ಕಾವೇರಿ ನದಿ ಹಂಚಿಕೆ ಕುರಿತಂತೆ ಅನಂತ್ ನಾಗ್ ವಿಡಿಯೋ
Recommended Video
ಬೆಂಗಳೂರು, ಏಪ್ರಿಲ್ 10: ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ತಮಿಳುನಾಡಿನ ರೈತರು ಆಗ್ರಹಿಸಿದ್ದಾರೆ. ರೈತರ ಹೋರಾಟಕ್ಕೆ ಅಲ್ಲಿನ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಯಾಗಿ ಕನ್ನಡದ ಹಿರಿಯ ನಟ ಮಾಜಿ ಬೆಂಗಳೂರು ಅಭಿವೃದ್ಧಿ ಸಚಿವ ಅನಂತ್ ನಾಗ್ ಅವರು ಮೊದಲ ಬಾರಿಗೆ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದಾರೆ.
ಕಾವೇರಿ ಸಂಬಂಧ ವಿಡಿಯೋ ಮಾಡಿರುವ ಅನಂತನಾಗ್ ಅವರು, ತಮಿಳುನಾಡಿನ ರಾಜಕೀಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ರಜನಿಕಾಂತ್, ಕಮಲ್ ಹಾಸನ್ ಅವರಿಗೂ ಚುರುಕು ಮುಟ್ಟಿಸಿದ್ದಾರೆ.
ಕಾವೇರಿ ವಿಚಾರವಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಬಂದಿದೆ. ಸದ್ಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುಕೂಲ ಮಾಡಿ ಕೊಡಲಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ, ಕೇಂದ್ರದಲ್ಲಿ ಯಾವುದೇ ಸರ್ಕಾರ ಕಾವೇರಿ ವಿಚಾರದಲ್ಲಿ ಏನೇ ತೀರ್ಮಾನ ತೆಗೆದುಕೊಂಡರು, ಅಷ್ಟೇ ಏಕೆ ಸುಪ್ರೀಂ ಕೋರ್ಟ್ನ ತೀರ್ಪಿನ ವಿರುದ್ಧವೂ ಅಲ್ಲಿಯ ರಾಜಕಾರಣಿಗಳು ಅಪಸ್ವರ ಎತ್ತುತ್ತ ಬಂದಿದ್ದಾರೆ.
ತಮಿಳುನಾಡಿನಲ್ಲಿ ಸದ್ಯ ಯಾವುದೇ ಚುನಾವಣೆಯಿಲ್ಲದಿದ್ದರೂ, ಅಲ್ಲಿಯ ನಟರಿಬ್ಬರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಯಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಭಾಷೆ, ನೆಲ-ಜಲ ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನೂ ಕೂಡ ಟೊಂಕ ಕಟ್ಟಿ ನಿಂತಿದ್ದೇನೆ ಎಂದು ಅನಂತನಾಗ್ ಘೋಷಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮತ್ತೆ ಪ್ರತಿಭಟನೆ ನಡೆಸುತ್ತಿದೆ. ಪಕ್ಷಾತೀತವಾಗಿ ಅಲ್ಲಿಯ ರಾಜಕೀಯ ಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಇದ್ದಕ್ಕೆ ತಮಿಳು ಚಿತ್ರರಂಗ ಕೂಡ ಕೈಜೋಡಿಸಿದೆ. ಇತ್ತ ಕನ್ನಡಿಗರ ಪರ ಹಿರಿಯ ನಟ ಅನಂತನಾಗ್ ಅವರು ಧ್ವನಿ ಎತ್ತಿರುವುದು ಹೋರಾಟಕ್ಕೆ ಬಲ ಬಂದಂತಾಗಿದೆ.