ಸಿದ್ದರಾಮಯ್ಯ ಆರೋಪ: ಸಿಎಂ ಯಡಿಯೂರಪ್ಪ ಗಲಿಬಿಲಿ ಯಾಕೆ?
ಬೆಂಗಳೂರು, ಜು. 24: ಸರ್ಕಾರಗಳಿಗೆ ಹಗರಣದ ಆರೋಪಗಳು ಹೊಸದೇನಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತವಿದ್ದಾಗ ಸ್ಟೀಲ್ ಬ್ರಿಡ್ಜ್ ಹಗರಣ ಬಹಳಷ್ಟು ಸದ್ದು ಮಾಡಿತ್ತು. ವಿರೋಧ ಪಕ್ಷ ಬಿಜೆಪಿ ಹಾಗೂ ಸಾರ್ವಜನಿಕರ ಹೋರಾಟದಿಂದ ಅಂದಿನ ಕಾಂಗ್ರೆಸ್ ಸರ್ಕಾರ ಸ್ಟೀಲ್ ಬ್ರಿಡ್ ನಿರ್ಮಾಣದ ಯೋಜನೆಯನ್ನು ಕೈಬಿಟ್ಟಿತ್ತು. ಈಗ ಕಾಲ ಬದಲಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದೆ.
Recommended Video
ಇದೀಗ ಕೋವಿಡ್ ಕಾಲದ ಖರೀದಿಯಲ್ಲಿ ಸುಮಾರು 2 ಸಾವಿರ ರೂಪಾಯಿಗಳಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಸಮೇತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡುತ್ತಿದ್ದಂತೆಯೆ ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಗಲಿಬಿಲಿ ಆಗಿದ್ದು, ಇಡೀ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟಾಗಿದೆ. ಸಿದ್ದರಾಮಯ್ಯ ಅವರಿಂದ ದಾಖಲೆ ಬಿಡುಗಡೆ ಬಳಿಕ ಬಿಜೆಪಿಯಲ್ಲಿ ಆಗಿರುವ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
ದಾಖಲೆ ಬಿಡುಗಡೆ
ಕೋವಿಡ್ ಸಂಕಷ್ಟ ಕಾಲದ ಖರೀದಿಯಲ್ಲಿಯೂ ಬಿಜೆಪಿ ಸರ್ಕಾರ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಹಗರಣ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಾಖಲೆ ಸಹಿತ ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡುವಾಗ ರಾಜ್ಯ ಸಚಿವ ಸಂಪಟ ಸಭೆ ವಿಧಾನಸೌಧದಲ್ಲಿ ನಡೆಯುತ್ತಿತ್ತು.
ಕಾಂಗ್ರೆಸ್ಸಿನಿಂದ ದೂರದೂರವಾಗುತ್ತಿರುವ ಗೌಡ್ರು, ಕುಮಾರಣ್ಣ: ಬಿಜೆಪಿಯತ್ತ ಸಾಫ್ಟ್ ಕಾರ್ನರ್?
ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಅನ್ಲಾಕ್ ಜಾರಿಗೆ ತಂದಿದ್ದರ ಕುರಿತು ಹಾಗೂ ಜಾರಿಗೆ ತರಬೇಕಾಗಿರುವ ಹಲವು ಸುಗ್ರೀವಾಜ್ಞೆಗಳ ಬಗ್ಗೆ ಚರ್ಚೆ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ #ಲೆಕ್ಕಕೊಡಿಬಿಜೆಪಿ ಅಭಿಯಾನದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಯಾವಾಗ ಸಿದ್ದರಾಮಯ್ಯ ಅವರು ಕೋವಿಡ್ ಕಾಲದದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಾಡಿದ್ದ 4,167 ರೂಪಾಯಿಗಳ ವೆಚ್ಚದಲ್ಲಿ ಸುಮಾರು 2000 ಕೋಟಿ ರೂಪಾಯಿಗಳಷ್ಟು ಹಗರಣವಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದರೊ, ಆಗ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟಾಗಿದೆ. ವಿರೋಧ ಪಕ್ಷದ ನಾಯಕರ ಆರೋಪದಿಂದ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಅವರು ವಿಚಲಿತರಾಗಿದ್ದಾರೆ. ಅವರೆ ಖುದ್ದಾಗಿ ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ.
ಯಡಿಯೂರಪ್ಪ ಸುದ್ದಿಗೋಷ್ಠಿ
ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ ಬಳಿಕ, ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ಮಾಡಲು ಮುಂದಾಗಿದ್ದರು. ಈ ಬಗ್ಗೆ "ಮಾನ್ಯ ಮುಖ್ಯಮಂತ್ರಿಗಳು ಇಂದು 3 ಗಂಟೆಗೆ ಕೊಠಡಿ ಸಂಖ್ಯೆ 334 ರಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿಯನ್ನೂ ರವಾನಿಸಲಾಗಿತ್ತು.
ಆದರೆ ದಿಢೀರ್ ಸುದ್ದಿಗೋಷ್ಠಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರದ್ದು ಮಾಡಿದರು. ಜೊತೆಗೆ ಸಿಎಂ ಮಾಧ್ಯಮ ವಿಭಾಗದ ವಾಟ್ಸಪ್ ಗ್ರೂಪ್ ಒಂದರಲ್ಲಿ ಹಾಕಲಾಗಿದ್ದ ಸಿಎಂ ಸುದ್ದಿಗೋಷ್ಠಿ ಬಗೆಗಿನ ವಾಟ್ಸಪ್ ಸಂದೇಶವನ್ನು ಸಿಎಂ ಮಾಧ್ಯಮ ವಿಭಾಗ ಅಳಿಸಿತು. ಮುಖ್ಯಮಂತ್ರಿಗಳ ತುರ್ತು ಸುದ್ದಿಗೋಷ್ಠಿ ದಿಢೀರ್ ಎಂದು ರದ್ದಾಯಿತು.
ಬೊಮ್ಮಾಯಿ ಸಲಹೆ?
ಏಕಾಏಕಿ ಸುದ್ದಿಗೋಷ್ಠಿ ಮಾಡಿ ಸ್ಪಷ್ಟನೆ ಕೊಡುವ ಮುಖ್ಯಮಂತ್ರಿಗಳ ನಿರ್ಧಾರವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಪುಟದ ಹಿರಿಯ ಸಚಿವರು ತಡೆದರು ಎಂಬ ಮಾಹಿತಿಯಿದೆ. ಗೃಹ ಸಚಿವ ಬೊಮ್ಮಾಯಿ ಅವರು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ, ಸರ್ ನೀವು ಸುದ್ದಿಗೋಷ್ಠಿ ಮಾಡಿ ಸ್ಪಷ್ಟನೆ ಕೊಡುವುದು ಬೇಡ. ಈ ವಿಚಾರದಲ್ಲಿ ನೀವು ಪ್ರವೇಶ ಮಾಡುವುದು ಬೇಡ.
ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?
ಹಾಗೆ ಮಾಡಿದರೆ, ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಬಲ ಬಂದಂತಾಗುತ್ತದೆ. ಹೀಗಾಗಿ ಯಾವ್ಯಾವ ಇಲಾಖೆಗಳ ಮೇಲೆ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೊ ಆ ಇಲಾಖೆಗಳ ಸಚಿವರು ಜಂಟಿ ಸುದ್ದಿಗೋಷ್ಠಿ ಮಾಡಿ ಸ್ಪಷ್ಟನೆ ಕೊಡಲಿ ಎಂದು ಸಲಹೆ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅದರಂತೆ ಸಿಎಂ ಕರೆದಿದ್ದ ಸುದ್ದಿಗೋಷ್ಠಿ ರದ್ದಾಯಿತು.
ಆದರೆ ಅಷ್ಟರಲ್ಲಾಗಲೇ ಸಂಪುಟ ಸಭೆ ಮುಗಿಸಿದ್ದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಾರ್ಮಿಕ, ಕಂದಾಯ ಇಲಾಖೆ ಸೇರಿದಂತೆ ಸಿದ್ದರಾಮಯ್ಯ ಅವರು ಆರೋಪಕ್ಕೆ ಗುರಿಯಾಗಿದ್ದ ಎಲ್ಲ ಸಚಿವರೂ ಸಂಪುಟಸಭೆ ಮುಗಿಸಿ ವಿಧಾನಸೌಧದಿಂದ ನಿರ್ಗಮಿಸಿದ್ದರು.
ಅರ್ಧದಾರಿಯಲ್ಲಿ ವಾಪಾಸ್
ಸಂಪುಟ ಸಭೆ ಮುಗಿಸಿ ವಿಧಾನಸೌಧದಿಂದ ತೆರಳುತ್ತಿದ್ದ ಸಂಬಂಧಿಸಿದ ಎಲ್ಲ ಸಚಿವರಿಗೂ ಸಿಎಂ ಕಚೇರಿಯಿಂದ ಬುಲಾವ್ ಹೋಗಿದೆ. ವಿಧಾನಸೌಧದಿಂದ ಸರ್ಕಾರಿ ನಿವಾಸಕ್ಕೆ ತೆರಳುತ್ತಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು ಅರ್ಧ ದಾರಿಯಲ್ಲಿಯೆ ವಾಪಾಸ್ ಆಗಿದ್ದಾರೆ.
ಜೊತೆಗೆ ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಜಂಟಿ ಸುದ್ದಿಗೋಷ್ಠಿ ನಡೆಸಲು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ನಿಮ್ಮ ನಿಮ್ಮ ಇಲಾಖೆಯಲ್ಲಿ ಏನಾಗಿದೆಯೊ ಅದೆಲ್ಲ ಮಾಹಿತಿಯನ್ನು ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಂದು ಸಿಎಂ ಸಲಹೆ ಕೊಟ್ಟಿದ್ದಾರೆ.
ಜಂಟಿ ಸುದ್ದಿಗೋಷ್ಠಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ಆರೂ ಸಚಿವರು ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಆಯಾ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳೂ ತುರ್ತು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ಸಚಿವರಿಗೆ ಮಾಹಿತಿ ಕೊಟ್ಟಿದ್ದಾರೆ. ಆದರೂ ಸಂಪೂರ್ಣ ಮಾಹಿತಿ ಕೊಟ್ಟಿಲ್ಲ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?
ಮಾತನಾಡದ ಶ್ರೀರಾಮುಲು
ಇನ್ನು ಸಿಎಂ ಸೂಚನೆ ಮೇರೆಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರು ತುಟಿ ಬಿಚ್ಚಲಿಲ್ಲ. ಕಾರಣವಿಷ್ಟೇ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದ ಆರಂಭದಲ್ಲಿ ಉಳಿದೆಲ್ಲ ಇಲಾಖೆ ಸಚಿವರು, ಆರೋಗ್ಯ ಇಲಾಖೆ ಮೇಲೆ ಆರೋಪ ಮಾಡಿದ್ದಾರೆಂದು ಇಲಾಖೆ ಸಚಿವ ಶ್ರೀರಾಮುಲು ಅವರನ್ನು ತೋರಿಸಿ ಸುಮ್ಮನಾಗಿದ್ದರಂತೆ.
ಹೀಗಾಗಿ ಶ್ರೀರಾಮುಲು ಅವರು ತಮ್ಮ ಇಲಾಖೆಯಡಿ ಖರ್ಚಾಗಿದ್ದ 290 ಕೋಟಿ ರೂಪಾಯಿಗಳಿಗೆ ಲೆಕ್ಕಕೊಟ್ಟು ಸುಮ್ಮನಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಗಳ ಮೇಲೆ ಆರೋಪ ಮಾಡಿದರು. ಆದರೆ ನಿನ್ನೆ ಸ್ವತಃ ಸಿಎಂ ಸೂಚನೆ ಕೊಟ್ಟರೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದ್ದನ್ನೆ ಎಷ್ಟು ಸಲ ಹೇಳಲಿ ಎಂದು ಸುಮ್ಮನಾಗಿದ್ದಾರಂತೆ.
ಸಿಎಂ ಗಲಿಬಿಲಿ ಯಾಕೆ?
ಈ ಎಲ್ಲದರ ಮಧ್ಯೆ ತಮಗೆ ಸಂಬಂಧಿಸದ ಇಲಾಖೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಡಲು ಮುಂದಾಗಿದ್ದು ಯಾಕೆ ಎಂಬ ಮಾತುಗಳು ಕೇಳಿ ಬಂದಿವೆ. ಕಾರಣವಿಷ್ಟೇ, ಎಲ್ಲ ಇಲಾಖೆಗಳು ಪ್ರಸ್ತಾವನೆ ಕಳುಹಿಸುವುದು ಹಣಕಾಸು ಇಲಾಖೆಗೆ. ಹಣಕಾಸು ಇಲಾಖೆ ಅನುಮೋದನೆ ಕೊಟ್ಟ ಬಳಿಕವಷ್ಟೇ ಖರೀದಿಗೆ ಹಣ ಮಂಜೂರಾಗುತ್ತದೆ. ಹೀಗಾಗಿ ಅಂತಿಮವಾಗಿ ಎಲ್ಲದಕ್ಕು ಹಣಕಾಸು ಇಲಾಖೆಯೆ ಜವಾಬ್ದಾರಿ. ಹೀಗಾಗಿ ತಮ್ಮ ಮೇಲೆಯೆ ಸಿದ್ದರಾಮಯ್ಯ ಆರೋಪ ಎಂದು ಹಣಕಾಸು ಇಲಾಖೆ ಸಚಿವರೂ ಆಗಿರುವ ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದರು.
ಒಟ್ಟಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೋವಿಡ್ ಸಮಯದ ಖರೀದಿ ಹಗರಣದ ಆರೋಪದಿಂದ ರಾಜ್ಯ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಘಟಕ ಗಲಿಬಿಲಿಗೊಂಡಿದ್ದು ಮಾತ್ರ ಸುಳ್ಳಲ್ಲ.