ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ.ಶಿವಕುಮಾರ್ ಗೆ ಮೊದಲ ಸತ್ವ ಪರೀಕ್ಷೆ
ಹಲವು ತಿಂಗಳು ಖಾಲಿ ಬಿದ್ದಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಅಂತೂ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿದ್ದಾಗಿದೆ. ಪಕ್ಷದ ಬಾವುಟವನ್ನು ಅಧಿಕೃತವಾಗಿ ಡಿಕೆಶಿ ಹಿಡಿಯುವುದೊಂದೇ ಬಾಕಿ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ ನಿಯೋಜನೆಗೊಂಡ ನಂತರ, ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು/ಅಭಿಮಾನಿಗಳು ಅವರ ನಿವಾಸದಲ್ಲಿ ಜಮಾವಣೆಗೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಕೊರೊನಾ ಹಾವಳಿ ಮುಗಿಯುವವರೆಗೆ ನಿವಾಸಕ್ಕೆ ಬರಬೇಡಿ ಎಂದು ಅವರು ಮನವಿಯನ್ನೂ ಮಾಡಿದ್ದಾರೆ.
ಡಿಕೆಶಿ ಮನೆಮುಂದೆ ಜನಜಾತ್ರೆ: ಹಬ್ಬ ಮುಗಿಯವರೆಗೂ ಬರಬೇಡಿ
ಸಣ್ಣವರು, ದೊಡ್ಡವರು ಎನ್ನದೇ ಎಲ್ಲಾ ಮುಖಂಡರನ್ನು ಭೇಟಿಯಾಗುತ್ತಿರುವ ಡಿಕೆಶಿ, ಎಲ್ಲರ ವಿಶ್ವಾಸ ಪಡೆದುಕೊಂಡು ಮುಂದಕ್ಕೆ ಸಾಗುವುದಾಗಿ ಹೇಳಿದ್ದಾರೆ. ಪಕ್ಷದಲ್ಲಿ ಇದೆ ಎನ್ನಲಾಗುವ ಒಂದೆರಡು ಬಣಗಳ ಬೆಂಬಲ ಡಿಕೆಶಿಗೆ ಸಿಗುತ್ತದೋ ಎನ್ನುವುದನ್ನು ತಿಳಿಯಲು ಹೆಚ್ಚುದಿನ ಬೇಕಾಗಿಲ್ಲ.
ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ.ಶಿವಕುಮಾರ್ ಗೆ ಮೊದಲ ಸತ್ವಪರೀಕ್ಷೆ ಎದುರಾಗಲಿದೆ. ಅದೆಂದರೆ, ಎರಡು ಕ್ಷೇತ್ರಗಳ ಉಪಚುನಾವಣೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಿಂದ ಜಾರಿ ಹೋಗಿದ್ದು ಎನ್ನುವುದು ಗಮನಿಸಬೇಕಾದ ವಿಚಾರ. ಇನ್ನು, ಜೆಡಿಎಸ್ ಬೆಂಬಲವನ್ನು ಡಿಕೆಶಿ ಪಡೆದುಕೊಳ್ಳುತ್ತಾರಾ?
ಆಯೋಗ ಉಪಚುನಾವಣೆ ವಿಚಾರವನ್ನು ಕೈಗೆತ್ತಿಕೊಳ್ಳಬಹುದು
ಮಸ್ಕಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಆರ್ ಆರ್ ನಗರದ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿರುವುದರಿಂದ, ಆಯೋಗ ಉಪಚುನಾವಣೆ ವಿಚಾರವನ್ನು ಕೈಗೆತ್ತಿಕೊಳ್ಳಬಹುದು.
ಆಯ್ಕೆ ಸರಿಯಾದ ನಿರ್ಧಾರ ಎಂದು ಹೈಕಮಾಂಡ್ ಗೆ ಬಿಂಬಿಸುವ ಸಂದರ್ಭ
ಈ ಎರಡು ಕ್ಷೇತ್ರದ ಚುನಾವಣಾ ಫಲಿತಾಂಶದಿಂದ, ರಾಜ್ಯ ರಾಜಕೀಯದಲ್ಲಿ ಗಂಭೀರ ಬದಲಾವಣೆ ಆಗದಿದ್ದರೂ, ಡಿಕೆಶಿ, ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹಾಗಾಗಿ ಡಿಕೆಶಿಗೆ ಇದು ಸತ್ವಪರೀಕ್ಷೆ ಮತ್ತು ತನ್ನ ಆಯ್ಕೆ ಸರಿಯಾದ ನಿರ್ಧಾರ ಎಂದು ಹೈಕಮಾಂಡ್ ಗೆ ಬಿಂಬಿಸುವ ಸಂದರ್ಭವಾಗಿದೆ.
ಮಧ್ಯಪ್ರದೇಶ ಸರ್ಕಾರ ಉಳಿಸಲು ಅಖಾಡಕ್ಕೆ ಇಳಿದ ಡಿ. ಕೆ. ಶಿವಕುಮಾರ್!
ಆರ್ ಆರ್ ನಗರದಲ್ಲಿ ಜೆಡಿಎಸ್ ಮತಬ್ಯಾಂಕ್ ನಿರ್ಣಾಯಕ
ಇದರ ಜೊತೆಗೆ, ಡಿಕೆಶಿ ಮಹತ್ವದ ನಿರ್ಧಾರವನ್ನೂ ತೆಗೆದುಕೊಳ್ಳುವಂತಹ ಸಮಯ. ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಲಬೇಕೇ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವುದೇ ಎನ್ನುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಲಬೇಕಿದೆ. ಯಾಕೆಂದರೆ, ಆರ್ ಆರ್ ನಗರದಲ್ಲಿ ಜೆಡಿಎಸ್ ಮತಬ್ಯಾಂಕ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಗೌಡರ ಕುಟುಂಬದ ಜೊತೆಗೆ ಡಿಕೆಶಿ ಉತ್ತಮ ಬಾಂಧವ್ಯ
ದೇವೇಗೌಡರ ಕುಟುಂಬದ ಜೊತೆಗೆ ಡಿಕೆಶಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಜೆಡಿಎಸ್ ಮನವೊಲಿಸಿ ಜಂಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ಸಿಗೆ ಸುಲಭವಾಗಬಹುದು. ಇನ್ನು ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ ಎರಡ್ಮೂರು ಆಯ್ಕೆಯನ್ನು ಈಗಾಗಲೇ ಹೊಂದಿದೆ.