ಅಧ್ಯಕ್ಷರೂ ಇಲ್ಲ, ಪದಾಧಿಕಾರಿಗಳೂ ಇಲ್ಲ: ಯಾವ ಚಟುವಟಿಕೆಯೂ ಇಲ್ಲದೇ ಕಾಂಗ್ರೆಸ್ ಕಚೇರಿ ಬಿಕೋ
ಬೆಂಗಳೂರು, ಡಿ 14: ಉಪಚುನಾವಣೆಗೆ ಮುನ್ನ ಗಿಜಿಗುಡುತ್ತಿದ್ದ ಕೆಪಿಸಿಸಿ ಕಚೇರಿ, ಫಲಿತಾಂಶದ ನಂತರ ಬಣಗುಡುತ್ತಿದೆ. ಸದ್ಯ, ಯಾವ ಚಟುವಟಿಕೆಯೂ ನಡೆಯದೆ, ರಾಷ್ಟ್ರೀಯ ಪಕ್ಷವೊಂದರ ಕಚೇರಿ ಬಿಕೋ ಎನ್ನುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ, ಯಾವ ಮುಖಂಡರೂ ಇತ್ತ ತಲೆಹಾಕುತ್ತಿಲ್ಲ.
ರಾಜ್ಯ ಕಾಂಗ್ರೆಸ್ಸಿನ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಮಾತ್ರ, ಆಗೊಮ್ಮೆ ಈಗೊಮ್ಮೆ ಕೆಪಿಸಿಸಿ ಕಚೇರಿಗೆ ಬಂದು ಹೋಗುತ್ತಿರುವುದನ್ನು ಬಿಟ್ಟರೆ, ಪ್ರಮುಖ ನಾಯಕರ ಪತ್ತೆಯೇ ಇಲ್ಲ.
ಸಿದ್ದರಾಮಯ್ಯ ರಾಜೀನಾಮೆ ಹಿಂದಿನ ಜಾಣ ರಾಜಕೀಯ, ಮೂಲ ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದುಂಟೇ?
ರಾಜೀನಾಮೆ ನೀಡಿದ ನಂತರ, ದಿನೇಶ್ ಗುಂಡೂರಾವ್, ಒಂದು ದಿನವೂ ಪಕ್ಷದ ಕಚೇರಿಗೆ ಬಂದಿಲ್ಲ. ಇವರ ಮತ್ತು ಸಿದ್ದರಾಮಯ್ಯನವರ ರಾಜೀನಾಮೆ ಇನ್ನೂ ಆಂಗೀಕಾರವಾಗಬೇಕಷ್ಟೇ.
ಕೆಪಿಸಿಸಿ ಕಚೇರಿ ಇಷ್ಟು ಕಳೆಗುಂದಿದ್ದು ತೀರಾ ಅಪರೂಪ
ತಮ್ಮ ತಮ್ಮ ಅಹವಾಲುಗಳನ್ನು ಮತ್ತು ಮುಖಂಡರನ್ನು ಭೇಟಿಯಾಗಲೆಂದು ಬರುತ್ತಿರುವ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರು, ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಕೆಪಿಸಿಸಿ ಕಚೇರಿ ಇಷ್ಟು ಕಳೆಗುಂದಿದ್ದು ತೀರಾ ಅಪರೂಪ.
ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹುದ್ದೆಯನ್ನು ಬಿಟ್ಟು
ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಹುದ್ದೆಯನ್ನು ಬಿಟ್ಟು, ಮಿಕ್ಕೆಲ್ಲಾ, ಪದಾಧಿಕಾರಿಗಳ ತಂಡವನ್ನು ವಿಸರ್ಜನೆ ಮಾಡಿರುವುದರಿಂದ, ಪದಾಧಿಕಾರಿಗಳೂ, ಕಚೇರಿಯತ್ತ ಹೋಗುತ್ತಿಲ್ಲ. ಹೊಸ ತಂಡ ರೆಡಿಯಾಗುವವರೆಗೆ, ಇದೇ ರೀತಿಯ ವಾತಾವರಣ ಇಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಹಾದಿ ಹಿಡಿದ ದಿನೇಶ್ ಗುಂಡೂರಾವ್, ಅಧ್ಯಕ್ಷಗಿರಿಗೆ ರಾಜೀನಾಮೆ
ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಸಿದ್ದರಾಮಯ್ಯ
ಸಿದ್ದರಾಮಯ್ಯನವರು, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎರದೇ ದಿನಗಳಲ್ಲಿ, ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರಿಂದ ಆಸ್ಪತ್ರೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಹಾಗಾಗಿ, ಅವರೂ ಕೆಪಿಸಿಸಿ ಕಚೇರಿಯತ್ತ ಹೋಗಿಲ್ಲ. ಎಲ್ಲಾ ಪಕ್ಷಗಳ ಮುಖಂಡರು, ಸಿದ್ದರಾಮಯ್ಯನವರನ್ನು ಆಸ್ಪತ್ರೆಯಲ್ಲೇ ಭೇಟಿಯಾಗುತ್ತಿದ್ದಾರೆ.
ಕಾಂಗ್ರೆಸ್ಸಿನ, 'ಭಾರತ್ ಬಚಾವೋ' ಪ್ರತಿಭಟನೆ
ಇನ್ನು, ಪೌರತ್ವದ ವಿಚಾರದಲ್ಲಿ ಕಾಂಗ್ರೆಸ್, 'ಭಾರತ್ ಬಚಾವೋ' ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಹೆಚ್ಚಿನ ನಾಯಕರು ನವದೆಹಲಿಗೆ ಹೋಗಿದ್ದಾರೆ. ಹಾಗಾಗಿ, ಈ ವಾರಾಂತ್ಯವಂತೂ, ಇನ್ನೂ, ಕೆಪಿಸಿಸಿ, ಬಿಕೋ ಹೊಡೆಯುವುದಂತೂ ಗ್ಯಾರಂಟಿ.
ದಿನೇಶ್ ಗುಂಡೂರಾವ್, ಡಿಸೆಂಬರ್ 9ರಂದು ರಾಜೀನಾಮೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನದ ನೈತಿಕ ಹೊಣೆಹೊತ್ತು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಡಿಸೆಂಬರ್ 9ರಂದು ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ, ರಾಜೀನಾಮೆ ನೀಡಿದ, ಸ್ವಲ್ಪ ಹೊತ್ತಿನಲ್ಲೇ, ದಿನೇಶ್, ತಮ್ಮ ರಾಜೀನಾಮೆಯ ನಿರ್ಧಾರವನ್ನು ಪ್ರಕಟಿಸಿದ್ದರು.