ಟಾಲಿವುಡ್ ನಟ ನರೇಶ್ ಬಾಬು- ರಮ್ಯಾ ರಘುಪತಿ ವಂಚನೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಬೆಂಗಳೂರು, ಜೂ. 28: ದಕ್ಷಿಣದ ಮೂರು ರಾಜ್ಯಗಳ ಅಳಿಯ, ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ ನರೇಶ್ ಅವರು ಮೂರನೇ ಪತ್ನಿಯ ವಿಚ್ಛೇದನ ಅಸಲಿ ಸತ್ಯ ಬಹಿರಂಗವಾಗಿದೆ.
ಈಗಾಗಲೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ಕೊಟ್ಟು ಮೂರನೇ ಪತ್ನಿ ರಮ್ಯಾ ರಘುಪತಿಗೆ ಡೈವೋರ್ಸ್ ನೀಡಲು ಆಡಿದ ನಾಟಕದ ಅಸಲಿ ಸತ್ಯ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆ ಎಳೆಯಲಾಗಿದೆ. ರಮ್ಯಾ ರಘುಪತಿ ವಿರುದ್ಧ ಹೊರಿಸಿರುವ 500 ಕೋಟಿ ರೂ. ವಂಚನೆ ಆರೋಪ ಸತ್ಯಕ್ಕೆ ದೂರವಾದುದು ಎಂಬುದನ್ನು ದೂರುದಾರರೇ ಒಪ್ಪಿಕೊಂಡಿದ್ದು, ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಈ ವಿಷಯವನ್ನು ಕನ್ನಡ ಸುದ್ದಿವಾಹಿನಿ 'ಪವರ್ ಟಿವಿ' ಬಯಲಿಗೆ ಎಳೆದಿದೆ.
ನರೇಶ್ ರೋಚಕ ಜರ್ನಿ:
ಟಾಲಿವುಡ್ ಸೂಪರ್ ಸ್ಟಾರ್ ಕೃಷ್ಣ ಅವರ ಕುಟುಂಬದ ಕಥೆಯಿದು. ವಿವಾದಿತ ನಟ ನರೇಶ್ಗೆ ನಟ ಕೃಷ್ಣ ಮಲತಂದೆ. ಇವರ ತಾಯಿ ತೆಲುಗು ಸಿನಿಮಾ ರಂಗದ ನಿರ್ದೇಶಕಿ, ನಟಿ ವಿಜಯ ನಿರ್ಮಲ. ಈ ಮೊದಲು ತಮಿಳುನಾಡು ಮೂಲದ ಮಹಿಳೆಯನ್ನು ಮದುವೆಯಾಗಿದ್ದ ನರೇಶ್ ವಿಚ್ಚೇದನ ಕೊಟ್ಟಿದ್ದ. ಆ ಬಳಿಕ ಆಂಧ್ರ ಪ್ರದೇಶದ ಮಹಿಳೆಯನ್ನು ಮದುವೆಯಾಗಿ ಕೆಲ ವರ್ಷಗಳ ಬಳಿಕ ಆಕೆಗೂ ವಿಚ್ಚೇದನ ಕೊಟ್ಟಿದ್ದ. ಆ ಬಳಿಕ ಕರ್ನಾಟಕದ ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಹೊಂದಿದ್ದ ರಮ್ಯಾ ರಘುಪತಿ ಅವರನ್ನು ನರೇಶ್ ಮದುವೆಯಾಗಿದ್ದ. ಇದೀಗ ಮತ್ತೊಂದು ಮದುವೆಯಾಗಲು ಹೊರಟಿರುವ ನರೇಶ್ ಮೂರನೇ ಪತ್ನಿಗೂ ವಿಚ್ಛೇದನ ಕೊಡಲು ರೂಪಿಸಿರುವ ಸಂಚು ಬಯಲಾಗಿದೆ.
ರಮ್ಯಾ ರಘುಪತಿ ಮೇಲೆ ಹೊರಿಸಿದ ಅರೋಪ :
ನಟ ನರೇಶ್ ಅವರ ಮೂರನೇ ಪತ್ನಿಯೇ ರಮ್ಯಾ ರಘುಪತಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಮ್ಯಾ ರಘುಪತಿ ಪ್ರತಿಷ್ಠಿತ ಮೋತಿ ಮಹಲ್ ಹೋಟೆಲ್ ಮಾಲೀಕರ ಪುತ್ರಿ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರಿಗೆ ಆಶ್ರಯ ಒದಗಿಸಿದ್ದ ಈ ಹೋಟೆಲ್ ನಲ್ಲಿ ಡಾ.ರಾಜ್ ಕುಮಾರ್, ರಜನಿಕಾಂತ್, ಅಂಬರೀಶ್ ಸೇರಿದಂತೆ ಬಹುಪಾಲು ನಟರ ಫೇವರಿಟ್ ಅಗಿತ್ತು ಎಂಬುದು ಗಮನಾರ್ಹ. ರಮ್ಯಾ ತಂದೆ ರಘುಪತಿಗೆ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ರಮ್ಯಾ ಚಿಕ್ಕಪ್ಪ ರಘುವೀರ್ ರೆಡ್ಡಿ ಆಂಧ್ರ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿ ಕೂಡ ಹೌದು. ಸಚಿವರಾಗಿ ಆಂದ್ರ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕೆಜಿಎಫ್-2 ಖ್ಯಾತಿಯ ಪ್ರಶಾಂತ್ ನೀಲ್ ಕೂಡ ರಮ್ಯಾಗೆ ಸೋದರ ಸಂಬಂಧಿ.
ನಾಲ್ಕನೇ ಪತ್ನಿಗಾಗಿ ಮೂರನೇ ಪತ್ನಿಗೆ ಕಿರುಕುಳ?
ಈಗಾಗಲೇ ಮೂರು ಮದುವೆಯಾಗಿರುವ ನರೇಶ್ ಇದೀಗ ನಾಲ್ಕನೇ ಮದುವೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಮೊದಲ ಪತ್ನಿಗೆ ಒಬ್ಬ ಪುತ್ರನಿದ್ದು, ಎರಡನೇ ಪತ್ನಿಗೂ ಒಬ್ಬ ಪುತ್ರನಿದ್ದಾನೆ. ಮೂರನೇ ಪತ್ನಿ ರಮ್ಯಾ ರಘುಪತಿ ಅವರಿಗೂ ಎಂಟು ವರ್ಷದ ಮಗನಿದ್ದಾನೆ. ಮೂರು ರಾಜ್ಯಗಳಿಂದ ಒಬ್ಬೊಬ್ಬರನ್ನು ಮದುವೆಯಾಗಿರುವ ನರೇಶ್ ಇದೀಗ ಮೂರನೇ ಪತ್ನಿಗೂ ವಿಚ್ಚೇದನ ಕೊಡುವ ಭಾಗವಾಗಿ ಪತ್ನಿ ವಿರುದ್ಧವೇ 500 ಕೋಟಿ ರೂ. ವಂಚನೆ ಅರೋಪ ಹೊರಿಸಿ ಮಾಧ್ಯಮಗಳಲ್ಲಿ ಮಾನ ಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪತ್ನಿ ರಮ್ಯಾ ಮೇಲೆ ವಂಚನೆ ಆರೋಪ ಹೊರಿಸುತ್ತಿರುವ ನಟ ನರೇಶ್, ಮಾಧ್ಯಮಗಳಲ್ಲಿ ತನ್ನ ಮಾಜಿ ಪತ್ನಿ ಎಂದು ಬಿಂಬಿಸುತ್ತಿದ್ದಾರೆ. ರಮ್ಯಾ ರಘುಪತಿಗೆ ವಿಚ್ಛೇದನ ನೀಡದೇ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಕಾನೂನು ಬದ್ಧವಾಗಿ ವಿಚ್ಛೇದನ ಕೊಡದೇ ಪವಿತ್ರಾ ಲೋಕೇಶ್ ಅವರನ್ನು ನಟ ನರೇಶ್ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಪತಿ ನರೇಶ್ ಮಾಡಿದ್ದ ಪ್ಲಾನ್ ರಹಸ್ಯ ಬಯಲು:
ನಾಲ್ಕನೇ ಮದುವೆಯಾಗದ್ದಾರೆ ಎನ್ನಲಾದ ನಟ ನರೇಶ್, ಮೂರನೇ ಪತ್ನಿ ರಮ್ಯಾ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಮರ್ಯಾದೆ ತೆಗೆದು ದೂರ ಮಾಡಲು ನಾನಾ ಪ್ಲಾನ್ ರೂಪಿಸಿರುವ ನರೇಶ್, ಇದೀಗ 500 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಹಲವರಿಂದ ದೂರು ಕೊಡಿಸಿದ್ದಾರೆ. ರಂಭಾ ಉನ್ನತಿ ಅರೋಮಾ ಪ್ರೆ. ಲಿ. ಕಂಪನಿ ಹೆಸರಿನಲ್ಲಿ ರಮ್ಯಾ ರಘುಪತಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಮ್ಯಾ ವಿರುದ್ಧ ಎಫ್ಐಆರ್ ಅಗುವ ಮುದಲೇ ಮಾಧ್ಯಮಗಳಲ್ಲಿ ವಂಚನೆ ಕುರಿತು ಪತಿ ನರೇಶ್ ಸುದ್ದಿ ಮಾಡಿಸಿ ತೇಜೋವಧೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಮ್ಯಾ ರಘುಪತಿ ತೇಜೋವಧೆಗೆ ಇಳಿದ ಅಸಲಿ ಸತ್ಯ:
ರಮ್ಯಾ ಅವರಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನಲಾದ ಐವರನ್ನು ಕನ್ನಡದ ಖಾಸಗಿ ವಾಹಿನಿ ಕುಟುಕು ಕಾರ್ಯಚರಣೆ ಮೂಲಕ ಸತ್ಯವನ್ನು ಬಯಲಿಗೆ ಎಳೆದಿದೆ. ರಮ್ಯಾ ರಘುಪತಿ ಅವರು 500 ಕೋಟಿ ಸಾಲ ಪಡೆದಿಲ್ಲ. ವಂಚನೆಯೂ ಮಾಡಿಲ್ಲ. ಅವರು ಪಡೆದ ಸಾಲವನ್ನು ಇಎಮ್ಐ ಮೂಲಕ ಪಾವತಿ ಮಾಡಿದ್ದಾರೆ ಎಂಬುದನ್ನು ದೂರದಾರರು ಹೇಳಿದ್ದಾರೆ. ರಮ್ಯಾಗೆ ಸಾಲ ನೀಡಿದ್ದಾರೆ ಎನ್ನಲಾದ ವೈದ್ಯ ಡಾ. ವಿನೋದ್ 'ನರೇಶ್ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಲಿದ್ದಾರೆ. ಈ ಕಾರಣಕ್ಕೆ ರಮ್ಯಾ ರಘುಪತಿ ವಿರುದ್ಧ ನಟ ನರೇಶ್ ಸಂಚು ರೂಪಿಸಿದ್ದಾರೆ ಎಂಬ ಸಂಗತಿಯನ್ನು ಬಾಯಿ ಬಿಟ್ಟಿದ್ದಾರೆ. ಸದ್ಯ ಆಂಧ್ರ ಪ್ರದೇಶದಲ್ಲಿ ಸಂಚನಲ ಮೂಡಿಸಿರುವ ನಟ ನರೇಶ್ - ರಮ್ಯಾ ರಘುಪತಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.