ಶಿಕ್ಷಣ ಸಂಸ್ಥೆಗಳ, ಕೋರ್ಸ್ ಗಳ ಮಾನ್ಯತೆ ಫಟಾಫಟ್ ಆಗಬೇಕು- ಹೈಕೋರ್ಟ್ ಆದೇಶ
ಬೆಂಗಳೂರು, ಏ.7.ರಾಜ್ಯ ಸರ್ಕಾರದ ವಿವಿಧ ಪ್ರಾಧಿಕಾರಗಳಿಂದ ಕೋರ್ಸ್ಗಳು ಅಥವಾ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಅರ್ಜಿಗಳನ್ನು ಫಟಾಫಟ್ ಎಂದು ಆ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿಗಳನ್ನು ಪರಿಗಣಿಸುವ ಪ್ರಕ್ರಿಯೆಯು ಗಡಿಯಾರದ ಮುಳ್ಳಿನಂತೆ ನಿಖರವಾಗಿ ನಡೆಯಬೇಕು ಎಂದೂ ಸಹ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರಿನ ಶಾಂತಿಧಾಮ ಕಾಲೇಜ್ ಆಫ್ ಫಿಸಿಯೋಥೆರಪಿ ತನ್ನ ನವೀಕರಣ ಅರ್ಜಿಗಳನ್ನು ಪರಿಗಣಿಸದಿರುವ ಬಗ್ಗೆ ದೂರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ಏಕಸದಸ್ಯಪೀಠ ವಿಲೇವಾರಿ ಮಾಡಿದೆ.
ಕಾಲೇಜು ಸೂಕ್ತ ಸಮಯದಲ್ಲಿ ರಾಜೀವ್ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ಕೋರ್ಸ್ಗಳ ಸೀಟುಗಳ ಸಂಖ್ಯೆಯನ್ನು 20 ರಿಂದ 40 ಕ್ಕೆ ಹೆಚ್ಚಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿತ್ತು.
ನ್ಯಾಯಾಲಯದ ಆದೇಶವೇನು?
"ಶಿಕ್ಷಣ ಸಂಸ್ಥೆಗಳು ಸಲ್ಲಿಸುವ ಇಂತಹ ಅರ್ಜಿಗಳ ಪರಿಗಣನೆಯಲ್ಲಿನ ವಿಳಂಬದಿಂದ ಹೆಚ್ಚಿನ ಸಂಖ್ಯೆಯ ಖಟ್ಲೆ ಉದ್ಭವಿಸುತ್ತಿವೆ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠ ಮಾನ್ಯತೆಯನ್ನು ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಅಧಿಕಾರಿಗಳು ವಿಳಂಬ ಮಾಡಬಾರದು'' ಎಂದು ಆದೇಶಿಸಿದೆ.
"ಮಾನ್ಯತೆ/ಅನುಮೋದನೆ ಇತ್ಯಾದಿಗಳನ್ನು ಬಯಸುವ ಅರ್ಜಿಗಳನ್ನು ನಿಗದಿತ ಶೈಕ್ಷಣಿಕ ವರ್ಷಕ್ಕೆ ಮಾಡಲಾಗಿರುತ್ತದೆ, ಹಾಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ ನಂತರ, ವಿವಿಧ ಪ್ರಾಧಿಕಾರಗಳ ಪರಿಗಣನೆಯ ಪ್ರಕ್ರಿಯೆಯು ಗಡಿಯಾರದಂತೆ ನಿಖರವಾಗಿ ಕೆಲಸ ಮಾಡಬೇಕು ಮತ್ತು ಅಯಾ ಶೈಕ್ಷಣಿಕ ವರ್ಷದ ಆರಂಭಕ್ಕೆ ಮುನ್ನವೇ ಅಂತಿಮ ಆದೇಶವನ್ನು ನೀಡಬೇಕಾಗುತ್ತದೆ'' ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಾನ್ಯತೆ ಕೋರಿ ಸಲ್ಲಿಕೆಯಾಗುವ ಅರ್ಜಿಯ ವಿಳಂಬದಿಂದಾಗಿ ಗಣನೀಯವಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಎಂದು ಸೂಚಿಸಿದ ನ್ಯಾಯಾಲಯವು "ಅಂತಹ ಅರ್ಜಿಗಳ ಮೇಲಿನ ನಿರ್ಧಾರಗಳನ್ನು ಕಾಲಮಿತಿಯಲ್ಲಿ ತೆಗೆದುಕೊಳ್ಳದಿದ್ದರೆ, ಸಮಯದ ವ್ಯರ್ಥದಿಂದ ಅವು ಅಪ್ರಸ್ತುತವಾಗುತ್ತವೆ ಅಥವಾ ನಿರುಪಯುಕ್ತವಾಗುತ್ತವೆ ಮತ್ತು ಇದರಿಂದಾಗಿ ಅರ್ಜಿದಾರರು ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ'' ಎಂದೂ ಸಹ ಹೇಳಿದೆ
"ಅರ್ಜಿಗಳನ್ನು ಪರಿಶೀಲಿಸಿ ಲಿಖಿತವಾಗಿ ದಾಖಲಿಸಲಾದ ಕಾರಣಗಳನ್ನು ನೀಡಿ ಮಾನ್ಯತೆ ನೀಡಲು ಅಥವಾ ನಿರಾಕರಿಸಲು ಶಿಫಾರಸು ಮಾಡುವುದು ಸರ್ಕಾರದ ಮೇಲೆ ಕರ್ತವ್ಯವಾಗಿದೆ ಎಂದು ಹೇಳಬೇಕಾಗಿಲ್ಲ'' ಎಂದು ನ್ಯಾಯಾಲಯ ಸೂಚ್ಯವಾಗಿ ಸರ್ಕಾರದ ಕರ್ತವ್ಯವನ್ನು ನೆನಪು ಮಾಡಿಕೊಟ್ಟಿದೆ.