ಧನಂಜಯ್ ಕುಮಾರ್ ಮರಳಲು ಅಡ್ವಾಣಿ ಒಪ್ಪಬೇಕು!
ಬೆಂಗಳೂರು, ಜ.9 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಆಪ್ತರು ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಆದರೆ, ಕೆಜೆಪಿ ಮುಖಂಡ ಧನಂಜಯ್ ಕುಮಾರ್ ಏನು ಮಾತಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪಕ್ಷದ ಮೂಲಗಳ ಪ್ರಕಾರ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಧನಂಜಯ್ ಕುಮಾರ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದ್ದ ಸಂದರ್ಭದಲ್ಲಿ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಇತರ ರಾಷ್ಟ್ರೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರಿಂದ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿ ಅಡ್ವಾಣಿ ವಿರೋಧ ಕಟ್ಟಿಕೊಂಡಿದ್ದರು. [ಯಡಿಯೂರಪ್ಪ ಟೀಂ ಬಿಜೆಪಿಗೆ]
ಬಿ.ಎಸ್.ಯಡಿಯೂರಪ್ಪ ಈ ವಿಚಾರದ ಕುರಿತು ಧನಂಜಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು, ಬಹಿರಂಗವಾಗಿ ಎಲ್.ಕೆ.ಅಡ್ವಾಣಿ ಅವರ ಕ್ಷಮೆ ಯಾಚಿಸಿದ್ದರು. ಆದರೆ, ಅಡ್ವಾಣಿ ಧನಂಜಯ್ ಕುಮಾರ್ ಅವರ ವಿರುದ್ಧ ಇನ್ನೂ ಮೃದು ಧೋರಣೆ ತೋರಿಲ್ಲ. ಆದ್ದರಿಂದ ಅವರು ಬಿಜೆಪಿಗೆ ಮರಳುವುದಕ್ಕೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. [ಧನಂಜಯ್ ಕಿಕ್ ಬ್ಯಾಕ್ ಕಿರಿಕ್]
ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಕೆಜೆಪಿಯ ಬಹುತೇಕ ಮುಖಂಡರು ಗುರುವಾರ ಬಿಜೆಪಿ ಸದಸ್ಯತ್ವ ಪಡೆಯುವುದು ಖಚಿತವಾಗಿದೆ. ಆದರೆ, ಧನಂಜಯ್ ಕುಮಾರ್ ಮಾತ್ರ ಅಡ್ವಾಣಿ ಕಿಕ್ ಬ್ಯಾಕ್ ಕಿರಿಕ್ ಮಾಡಿಕೊಂಡಿರುವುದರಿಂದ ಅವರು ಪಕ್ಷಕ್ಕೆ ಮರಳಲು ಅಡ್ವಾಣಿ ಸಮ್ಮತಿ ನೀಡಬೇಕು.
ಸದ್ಯ ಧನಂಜಯ್ ಕುಮಾರ್ ನವದೆಹಲಿಯಲ್ಲಿದ್ದಾರೆ. ಕೆಜೆಪಿ-ಬಿಜೆಪಿ ವಿಲೀನದ ಕುರಿತ ದಾಖಲೆಗಳನ್ನು ನೀಡಲು ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿ ಅಡ್ವಾಣಿ ಅವರನ್ನು ಭೇಟಿ ಮಾಡಿ. ಅವರ ಬಳಿ ಕ್ಷಮೆ ಕೇಳಿದ ಬಳಿಕ ಧನಂಜಯ್ ಕುಮಾರ್ ಬಿಜೆಪಿಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಳೆಯದೆಲ್ಲವನ್ನು ಮರೆತು ಪಕ್ಷಕ್ಕೆ ಮರಳುತ್ತಿದ್ದೇವೆ ಆದ್ದರಿಂದ ಧನಂಜಯ್ ಕುಮಾರ್, ಕ್ಷಮಾಪಣೆ ಕೇಳುವಂತೆ ಬೇಡಿಕೆ ಇಡುವುದು ಸರಿಯಲ್ಲ ಎಂಬ ವಾದವನ್ನು ಯಡಿಯೂರಪ್ಪ ಮಂಡಿಸಿದ್ದಾರೆ. ಈ ಕುರಿತು ಚರ್ಚೆಗಳು ಮುಂದುವರೆದಿವೆ. ಇದಕ್ಕಾಗಿಯೇ ಧನಂಜಯಕುಮಾರ್ ಅವರನ್ನು ತರಾತುರಿಯಲ್ಲಿ ಯಡಿಯೂರಪ್ಪ ಅವರು ದೆಹಲಿಗೆ ಕಳುಹಿಸಿದ್ದಾರೆ.
ಗುರುವಾರ ಸಂಜೆ ಅಥವ ಶುಕ್ರವಾರ ಧನಂಜಯ್ ಕುಮಾರ್ ದೆಹಲಿಯಿಂದ ಮರಳಲಿದ್ದು, ನಂತರ ಬಿಜೆಪಿ ಸೇರುವ ಕುರಿತು ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ. ಆದರೆ, ಯಡಿಯೂರಪ್ಪ ಜೊತೆಗೆ ಬಿಜೆಪಿ ತೊರೆದ ಇತರ ನಾಯಕರು ಗುರುವಾರ ಅಧಿಕೃತವಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ.