ಪಂಚ ರಾಜ್ಯಗಳ ಸೋಲಿನ ಬಿಸಿ: ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ
ರಾಜ್ಯದ ಮೂರೂ ಪಕ್ಷಗಳು ಹಾಲೀ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಿಬಿಟ್ಟಿವೆ. ಬಿಜೆಪಿಯ ವರಿಷ್ಠರು ರಾಜ್ಯಕ್ಕೆ ಆಗಮಿಸುವ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದೆ. ಈಗ, ರಾಹುಲ್ ಗಾಂಧಿಯೂ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಪಂಚ ರಾಜ್ಯಗಳ ಸೋಲಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಚುನಾವಣಾ ಮೂಡಿಗೆ ಕರೆದೊಯ್ಯಲು ರಾಹುಲ್ ಗಾಂಧಿಯ ಆಗಮನವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗುಜರಾತ್ ಚುನಾವಣೆ: ರಾಹುಲ್ ಗಾಂಧಿಯನ್ನು ಸಂಪರ್ಕಿಸಿದ ಚುನಾವಣಾ ಚಾಣಕ್ಯ
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದಾದ ರಾಜ್ಯಗಳಲ್ಲಿ ಒಂದು ಎಂದು ಕರ್ನಾಟಕವನ್ನು ವ್ಯಾಖ್ಯಾನಿಸಲಾಗುತ್ತಿರುವುದರಿಂದ, ಐದು ರಾಜ್ಯಗಳ ಸೋಲಿನ ಎಫೆಕ್ಟ್ ಇಲ್ಲಿ ಎದುರಾಗಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಈಗಲೇ ಆಖಾಡಕ್ಕೆ ಇಳಿದಂತಿದೆ.
ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತ್ತು, ಜೊತೆಗೆ, ದೇಶದ ರಾಜಕೀಯದಲ್ಲಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ನಿರೀಕ್ಷಿಗೂ ಮೀರಿ ಸೋಲುಂಡಿತ್ತು. ಹಾಗಾಗಿ, ಎಐಸಿಸಿ ಮಟ್ಟದಲ್ಲಿ ಹಲವು ಬದಲಾವಣೆಯಾಗುತ್ತಿದೆ.
ಎಂ.ಬಿ.ಪಾಟೀಲ್ ಅವರ ಪದಗ್ರಹಣ ಕಾರ್ಯಕ್ರಮ
ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನುವ ಮಾತನ್ನು ಹೇಳುತ್ತಿರುವ ಕಾಂಗ್ರೆಸ್ ನಾಯಕರು ನಾವು ಸಿದ್ದ ಎಂದು ಹೇಳುತ್ತಿದ್ದಾರೆ. ನವೆಂಬರ್ ತಿಂಗಳಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಎಂ.ಬಿ.ಪಾಟೀಲ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. ಮೇಕೆದಾಟು ಪಾದಯಾತ್ರೆಯ ವೇಳೆ ರಾಹುಲ್ ಗಾಂಧಿ ರಾಜ್ಯಕ್ಕೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ರಾಜ್ಯ ಕಾಂಗ್ರೆಸ್ಸಿಗರು ಇದ್ದರು. ಆದರೆ, ಆ ಸಮಯದಲ್ಲಿ ಬರದಿದ್ದ ರಾಹುಲ್, ಮಾರ್ಚ್ 31ರಂದು ರಾಜ್ಯಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿದೆ. ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇಕೆದಾಟು ಪಾದಯಾತ್ರೆಯ ಮೂಲಕ ಕಾರ್ಯಕರ್ತರಿಗೆ ಉತ್ಸಾಹ
ಚುನಾವಣೆಗೆ ಪೂರ್ವಭಾವಿಯಂತೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್ ಪದಗ್ರಹಣ ಮಾಡಿದ್ದಾರೆ. ದೆಹಲಿಯಿಂದ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗಮಿಸಿದ್ದರು. ಎಂ.ಬಿ.ಪಾಟೀಲರಿಗಾಗಿ ಕಾರ್ಯಕ್ರಮಕ್ಕೆ ಬಂದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೇಕೆದಾಟು ಪಾದಯಾತ್ರೆಯ ಮೂಲಕ ಕಾರ್ಯಕರ್ತರಿಗೆ ಉತ್ಸಾಹ ತುಂಬುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹುತೇಕ ಯಶಸ್ವಿಯಾಗಿದ್ದರು. ಆದರೆ, ಐದು ರಾಜ್ಯಗಳ ಸೋಲಿನ ನಂತರ ಮುಖಂಡರಲ್ಲಿ ನಿರುತ್ಸಾಹ ಎದುರಾಗಿತ್ತು.
ರಾಜ್ಯ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯ
ರಾಜ್ಯ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯಕ್ಕೆ ರಾಹುಲ್ ಗಾಂಧಿ ಪರಿಹಾರವನ್ನು ಸೂಚಿಸಬಹುದು. ಪಂಜಾಬ್ ನಲ್ಲಾದಂತೆ ಕರ್ನಾಟಕದಲ್ಲಾಗಬಾರದು ಎಂದು ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿರುವಾಗಲೇ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಒಗ್ಗಟ್ಟಿನ ಮಂತ್ರ ಜಪಿಸಲು ಸೂಚಿಸಬಹುದು. ಬಿಜೆಪಿ ಮತ್ತು ಜೆಡಿಎಸ್ ಜೊತೆ ಫೈಟ್ ಮಾಡಬೇಕಾಗಿರುವುದರಿಂದ ರಾಜ್ಯ ನಾಯಕರ ಸಲಹೆಯನ್ನೂ ಪಡೆಯಬಹುದು.
ರಾಹುಲ್ ಗಾಂಧಿ ಕರ್ನಾಟಕ ಭೇಟಿ ಮಹತ್ವನ್ನು ಪಡೆದುಕೊಂಡಿದೆ
ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ಬಿಜೆಪಿ ರಾಜಕೀಯ ಆರಂಭಿಸಿದೆ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ಸೂಕ್ಷ್ಮ ವಿಚಾರಗಳಾಗಿರುವುದರಿಂದ ಎಚ್ಚರದಿಂದ ಹೆಜ್ಜೆಯನ್ನು ಇಡಬೇಕು ಎಂದು ಡಿ.ಕೆ.ಶಿವಕುಮಾರ್ ಈಗಾಗಲೇ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಬಸವಳೆದಿರುವ ಕಾಂಗ್ರೆಸ್ಸಿಗೆ ಸದ್ಯ ಇರುವ ಮತ್ತೊಂದು ನಿರೀಕ್ಷೆಯ ರಾಜ್ಯವೆಂದರೆ ಅದು ಕರ್ನಾಟಕ. ಹಾಗಾಗಿ, ರಾಹುಲ್ ಗಾಂಧಿ ಭೇಟಿ ಮಹತ್ವನ್ನು ಪಡೆದುಕೊಂಡಿದೆ.
Recommended Video