ದುಡ್ಡೆಲ್ಲಾ ಇವರ ಮನೇಲಿದ್ರೆ, ಎಟಿಎಂಗೆ ತುಂಬ್ಸೋದು ಎಲ್ಲಿಂದ?
ಜನಸಾಮಾನ್ಯರು ಕ್ಯೂನಲ್ಲಿ ದುಡ್ಡಿಗಾಗಿ ಪರದಾಡುತ್ತಿದ್ದರೆ, ಭ್ರಷ್ಟರು ನಿರಾಯಾಸವಾಗಿ ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ನ 8ರ ನಂತರ IT ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ದಾಳಿಯ ಒಂದು ಝಲಕ್.
ಕಾನೂನು ರೂಪಿಸುವುದು ಮತ್ತು ಕಾನೂನಿಗೆ ತಿದ್ದುಪಡಿ ತರುವುದು ಸರಕಾರದ ಕೆಲಸ, ಸರಕಾರದ ನೀತಿಯನ್ನು ಸಮರ್ಥವಾಗಿ ಜಾರಿಗೆ ತರುವುದು ಅಧಿಕಾರಿಗಳ ಕೆಲಸ. ಆದರೆ, ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದರೆ, ಬೇಲಿಯೇ ಎದ್ದು ಹೊಲ ಮೇಯ್ದಂಗೆ.
ದೊಡ್ಡ ಮೊತ್ತದ ಎರಡು ನೋಟನ್ನು ಕೇಂದ್ರ ಸರಕಾರ ನಿಷೇಧಗೊಳಿಸಿದ ನಂತರ, ಐಟಿ ಮತ್ತು ಇಡಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೋಟ್ಯಾಂತರ ಮೊತ್ತದಲ್ಲಿ ಹೊಸ ಕರೆನ್ಸಿ ನೋಟು ಪತ್ತೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. (ದಾಳಿ ಮುಂದುವರಿಸಿ, ಐಟಿ ಅಧಿಕಾರಿಗಳಿಗೆ ಮೋದಿ ಅಭಯ)
ಸಿಎಂ ಮತ್ತು ರಾಜ್ಯ ಸಚಿವರಿಬ್ಬರ ಆಪ್ತ ಸರಕಾರೀ ಅಧಿಕಾರಿಗಳ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಮೊತ್ತ ಪತ್ತೆಯಾದ ನಂತರ ' ದುಡ್ಡೆಲ್ಲಾ ಇವರ ಮನೆಯಲ್ಲಿದ್ರೆ, ಎಟಿಎಂಗೆ ತುಂಬ್ಸೋದು ಇನ್ನೆಲ್ಲಿಂದ' ಎನ್ನುವ ಮಾತು ಬ್ಯಾಂಕ್ ಮುಂದೆ, ಎಟಿಎಂ ಕ್ಯೂನಲ್ಲಿ ಕೇಳಿ ಬರುತ್ತಿದೆ.
ಗಂಟೆಗಟ್ಟಲೆ ಸರತಿಯಲ್ಲಿ ನಿಂತರೂ ದುಡ್ಡು ಸಿಗೋದು ಖಾತ್ರಿ ಇಲ್ಲದೇ ಇರುವ ಈ ವೇಳೆಯಲ್ಲಿ ಅಧಿಕಾರಿಗಳ ಮನೆಯಲ್ಲಿ ಮತ್ತು ವಿವಿಧ ದಾಳಿಗಳಲ್ಲಿ ಸಿಕ್ಕಂತಹ ಕೊಟಿ ಕೋಟಿ ಹೊಸ ನೋಟುಗಳು ನಮ್ಮ ವ್ಯವಸ್ಥೆಗೆ ಸವಾಲಾಗಿದೆ.
ನವೆಂಬರ್ ಎಂಟರಂದು ಮೋದಿ ಸರಕಾರ ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ನಿಷೇಧಿಸಿದ ನಂತರ, ಆದಾಯ ತೆರಿಗೆ, ಪೊಲೀಸ್ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ED) ರಾಜ್ಯದಲ್ಲಿ ನಡೆಸಿದ ದಾಳಿಯ ಕೆಲವೊಂದು ಪ್ರಮುಖಾಂಶಗಳು. ಮುಂದೆ ಓದಿ..
ಜನಾರ್ದನ ರೆಡ್ಡಿ ಮನೆ, ಕಚೇರಿ
ಮಗಳ ಮದುವೆ ಅದ್ದೂರಿ ಮಾಡಿದ ಒಂದೆರಡು ದಿನದಲ್ಲೇ ಜನಾರ್ದನ ರೆಡ್ಡಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿತ್ತು. ಜನಾರ್ಧನ ರೆಡ್ಡಿಯವರ ಬೆಂಗಳೂರು, ಬಳ್ಳಾರಿ ಮತ್ತು ಹೈದರಾಬಾದ್ ನಲ್ಲಿನ ವಿವಿಧ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು.
ಹಾಸನದಿಂದ ಬೆಂಗಳೂರು
ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಎರಡು ಕಾರುಗಳನ್ನು ಅಡ್ಡಗಟ್ಟಿದ ಪೊಲೀಸರು ದಾಖಲೆಯಿಲ್ಲದ 45ಲಕ್ಷ ರೂಪಾಯಿ ವಶ ಪಡಿಸಿಕೊಂಡಿದ್ದರು. ಇದರಲ್ಲಿ 28 ಲಕ್ಷ ಹೊಸ ಕರೆನ್ಸಿಗಳು.
ದಾಖಲೆಯಿಲ್ಲದ ಹಣ
ದಾಖಲೆಯಿಲ್ಲದೇ ಸಾಗಿಸುತ್ತಿದ್ದ 35 ಲಕ್ಷ ರೂಪಾಯಿಯನ್ನು ಭಟ್ಕಳ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಎಲ್ಲಾ ಹಣ ಎರಡು ಸಾವಿರ ರೂಪಾಯಿ ನೋಟಿನಲ್ಲಿತ್ತು.
ನಲವತ್ತು ಕಡೆ ದಾಳಿ
ನೋಟು ವಿನಿಮಯ, ಹವಾಲ ದಳ್ಳಾಳಿಗಳಲ್ಲಿರುವ ಹಣವನ್ನು ವಶ ಪಡೆಯುವುದಕ್ಕಾಗಿ ಇಡಿ ನಲವತ್ತು ಕಡೆ ದಾಳಿ ನಡೆಸಿತ್ತು. ದೇಶದ ವಿವಿಧೆಡೆ ನಡೆಸಿದ ದಾಳಿಯಲ್ಲಿ 1.2 ಕೋಟಿ ವಶ ಪಡೆಸಿಕೊಳ್ಳಲಾಗಿತ್ತು. ಇದರಲ್ಲಿ 20 ಲಕ್ಷ ಹಳೇ ನೋಟು ಬಿಟ್ಟರೆ, ಮಿಕ್ಕವೆಲ್ಲಾ ಹೊಸ ನೋಟುಗಳು. ಜೊತೆಗೆ ಕೊಲ್ಕತ್ತಾದ ಅಧಿಕಾರಿಯೊಬ್ಬರ ಮನೆಯಿಂದ ಎರಡು ಸಾವಿರ ಮುಖಬೆಲೆಯ ಹತ್ತು ಲಕ್ಷ ರೂಪಾಯಿ ವಶ ಪಡಿಸಿಕೊಳ್ಳಲಾಗಿತ್ತು.
ಭರ್ಜರಿ ಭೇಟೆ
ಬೆಂಗಳೂರಿನಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಆರು ಕೋಟಿ ನಗದು, ಏಳು ಕೆಜಿ ಚಿನ್ನ, ಲ್ಯಾಂಬೋರ್ಗಿನಿ ಕಾರು, ಆಸ್ತಿ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ವಶ ಪಡಿಸಿಕೊಂಡ ಆರು ಕೋಟಿಯಲ್ಲಿ ನಾಲ್ಕುವರೆ ಕೋಟಿ ರೂಪಾಯಿ ಹೊಸ ಕರೆನ್ಸಿ ನೋಟುಗಳು. 27 ಬ್ಯಾಂಕ್ ಅಧಿಕಾರಿಗಳ ಅಮಾನತು.
ಉಡುಪಿ
ಉಡುಪಿ ಜಿಲ್ಲೆ ಕಾರ್ಕಳದ ಬೈಲೂರಿನಲ್ಲಿ 71 ಲಕ್ಷ ರೂಪಾಯಿ ಹೊಸ ನೋಟನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಚಿಕ್ಕಮಗಳೂರು
ಜಿಲ್ಲಾ ಪೊಲೀಸರು ಇಬ್ಬರನ್ನು ಬಂಧಿಸಿ ಅವರಿಂದ ಎರಡು ಸಾವಿರ ರೂಪಾಯಿ ಮುಖಬೆಲೆಯ 46 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಬೆಂಗಳೂರು, ಮಡಿಕೇರಿ ಹಾಗೂ ತುಮಕೂರಿನಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 74.50 ಲಕ್ಷ ರುಪಾಯಿ ವಶಪಡಿಸಿಕೊಂಡರು.
{photo-feature}