾ ಸೇರ್ಪಡೆಯಾಗಿದ್ದಾರೆ.
ಈಕೆಯ ತಾಯಿ ಶಾಂತಿ ಭಟ್ಟ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇದೇ ಶಾಲೆಯ ಸಿಂಚನಾ ಬಿ.ಎಸ್ ರಾಜ್ಯಕ್ಕೆ ಈ ಮೊದಲು 8ನೇ ರ್ಯಾಂಕ ಪಡೆದಿದ್ದಳು. ಮತ್ತೆ ಮರುಮೌಲ್ಯಮಾಪನಕ್ಕೆ ಕಳುಹಿಸಿದಾಗ 6ನೇ ರ್ಯಾಂಕ ಪಡೆದುಕೊಂಡಿದ್ದಳು.
ಇದೀಗ ಇದೇ ರೀತಿ ಪ್ರಮಥಾ ಕೂಡಾ ಮೂರನೇ ರ್ಯಾಂಕ್ ಪಡೆದಿದ್ದಳು ಇದೀಗ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾಳೆ.