ಸಂತೋಷ್ ಹೆಗ್ಡೆ, ಕಂಬಾರರಿಗೆ 'ಚುಂಚಶ್ರೀ' ಪ್ರಶಸ್ತಿ
ಬೆಂಗಳೂರು: ಸೆಪ್ಟೆಂಬರ್. 21: ಆದಿಚುಂಚನಗಿರಿ ಸಂಸ್ಥಾನದಿಂದ ಕೊಡಮಾಡುವ ಚುಂಚಶ್ರೀ ಪ್ರಶಸ್ತಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಮಾಜಿ ಸಂಸದ ಜಿ.ಮಾದೇಗೌಡ, ಹೃದ್ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್, ಸಮಾಜ ಸೇವಕ ವಿ.ಕೆ.ಗಣಪತಿ ಪಾತ್ರರಾಗಿದ್ದಾರೆ.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸೆಪ್ಟೆಂಬರ್ 23 ರಿಂದ 25ರವರೆಗೆ 37ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರಸ್ವಾಮಿ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದರು.[ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸಂದರ್ಶನ]
ಸೆಪ್ಟೆಂಬರ್ 23ರಂದು ಸಂಜೆ 4 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಭವನದಲ್ಲಿ ಜಾನಪದ ಕಲಾ ಮೇಳಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ. ಜಾನಪದ ಹಾಡುಗಾರ್ತಿ ಮಾರಗೌಡನಹಳ್ಳಿಯ ಭಾಗ್ಯ, ಪಾಂಡವಪುರ ತಾಲೂಕು ಹೆಗ್ಗಡಹಳ್ಳಿಯ ಜಾನಪದ ಕಲಾವಿದ ಕೃಷ್ಣೇಗೌಡರಿಗೆ 'ಡಾ.ಎಚ್.ಎಲ್.ನಾಗೇಗೌಡ' ಪ್ರಶಸ್ತಿಯನ್ನು ರಾಜ್ಯದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಪ್ರದಾನ ಮಾಡಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸೆಪ್ಟೆಂಬರ್ 24ರ ಸಂಜೆ 5ಕ್ಕೆ ಸ್ವಾಮೀಜಿಗಳ ಮುತ್ತಿನ ಪಲ್ಲಕ್ಕಿ ಉತ್ಸವ, ಜಾನಪದ ಕಲಾವಿದರ ಮೆರವಣಿಗೆ ನಡೆಯಲಿದ್ದು, ರಾತ್ರಿ 8.30ಕ್ಕೆ ಶ್ರೀ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜರುಗಲಿದೆ. 25ರ ಬೆಳಗ್ಗೆ 10ಕ್ಕೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೋತ್ಸವ ಮತ್ತು ಜಾನಪದ ಕಲಾ ಮೇಳದ ಸಮಾರೋಪ ನಡೆಯಲಿದೆ ಎಂದು ಸ್ವಾಮೀಜಿ ಕಾರ್ಯಕ್ರಮದ ವಿವರಗಳನ್ನು ನೀಡಿದರು.