ಪತ್ರಕರ್ತ ಮೌನೇಶ್ ಕುಟುಂಬಕ್ಕೆ ಪ್ರಕಾಶ್ ರೈ 1 ಲಕ್ಷ ರುಪಾಯಿ ನೆರವು
ಬೆಂಗಳೂರು, ಜನವರಿ 16: "ಮೌನೇಶ್ ಕುಟುಂಬಕ್ಕೆ ಸಮಾಜದ ಬಗ್ಗೆ ನಂಬಿಕೆ ಬರುವಂತೆ ಮಾಡಬೇಕು. ಅದು ಹೇಗೆ ಸಾಧ್ಯ ಅಂತ ಯೋಚಿಸಿದಾಗ ನನಗೆ ಹೊಳೆದ ದಾರಿ ಅದು. ನನ್ನಿಂದ ಸಾಧ್ಯ ಆದ ಒಂದು ಲಕ್ಷ ರುಪಾಯಿ ಆ ಹುಡುಗನ ಕುಟುಂಬಕ್ಕೆ ಕೊಟ್ಟಿದ್ದೀನಿ. ಮುಂದೆ ನನ್ನಿಂದ ಏನು ಸಹಾಯ ಮಾಡುವುದಕ್ಕೆ ಸಾಧ್ಯವೋ ಅದನ್ನು ಮಾಡ್ತೀನಿ" ಎಂದರು ಪ್ರಕಾಶ್ ರೈ.
ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ
ಪತ್ರಕರ್ತ ಮೌನೇಶ್ ಸಾವಿನ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಅವರು, ಈಗಿನ ಹುಡುಗರಿಗೆ ಯಾಕಿಷ್ಟು ಆತುರ ಎಂದು ಬೇಸರಗೊಂಡರು. ಆ ಕುಟುಂಬಕ್ಕೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ ಎಂದ ಅವರು, ಈ ವಿಚಾರದಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಇದೆ ಎಂದು ಹೇಳಿದರು. ಜತೆಗೆ ಮೌನೇಶ್ ಕುಟುಂಬದವರ ಜತೆ ಮಾತನಾಡಿದ್ದನ್ನು ತಿಳಿಸಿದರು.
"ಮೌನೇಶ್ ಅಣ್ಣನ ಜತೆಗೆ ಮಾತನಾಡಿದೆ. ಇಂಥ ಸಂದರ್ಭದಲ್ಲಿ ಮನೆಗೆ ದೊಡ್ಡ ಮಗನಾಗಿ ಕಣ್ಣೀರು ಹಾಕಬಾರದು. ಕುಟುಂಬ ಮುನ್ನಡೆಸುವ ಜವಾಬ್ದಾರಿ ನಿನ್ನ ಮೇಲಿದೆ. ಮುಂದೆ ನನ್ನಿಂದ ಆಗುವ ಸಹಾಯ ಕೂಡ ಮಾಡ್ತೀನಿ ಅಂತ ಹೇಳಿದ್ದೇನೆ. ಆ ಕುಟುಂಬಕ್ಕೆ ನಾವೆಲ್ಲ ಸೇರಿ ಧೈರ್ಯ ಹೇಳಬೇಕಿದೆ. ನಿಮ್ಮ ಮಗನನ್ನು ಸಮಾಜಕ್ಕೆ ಕೊಟ್ಟಿದ್ದಿರಿ. ಈ ಸಮಾಜ ನಿಮ್ಮ ಜತೆಗಿದೆ ಎಂದು ಆ ತಾಯಿಗೆ ಹೇಳುವ ಜವಾಬ್ದಾರಿ ನಮ್ಮದು" ಎಂದು ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ಒನ್ಇಂಡಿಯಾ' ಕನ್ನಡ ಸಂಪರ್ಕಿಸಿದಾಗ ತಿಳಿಸಿದರು.