ಚರ್ಚೆ ಎಬ್ಬಿಸಿದ್ದ ಚಕ್ರವರ್ತಿ ಸೂಲಿಬೆಲೆಗೆ ಮಾಡಿದ್ದ ಟ್ವೀಟ್ ಕುರಿತು ಧನಂಜಯ್ ಸ್ಪಷ್ಟನೆ
ಬೆಂಗಳೂರು, ಮಾರ್ಚ್ 18: ನಟ ಧನಂಜಯ್ ಅವರು ಯುವ ಬ್ರಿಗೆಡ್ನ ಚಕ್ರವರ್ತಿ ಸೂಲಿಬೆಲೆ ಅವರನ್ನುದ್ದೇಶಿಸಿ ಮಾಡಿದ್ದ 'ಏನಾದರೂ ಆಗು ಮೊದಲು ಮಾನವನಾಗು' ಟ್ವೀಟ್ ಬಹು ಚರ್ಚೆ ಎಬ್ಬಿಸಿತ್ತು. ಅದಕ್ಕೀಗ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಇಟಲಿ ಸರ್ಕಾರವು 80 ವರ್ಷ ವಯಸ್ಸಿಗೆ ಮೇಲ್ಪಟ್ಟ ಕೊರೊನಾ ಸೋಂಕು ಪೀಡಿತರಿಗೆ ಐಸಿಯು ನೀಡುತ್ತಿಲ್ಲ ಎಂಬ ಸುದ್ದಿಯೊಂದರ ಲಿಂಕ್ ಅನ್ನು ಟ್ವಿಟ್ಟರ್ನಲ್ಲಿ ನಿನ್ನೆ ಹಂಚಿಕೊಂಡಿದ್ದ ಚಕ್ರವರ್ತಿ ಸೂಲಿಬೆಲೆ 'ಜೀಸಸ್ ಲವ್ಸ್ ಎವರಿಒನ್' ಎಂದು ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ರೋಗಿಗಳನ್ನು ಮತ್ತು ಕ್ರಿಶ್ಚಿಯನ್ ಧರ್ಮವನ್ನು ವ್ಯಂಗ್ಯಮಾಡುವಂತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಧನಂಜಯ್ ಮೇಲಿನಂತೆ ಪ್ರತಿಕ್ರಿಯಿಸಿದ್ದರು.
ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಧನಂಜಯ್, 'ಏನಾದರೂ ಆಗು ಮೊದಲು ಮಾನವನಾಗು' ಎಂದು ಸಿದ್ದಯ್ಯ ಪುರಾಣಿಕರ ವಾಕ್ಯವನ್ನು ಬರೆದು, ಚಕ್ರವರ್ತಿ ಸೂಲಿಬೆಲೆಗೆ ಮಾನವೀಯತೆ ಪಾಠ ಮಾಡಿದ್ದರು. ಇದು ಪರ-ವಿರೋಧ ಚರ್ಚೆಗೆ ನಾಂದಿಯಾಗಿತ್ತು.
ಚಕ್ರವರ್ತಿ ಸೂಲಿಬೆಲೆ ಮಾಡುತ್ತಿರುವ ಸಮಾಜ ಕಾರ್ಯವನ್ನು ಪ್ರಸ್ತಾಪಿಸಿ, ಧನಂಜಯ್ ಮಾಡಿರುವ ಕ್ರೌರ್ಯ ತುಂಬಿದ ಪಾತ್ರಗಳನ್ನು ಎಳೆದು ತಂದು ಧನಂಜಯ್ ಅವರನ್ನು ಟೀಕಿಸಿದ್ದರು. ಇನ್ನು ಕೆಲವರು ಧನಂಜಯ್ ಅವರು ಸರಿಯಾಗಿಯೇ ಹೇಳಿದ್ದಾರೆಂದು ಅವರ ಬೆನ್ನಿಗೆ ನಿಂತಿದ್ದರು. ನಾನೇಕೆ ಹಾಗೆ ಟ್ವೀಟ್ ಮಾಡಿದೆ ಎಂದು ಸ್ವತಃ ಧನಂಜಯ್ ಈಗ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.
''ರೋಗಿಗಳನ್ನು, ಸರ್ಕಾರದ ಪ್ರಯತ್ನಗಳನ್ನು ವ್ಯಂಗ್ಯ ಮಾಡುವುದು ತಪ್ಪು''
ಫೇಸ್ಬುಕ್ನಲ್ಲಿ ವಿಡಿಯೋ ಹಾಕಿರುವ ಧನಂಜಯ್, ''ಸಿದ್ದಯ್ಯ ಪುರಾಣಿಕರ 'ಮೊದಲು ಮಾನವನಾಗು' ಕವನ ಓದಿದರೆ ನಾನು ಏಕೆ ಆ ಟ್ವೀಟ್ ಮಾಡಿದೆ ಎಂಬುದು ಅರ್ಥವಾಗುತ್ತದೆ. ಇಡೀಯ ವಿಶ್ವವೇ ಕೊರೊನಾ ವಿರುದ್ಧ ಹೋರಾಡುತ್ತಿದೆ. ಇಟಲಿ ಸರ್ಕಾರದ ನಿರ್ಧಾರ ಸರಿಯಲ್ಲ ಅವರು ಬೇರೆಯ ದಾರಿ ಕಂಡುಕೊಳ್ಳಬೇಕು, ಆದರೆ ರೋಗಿಗಳ ಸ್ಥಿತಿಯನ್ನು ವ್ಯಂಗ್ಯ ಮಾಡುವುದು ತಪ್ಪಾಗುತ್ತದೆ'' ಎಂದು ಧನಂಜಯ್ ಹೇಳಿದ್ದಾರೆ.
''ನನ್ನ ದೇಶ, ಭಾಷೆ, ಜನರಿಗಾಗಿ ಹೋರಾಟ ಮಾಡುವ ಗುಣ ನನ್ನದು''
''ನನ್ನ ಟ್ವೀಟ್ನಿಂದಾಗಿ ನನ್ನನ್ನು ಯಾವುದೋ ಗುಂಪಿನವ ಎಂದು ಹೆಸರಿಸಿ ನನ್ನ ಬಗ್ಗೆ ಮಾತನಾಡುತ್ತಿರುವುದು ನನಗೆ ಸರಿಯೆಂದು ಕಾಣುತ್ತಿಲ್ಲ. ನನ್ನ ದೇಶ, ನನ್ನ ಊರು, ನನ್ನ ಭಾಷೆ, ನನ್ನ ಜನ, ನನ್ನ ನೆಲ ಇದರ ಬಗ್ಗೆ ಅಪಾರ ಪ್ರೇಮ ನನಗೆ ಇದೆ, ಇದಕ್ಕಾಗಿ ಹೋರಾಟ ಮಾಡುವ ಗುಣವೂ ನನಗೆ ಇದೆ'' ಎಂದು ಧನಂಜಯ್ ಹೇಳಿದ್ದಾರೆ.
ನಾನು ಮಾಡುತ್ತಿರುವ ಕಾರ್ಯಗಳ ಬಗ್ಗೆ ಮುಂದೆ ತಿಳಿಯಲಿದೆ: ಧನಂಜಯ್
''ಒಳ್ಳೆಯ ಕೆಲಸ ಮಾಡುವವರ ವಿಷಯದ ಬಗ್ಗೆ ಹೇಳುವುದಾದರೆ, ಜಗತ್ತಿನಲ್ಲಿ ಯಾರ್ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೋ ಎಲ್ಲರ ಬಗ್ಗೆಯೂ ನನಗೆ ಗೌರವ ಇದೆ. ನಾನೇನು ಒಳ್ಳೆಯ ಕೆಲಸ ಮಾಡಿದ್ದೀಯ ಎಂದು ಪ್ರಶ್ನೆ ಮಾಡಿದವರಿಗೆ ಕಾಲವೇ ಉತ್ತರ ನೀಡುತ್ತದೆ. ನಾನು ಮಾಡುತ್ತಿರುವ ಕಾರ್ಯ ಗೊತ್ತಿರುವವರಿಗೆ ಗೊತ್ತಿದೆ'' ಎಂದು ತಮ್ಮನ್ನು ಚಕ್ರವರ್ತಿ ಸೂಲಿಬೆಲೆ ಗೆ ಹೋಲಿಸಿ ಟೀಕಿಸಿದ್ದವರಿಗೆ ಉತ್ತರ ನೀಡಿದರು ಧನಂಜಯ್.
ನಾನು ಅಲ್ಲಮನೂ ಹೌದು, ಡಾಲಿಯೂ ಹೌದು: ಧನಂಜಯ್
ಧನಂಜಯ್ ಮಾಡಿರುವ ಕ್ರೌರ್ಯ ತುಂಬಿದ ಪಾತ್ರಗಳನ್ನು ಹೆಸರಿಸಿ 'ನಿನ್ನಿಂದ ಮಾನವೀಯತೆ ಪಾಠ' ಎಂದು ಕೆಲವರು ಧನಂಜಯ್ ವಿರುದ್ಧ ಟ್ವೀಟ್ಗಳನ್ನು ಮಾಡಿದ್ದರು, ಈ ಬಗ್ಗೆಯೂ ವಿಡಿಯೋದಲ್ಲಿ ಉತ್ತರಿಸಿರುವ ಧನಂಜಯ್, ''ಕಲಾವಿದನಾಗಿ ಭಿನ್ನ ಪಾತ್ರಗಳನ್ನು ಮಾಡುವುದು ಅವಶ್ಯಕ. ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವುದು ನನ್ನ ಕರ್ತವ್ಯ. ನಾನು ಅಲ್ಲಮನೂ ಹೌದು, ಡಾಲಿಯೂ ಹೌದು ಎಂದು ತಾವು ಮಾಡಿದ ಎರಡು ಭಿನ್ನ ಭಾವ ತುದಿಯ ಪಾತ್ರಗಳನ್ನು ಉದಾಹರಣೆಗೆ ನೀಡಿದ್ದಾರೆ ಧನಂಜಯ್.
ಜಾತಿ-ಧರ್ಮಗಳನ್ನು ಅಂಟಿಸಿಕೊಂಡವನಲ್ಲ: ಧನಂಜಯ್
ನಾನು ವೈಯಕ್ತಿಕವಾಗಿ ಜಾತಿ, ಧರ್ಮವನ್ನು ಅಂಟಿಸಿಕೊಂಡವನಲ್ಲ. ನನ್ನ ಮಾತುಗಳಲ್ಲಿ, ಸಂದರ್ಶನಗಳಲ್ಲಿ ಸಂಬಂಧಗಳು, ಪ್ರೀತಿಗಳಷ್ಟೆ ಬರುತ್ತವೆಯೇ ಹೊರತು, ಜಾತಿ, ಧರ್ಮ ಬರುವುದಿಲ್ಲ. ಹೃದಯದಲ್ಲಿ ಏನು ಬರುತ್ತದೆಯೋ ಅದನ್ನಷ್ಟೆ ನಾನು ಮಾತನಾಡುತ್ತೇನೆ'' ಎಂದು ಸಮಾಧಾನದಿಂದ ಯಾವುದೇ ಉದ್ರೇಕಗಳಿಲ್ಲದೆ ಮಾತನಾಡಿದ್ದಾರೆ ಧನಂಜಯ್.
ಇದು ವಿಜ್ಞಾನ ಮಾತನಾಡುವ ಹೊತ್ತು, ಧರ್ಮವನ್ನಲ್ಲ: ಧನಂಜಯ್
''ಈ ಪ್ರಸ್ತುತ ಸಂದರ್ಭದಲ್ಲಿ ನಾವು ವೈದ್ಯಕೀಯ ವಿಜ್ಞಾನದ ಬಗ್ಗೆ ಮಾತನಾಡಬೇಕಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರೊನಾ ಮಾರಿಯ ವಿರುದ್ಧ ಹೋರಾಡುತ್ತಿದ್ದಾರೆ ಅವರಿಗೆ ಸಲಾಂ ಹೇಳಬೇಕು. ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ ನಾವು ಸರ್ಕಾರ ಮತ್ತು ವೈದ್ಯರೊಂದಿಗೆ ಸಹಕರಿಸಬೇಕಿದೆ'' ಎಂದ ಧನಂಜಯ್ ಈ ಸಮಯದಲ್ಲಾದರೂ ಧರ್ಮ, ಜಾತಿಗಳನ್ನು ಬದಿಗೆ ಸರಿಸೋಣ ಎಂಬ ಒಳಮಾತನ್ನೂ ಸೂಕ್ಷ್ಮವಾಗಿ ದಾಟಿಸಿದ್ದಾರೆ.
ಸುಂದರ ಕವಿತೆ ಓದಿದ ಧನಂಜಯ್
ಕೊನೆಯದಾಗಿ ಮನುಷ್ಯ ಪ್ರೇಮ ಸಾರುವ ಸುಂದರ ಕವಿತೆಯೊಂದಿಗೆ ಮಾತು ಮುಗಿಸಿದ ಧನಂಜಯ್, 'ಕೊರೊನಾ ಮುಗಿದ ಮೇಲೆ ಎಲ್ಲರೂ ಕೈ ಕುಲುಕುವ, ತಬ್ಬಿಕೊಳ್ಳುವ, ಲವ್ ಯು ಆಲ್' ಎಂದು ನಕ್ಕು ವಿಡಿಯೋ ಸಂದೇಶ ಮುಗಿಸಿದ್ದಾರೆ. ವಿಡಿಯೋ ಮೂಲಕ ಈ ಭಿಕರ ಸಂದರ್ಭದಲ್ಲಿ ಮಾನವೀಯತೆಯೇ ಮುಖ್ಯ, ಜಾತಿ-ಧರ್ಮದ ಕೆಸೆರೆರಚಾಟಕ್ಕೆ ಇದು ಸಮಯವಲ್ಲ ಎಂದು ಹೇಳಿದ್ದಾರೆ.