ದೀರ್ಘ ಕಾಲದ ಬಳಿಕ ಮತ್ತೆ ಒಂದಾದ ಕರವೇ ಬಣಗಳು?
ಬೆಂಗಳೂರು, ಜೂನ್ 11: ಕನ್ನಡ ನಾಡು-ನುಡಿಯ ವಿಚಾರಗಳು ಬಂದಾಗ ಬೀದಿಗಿಳಿಯುವ ಪ್ರಮುಖ ಸಂಘಟನೆ ಅಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆ; ಸಂಕ್ಷಿಪ್ತವಾಗಿ ಕರವೇ.
ಕೆಲವು ವರ್ಷಗಳ ಕೆಳಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ಬಣವಾಗಿ ಒಡೆದು ಹೋಗಿತ್ತು. ಇಬ್ಬರು ನಾಯಕರ ನೇತೃತ್ವದಲ್ಲಿ ಸಂಘಟನೆ ಇಬ್ಭಾಗವಾಗಿ ಸೊರಗಿ ಹೋಗಿತ್ತು.
ಇದೀಗ ದೀರ್ಘ ಕಾಲದ ನಂತರ ಇಬ್ಬರೂ ನಾಯಕರು ಮತ್ತೆ ಮುಖಾಮುಖಿಯಾಗಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ ಹುಟ್ಟುಹಬ್ಬ.
ನಾರಾಯಣ ಗೌಡರ ಹುಟ್ಟುಹಬ್ಬಕ್ಕೆ ಖುದ್ದಾಗಿ ಪ್ರವೀಣ್ ಕುಮಾರ್ ಶೆಟ್ಟಿಯವರೇ ಕರೆ ಮಾಡಿ ಶುಭಾಶಯ ಕೋರಿದ್ದರು ಎಂದು ತಿಳಿದು ಬಂದಿದೆ. ಇದಾದ ಬಳಿಕ ಇಬ್ಬರ ನಡುವೆ ಕವಿದಿದ್ದ ವೈಷಮ್ಯ ಮುಸುಕು ತಿಳಿಯಾಗಿದೆ.
ಇದಾದ ನಂತರ ಆರ್.ಟಿ. ನಗರದ ಕೆಫೆ ಕಾಫಿ ಡೇಯಲ್ಲಿ ಕೇಕ್ ಕತ್ತರಿಸಿ ನಾರಾಯಣಗೌಡರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿ ಉಭಯ ನಾಯಕರಿಗೆ ಮಾಲಾರ್ಪಣೆಯನ್ನೂ ಮಾಡಲಾಯಿತು. ಇದು 'ಕರ್ನಾಟಕ ರಕ್ಷಣಾ ವೇದಿಕೆ'ಯ ಬಣ ಗಳು ಒಂದಾಗುವ ಸೂಚನೆ ಎನ್ನಲಾಗಿದೆ.
ಇಬ್ಬರೂ ಒಂದಾಗಿ ಮತ್ತೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.