ಪಿಯು ಕಾಲೇಜು ದಾಖಲಾತಿಗೆ ವಿದ್ಯಾರ್ಥಿಗಳ ಹಿಂದೇಟು: ಕಾರಣವೇನು?
ಬೆಂಗಳೂರು, ಫೆಬ್ರವರಿ 23: ಕೋವಿಡ್ ಸಾಂಕ್ರಾಮಿಕ ಎಲ್ಲ ವಲಯಗಳಿಗೂ ತೀವ್ರ ಹೊಡೆತ ನೀಡಿದೆ. ಶಿಕ್ಷಣ ವಲಯವೂ ಇದರಿಂದ ಹೊರತಲ್ಲ. ಶಾಲಾ-ಕಾಲೇಜು ಆರಂಭ, ಶುಲ್ಕ ವಿಚಾರಗಳಲ್ಲಿ ಸಂಘರ್ಷಗಳು ನಡೆಯುತ್ತಿವೆ. ಈ ನಡುವೆ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಹಾಗೂ ದಾಖಲಾತಿ ಮಾಡಿಕೊಳ್ಳಲಾಗದ ಅಸಹಾಯಕ ಸ್ಥಿತಿಗೆ ತಲುಪಿರುವುದು ಬಹಿರಂಗವಾಗಿದೆ.
ರಾಜ್ಯದಲ್ಲಿ ಮೊದಲ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಪ್ರಮಾಣ ತಲಾ ಶೇ 10ರಷ್ಟು ಇಳಿಕೆಯಾಗಿದೆ. ಈಗಾಗಲೇ ಕೋವಿಡ್ ಕಾರಣದಿಂದ ವಿದ್ಯಾರ್ಥಿಗಳಿಗೆ ಶಾಲಾ ತರಗತಿಗಳು ನಡೆಯದೆ, ಆನ್ಲೈನ್ ಶಿಕ್ಷಣವು ಸಮರ್ಪಕವಾಗಿ ತಲುಪದೆ ಶಾಲಾಮಕ್ಕಳ ಕಲಿಕೆ ಪ್ರಕ್ರಿಯೆಗೆ ತೀವ್ರ ಹಿನ್ನಡೆಯಾಗಿದೆ.
ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ Time Table
ಪಿಯು ಪ್ರವೇಶಾತಿಗೆ ಫೆಬ್ರವರಿ 20 ಕೊನೆಯ ದಿನಾಂಕವಾಗಿತ್ತು. ಇದು ಕೋವಿಡ್ ವರ್ಷದಲ್ಲಿ ವಿದ್ಯಾರ್ಥಿಗಳು ಸೇರಿಕೊಳ್ಳಲು ಅನುಕೂಲವಾಗುವಂತೆ ಅನೇಕ ಬಾರಿ ಮುಂದೂಡಿಕೆಯಾಗಿತ್ತು. 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 6.5 ಲಕ್ಷ ವಿದ್ಯಾರ್ಥಿಗಳು ಮೊದಲ ಪಿಯುಸಿಗೆ ದಾಖಲಾಗಿದ್ದರೆ, 2020-21ನೇ ಶೈಕ್ಷಣಿಕ ವರ್ಷದಲ್ಲಿ 5.9 ಲಕ್ಷಕ್ಕೆ ಕುಸಿದಿದೆ. ಆಸಕ್ತಿಕರ ಸಂಗತಿಯೆಂದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆ ಈ ಎರಡೂ ವರ್ಷಗಳಲ್ಲಿ ಹೆಚ್ಚೂಕಡಿಮೆ ಒಂದೇ ರೀತಿಯಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ತಿಳಿಸಿದೆ. ಮುಂದೆ ಓದಿ.
ನಿರುದ್ಯೋಗಿ ಶಿಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!
ದಾಖಲಾತಿಗೆ ವಿದ್ಯಾರ್ಥಿಗಳ ಹಿಂದೇಟು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನ ಅಥವಾ ಪೂರಕ ಪರೀಕ್ಷೆಗಳನ್ನು ಬರೆದು 6.9 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ದತ್ತಾಂಶ ತಿಳಿಸಿದೆ. ಕೋವಿಡ್ ಕಾರಣದಿಂದ ಪಿಯು ದಾಖಲಾತಿಗೆ ಹೆಚ್ಚುವರಿ ಸಮಯ ನೀಡಲಾಗಿತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿಗೆ ಹಿಂದೇಟು ಹಾಕುತ್ತಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಹಲವು ಅನುಕೂಲತೆ
ಪ್ರವೇಶಾತಿ ದಿನಾಂಕಗಳ ವಿಸ್ತರಣೆ, ಕಾಲೇಜುಗಳ ಬದಲಾವಣೆಗೆ ಅವಕಾಶ, ಸಿಲಬಸ್ ಕಡಿತ ಮತ್ತು ಪರೀಕ್ಷೆಗಳನ್ನು ಬರೆಯಲು ಇರುವ ಕನಿಷ್ಠ ಹಾಜರಾತಿ ಮಟ್ಟವನ್ನು ಕೂಡ ಪಿಯು ಶಿಕ್ಷಣ ಇಲಾಖೆ ಇಳಿಕೆ ಮಾಡಿದೆ. ಈ ಮೂಲಕ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ದಾಖಲಾತಿಗೆ ಬರುವಂತೆ ಉತ್ತೇಜನ ನೀಡಲು ಪ್ರಯತ್ನಿಸಲಾಗುತ್ತಿದೆ.
2ನೇ ಪಿಯುದಲ್ಲೂ ಇಳಿಕೆ
ಎಸ್ಸೆಸ್ಸೆಲ್ಸಿ ಮುಗಿಸಿ ಮೊದಲ ಪಿಯುಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಮಾತ್ರವಲ್ಲ, ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆಯಾಗಿರುವುದು ಆಘಾತಕಾರಿಯಾಗಿದೆ.
ಮೌಲ್ಯಮಾಪನದಲ್ಲಿ ಉದಾರತೆ
ಪ್ರಸಕ್ತ ಸಾಲಿನಲ್ಲಿ 5.8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಗೆ ದಾಖಲಾಗಿದ್ದಾರೆ. ಆದರೆ ಮೊದಲ ಪಿಯುಸಿಯಲ್ಲಿ ತೇರ್ಗಡೆಯಾದ ಸುಮಾರು 71,000 ವಿದ್ಯಾರ್ಥಿಗಳು ಈ ಬಾರಿ ಕಾಲೇಜಿನತ್ತ ಮರಳಿಲ್ಲ. ಕಳೆದ ವರ್ಷ 5.6 ಲಕ್ಷ ವಿದ್ಯಾರ್ಥಿಗಳು ಮೊದಲ ಪಿಯು ಉತ್ತೀರ್ಣರಾಗಿದ್ದರು. ಈ ಬಾರಿ ಪ್ರಥಮ ಪಿಯುದಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನದ ವೇಳೆ ಉದಾರತೆ ಪ್ರದರ್ಶಿಸಿದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದರು.
Recommended Video
ಐಟಿಐ ದಾಖಲಾತಿಯಲ್ಲೂ ಇಳಿಕೆ
ಎಸ್ಸೆಸ್ಸೆಲ್ಸಿ ಬಳಿಕ ಅನೇಕ ವಿದ್ಯಾರ್ಥಿಗಳು ಕೈಗಾರಿಕಾ ಸಂಬಂಧಿ ತರಬೇತಿ ಪಡೆಯುವ ಐಟಿಐ ಕೋರ್ಸ್ ಆಯ್ದುಕೊಳ್ಳುತ್ತಾರೆ. ಈ ವರ್ಷ ಐಟಿಐ ದಾಖಲಾತಿಯಲ್ಲಿಯೂ ಕಸಿತವಾಗಿದೆ. 99,420 ಸೀಟುಗಳ ಪೈಕಿ ಇದುವರೆಗೂ 58,000 ಸೀಟುಗಳು ಮಾತ್ರ ಭರ್ತಿಯಾಗಿವೆ. ಕಳೆದ ವರ್ಷ 85,000 ಸೀಟುಗಳ ಪೈಕಿ 77,635 ಸೀಟುಗಳು ಭರ್ತಿಯಾಗಿದ್ದವು.