ಸಚಿವಸ್ಥಾನಕ್ಕೆ ಎಚ್. ನಾಗೇಶ್ ರಾಜೀನಾಮೆ: ವಿಧಾನಸೌಧದಲ್ಲಿ ಹೈಡ್ರಾಮಾ!
ಬೆಂಗಳೂರು, ಜ. 13: ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಹೈಡ್ರಾಮಾ ನಡೆಯಿತು. ಅಬಕಾರಿ ಸಚಿವ ಎಚ್. ನಾಗೇಶ್ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದಂತೆ ಸಂಪುಟದ ಇತರ ಸಹೋದ್ಯೋಗಿಗಳು ಹಾಗೂ ಕೆಲವು ಪಿಎಗಳು ತಡೆಗೋಡೆಯಂತೆ ನಡೆದುಕೊಂಡರು. ಸಂಪುಟ ಸಭೆಗೆ ನಗುತ್ತಲೇ ತೆರಳಿದ್ದ ಸಚಿವ ನಾಗೇಶ್ ಅವರು, ಬರುವಾಗ ಒತ್ತಡದಲ್ಲಿ ಇದ್ದಂತೆ ಕಂಡು ಬಂದಿತು. ಇದನ್ನು ಗಮನಿಸಿದ ಮಾಧ್ಯಮ ಪ್ರತಿನಿಧಿಗಳು ಅವರ ಪ್ರತಿಕ್ರಿಯೆ ಪಡೆಯಲು ಮುಂದಾದರು.
ಅದಕ್ಕೆ ಕಾರಣವೂ ಇತ್ತು. ಸಂಪುಟ ಸಭೆಗೂ ಮೊದಲು ವಿಧಾನಸೌಧದಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ ಅವರು, ಸಚಿವ ನಾಗೇಶ್ ಅವರ ರಾಜೀನಾಮೆ ಕೊಡುವಂತೆ ಕೇಳಿದ್ದೇವೆ. ಸಂಪುಟ ಸಭೆಯಲ್ಲಿ ಅವರ ಮನವೊಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಈ ಬಗ್ಗೆ ಚರ್ಚೆ ಏನಾದರೂ ಆಯಿತಾ ಎಂದು ಮಾಧ್ಯಮ ಪ್ರತಿನಿಧಿಗಳು ನಾಗೇಶ್ ಅವರನ್ನು ಪ್ರಶ್ನೆ ಮಾಡಿದರು.
ಪ್ರಮಾಣವಚನ ಸ್ವೀಕರಿಸುವವರ ಹೆಸರು ಪ್ರಕಟಿಸಿದ ಸಿಎಂ ಯಡಿಯೂರಪ್ಪ!
ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದಂತೆ ತಾತ್ಕಾಲಿಕವಾಗಿ ಅವರನ್ನು ತಡೆಯಲಾಯ್ತು. ಆದರೂ ಮಾಧ್ಯಮಗಳೊಂದಿಗೆ ನಾಗೇಶ್ ಮಾತನಾಡಿದ್ದಾರೆ. ರಾಜೀನಾಮೆ ಕುರಿತು ಅವರು ಹೇಳಿದ್ದೇನು? ಮುಂದಿದೆ ಮಾಹಿತಿ!
ತಡೆಗೋಡೆಯಂತಾದ ಸಚಿವರು
ಆ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸೇರಿದಂತೆ ಇತರ ಸಂಪುಟದ ಸಹೋದ್ಯೋಗಿಗಳು ನಾಗೇಶ್ ಅವರನ್ನು ಕರೆದೊಯ್ದರು. ಆದರೂ ವಿಧಾನಸೌಧದ ಮೊದಲ ಮಹಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ಕೊಟ್ಟ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ನಾಗೇಶ್ ಅವರು ರಾಜೀನಾಮೆ ಕೊಡಲು ಒಪ್ಪಿರುವುದನ್ನು ಇತರ ಸಚಿವರು ವಿರೋಧಿಸಿದ್ದಾರೆ ಎನ್ನಲಾಗುತ್ತಿದೆ. ವಿಧಾನಸೌಧದಲ್ಲಿ ಸಚಿವ ನಾಗೇಶ್ ಅವರೊಂದಿಗೆ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಪ್ರತ್ಯೇಕವಾಗಿ ಮಾತನಾಡಿದ್ದಾರೆ.
ರಾಜೀನಾಮೆ ಕೊಡಲು ವಿರೋಧ
ನಾಗೇಶ್ ಅವರು ಸಚಿವ ಸ್ಥಾನಕ್ಕೆ ಏಕಾಏಕಿ ರಾಜೀನಾಮೆ ಕೊಡುವುದಕ್ಕೆ ಬಿಜೆಪಿ ಸೇರಿದ್ದ ಇತರ 15 ಜನರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಇವತ್ತು ನಾಗೇಶ್ ಅವರ ರಾಜೀನಾಮೆಗೆ ಸೂಚಿಸಿದಂತೆ ನಾಳೆ ಉಳಿದವರ ರಾಜೀನಾಮೆ ಕೇಳಿದರೆ ಗತಿ ಏನು ಎಂಬ ಪ್ರಶ್ನೆ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿರುವವರನ್ನು ಕಾಡುತ್ತಿದೆ. ಹೀಗಾಗಿ ರಾಜೀನಾಮೆ ಕೊಡಲು ನಾಗೇಶ್ ಒಪ್ಪಿಕೊಂಡಿರುವುದನ್ನು ಉಳಿದ 15 ಜನರೂ ವಿರೋಧಿಸಿದ್ದಾರೆ ಎಂಬ ಮಾಹಿತಿ ಬಂದಿದೆ.
ಯಾವಾಗ ರಾಜೀನಾಮೆ ಕೊಡ್ತಾರೆ?
ಇಂದು ಸಂಜೆ ಅಥವಾ ನಾಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಎಚ್. ನಾಗೇಶ್ ಅವರು ಒಪ್ಪಿಕೊಂಡಿದ್ದಾರೆ. ರಾಜೀನಾಮೆಗೆ ಒಪ್ಪುವ ಮೊದಲು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಮನವೊಲಿಸಲಾಗಿದೆ ಎಂಬ ಮಾಹಿತಿಯಿದೆ. ಸಚಿವಸ್ಥಾನಕ್ಕೆ ಸಮಾನಾಂತರವಾದ ಹುದ್ದೆಯನ್ನು ನಿಮಗೆ ಕೊಡಲಾಗುವುದು ಎಂಬ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಧಿಯಿಲ್ಲದೆ ನಾಗೇಶ್ ಅವರು ಸಿಎಂ ಆದೇಶ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Recommended Video
ಹೈಕಮಾಂಡ್ ಆದೇಶ ಎಂದು ಅಸಹಾಯಕರಾದ ಸಿಎಂ
ನಾಗೇಶ್ ಅವರ ರಾಜೀನಾಮೆ ಪಡೆಯಲು ನೇರವಾಗಿ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ. ಹೀಗಾಗಿ ತಮ್ಮ ಕಚೇರಿಯಲ್ಲಿ ನಡೆದ ಮನವೊಲಿಕೆ ಸಂದರ್ಭದಲ್ಲಿ ಇದೇ ಮಾತನ್ನು ಯಡಿಯೂರಪ್ಪ ಅವರು ನಾಗೇಶ್ ಅವರಿಗೆ ತಿಳಿಸಿದ್ದಾರೆ. ನಾನು ಹೈಕಮಾಂಡ್ ಆದೇಶ ಪಾಲಿಸಬೇಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಕೈಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಅಪನಂಬಿಕೆ ಬೇಡ ಎಂದು ಯಡಿಯೂರಪ್ಪ ಮನವೊಲಿಸಿದ್ದಾರೆ. ಹೈಕಮಾಂಡ್ ಲೆಕ್ಕಾಚಾರಗಳು ಏನೇ ಇದ್ದರೂ ಮುಂದಿನ ದಿನಗಳಲ್ಲಿ ಹೈಕಮಾಂಡ್ ಜೊತೆಗೆ ನಿಮ್ಮ ಬಗ್ಗೆ ಮಾತನಾಡುತ್ತೇನೆ ಎಂಬ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ ಎನ್ನಲಾಗಿದೆ.