ಚಿತ್ರನಟಿ ತಾರಾ ಸೇರಿ ಮೂವರು ಪರಿಷತ್ ಸದಸ್ಯರ ಅವಧಿ ಅಂತ್ಯ
ಬೆಂಗಳೂರು, ಆಗಸ್ಟ್ 10: ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಚಿತ್ರನಟಿ ತಾರಾ ಅನುರಾಧ, ಕೆ ಬಿ ಶಾಣಪ್ಪ ಹಾಗೂ ಕಾಂಗ್ರೆಸ್ನ ಎಂಡಿ ಲಕ್ಷಮೀನಾರಾಯಣ ಸೇರಿದಂತೆ ಮೂವರ ಸದಸ್ಯತ್ವ ಅವಧಿ ಕೊನೆಗೊಂಡಿದ್ದು, ಈ ಕುರಿತು ಪರಿಷತ್ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.
2012ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಬಿಜೆಪಿ ಇಬ್ಬರು ಸದಸ್ಯರು ಹಾಗೂ ಲಕ್ಷ್ಮೀನಾರಾಯಣ ನೇಮಕಗೊಂಡಿದ್ದರು. ಇದೀಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಒಮ್ಮತದೊಂದಿಗೆ ಈ ಮೂರು ಸ್ಥಾನಗಳಿಗೆ ಭಾರಿ ಸ್ಪರ್ಧೆ ಏರ್ಪಡಲಿದೆ.
ವಿಧಾನ ಪರಿಷತ್ತಿನಲ್ಲಿ ತಾರಾ ಅನುರಾಧ ವಿದಾಯದ ಭಾಷಣ
ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಂದಾಣಿಕೆಯಿಲ್ಲದೆ ಚುನಾವಣೆಗೆ ಮುಂದಾಗುತ್ತಿರುವ ಜೆಡಿಎಸ್ ಕಾಂಗ್ರೆಸ್ ಪಕ್ಷಗಳ ಮೈತ್ರಿ ಪರಿಷತ್ ನಾಮಕರಣ ವಿಚಾರದಲ್ಲಿ ಮುಂದುವರೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಲ್ಲದೆ ಸಚಿವ ಸಂಪುಟ ರಚನೆ ವೇಳೆ ಎರಡೂ ಪಕ್ಷಗಳಲ್ಲಿ ಈಗಾಗಲೇ ಅಸಮಾಧಾನ ಮಡುಗಟ್ಟಿದ್ದು, ಇದರ ನಡುವೆಯೇ ಪರಿಷತ್ ಚುನಾವಣೆ ಎದುರಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರು ಸ್ಥಾನಗಳಿಗೆ ಯಾರನ್ನೂ ನೇಮಕ ಮಾಡಬೇಕೆಂಬ ಜಿಜ್ಞಾಸೆ ಎರಡೂ ಪಕ್ಷಗಳನ್ನು ಕಾಡುತ್ತಿದೆ.
ಅಧಿಕಾರ ಅತೃಪ್ತಿ ಹೊರಹಾಕಿದ ಹಂಗಾಮಿ ಸಭಾಪತಿ ಹೊರಟ್ಟಿ
ಕಾಂಗ್ರೆಸ್ ಪಕ್ಷ ಖಾಲಿಯಾಗುತ್ತಿರುವ ಎಲ್ಲಾ ಮೂರು ಸ್ಥಾನಗಳು ತಮ್ಮ ಪಕ್ಷಕ್ಕೆ ಬೇಕೆಂದು ಕೇಳುವ ಸಾಧ್ಯತೆಗಳಿವೆ. ಈಗಾಗಲೇ ಪರಿಷತ್ನ ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದು ಹೆಚ್ಚುವರಿ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿದೆ. ಆದರೆ ಖಾಲಿಯಾಗುವ ಎಲ್ಲಾ ಮೂರು ಸ್ಥಾನಗಳನ್ನು ಬಿಟ್ಟುಕೊಡಲು ಜೆಡಿಎಸ್ ಒಪ್ಪುತದೆಯೇ ಎಂದು ಸದ್ಯದ ಕುತೂಹಲ.