ಅಂದು ಅಂಬರೀಶ್ ಎಂಬ ತಾಕತ್ತು ಇತ್ತು, ಇಂದು ಯಾರಿದ್ದಾರೆ?
ಬೆಂಗಳೂರು, ನವೆಂಬರ್ 26: ಅಂಬರೀಶ್ ಅವರ ಹಿಂದೆ ಅಂಟಿಕೊಂಡ 'ರೆಬೆಲ್ ಸ್ಟಾರ್' ವಿಶೇಷಣ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ. ರಾಜಕೀಯ ಬದುಕಿನಲ್ಲಿಯೂ ಅವರು ರೆಬೆಲ್ ಆಗಿದ್ದರು, ವೈಯಕ್ತಿಕ ಬದುಕಿನಲ್ಲಿಯೂ ಅವರ ವ್ಯಕ್ತಿತ್ವ ಬೇರೆಯಲ್ಲ ಅವರ ಜತೆಗಿರುವ ಈ ವಿಶೇಷಣ ಬೇರೆಯಲ್ಲ ಎಂಬಂತೆಯೇ ಇದ್ದರು.
ಕನ್ನಡ ಚಿತ್ರರಂಗದ ಪಾಲಿಗಂತೂ ಅವರೊಂದು ದೊಡ್ಡ ಶಕ್ತಿಯಾಗಿದ್ದರು. ಸಡಗರ, ದುಃಖ ಎರಡೂ ಸಂದರ್ಭಗಳಲ್ಲಿಯೂ ಆ ಸನ್ನಿವೇಶವನ್ನು ನಿಭಾಯಿಸಲು ಅಲ್ಲಿ ಅಂಬರೀಶ್ ಉಪಸ್ಥಿತಿ ಇರಲೇಬೇಕಿತ್ತು.
Live Updates ಅಗಲಿದ ಅಂಬಿಗೆ ವಿದಾಯ ಹೇಳುವ ಹೊತ್ತು
ಸುಮಾರು 9 ವರ್ಷಗಳ ಹಿಂದೆ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಇನ್ನೂ ಹಸಿಯಾಗಿದೆ. ಅಂದು 'ಸಾಹಸ ಸಿಂಹ' ವಿಷ್ಣುವರ್ಧನ್, ಅಂಬಿ ಅವರಂತೆಯೇ ಹಠಾತ್ತಾಗಿ ಬದುಕಿಗೆ ವಿದಾಯ ಹೇಳಿದ್ದರು.
ಅಂದು ಕೂಡ ಹೀಗೆಯೇ ಅಭಿಮಾನಿಗಳ ದುಃಖ ಕಟ್ಟೆಯೊಡೆದಿತ್ತು. ಅಂತ್ಯಸಂಸ್ಕಾರದ ವೇಳೆ ಉಂಟಾದ ವಿವಾದ, ಗದ್ದಲಗಳು ಆಕ್ರೋಶ ಭುಗಿಲೇಳುವಂತೆ ಮಾಡಿದ್ದವು. ಆಗ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ್ದು ಅಂಬರೀಶ್ ಎಂಬ ಶಕ್ತಿ.
2009ರ ಡಿಸೆಂಬರ್ 30ರಂದು ವಿಷ್ಣುವರ್ಧನ್ ನಿಧನರಾದ ಸಂದರ್ಭದಲ್ಲಿ ಪಾರ್ಥಿವ ಶರೀರದ ಪಕ್ಕದಲ್ಲಿಯೇ ಇದ್ದು, ಪೊಲೀಸರಿಗೆ, ಕುಟುಂಬದವರಿಗೆ ಮಾರ್ಗದರ್ಶನ ಮಾಡುತ್ತಾ ಗದ್ದಲಗಳು ಹೆಚ್ಚಾಗದಂತೆ ತಡೆದಿದ್ದರು. ಅಂದು ಅಲ್ಲಿ ಅಂಬರೀಶ್ ಇಲ್ಲದಿದ್ದರೆ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು.
ಅಂಬರೀಶ್ ಪಾರ್ಥಿವ ಶರೀರ ಮೆರವಣಿಗೆಗೆ ಬಂದೋಬಸ್ತ್: ಇಲ್ಲಿದೆ ಮಾಹಿತಿ
ಅದಕ್ಕೂ ಹಿಂದೆ ರಾಜಕುಮಾರ್ ಅವರ ನಿಧನದ ವೇಳೆಯೂ ಅಂಬರೀಶ್ ಎಲ್ಲ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಆಗ ಬೆಂಗಳೂರು ಉದ್ವಿಗ್ನಗೊಂಡಿತ್ತು.
ಚಿತ್ರರಂಗ ಪ್ರತಿ ಗಣ್ಯ ವ್ಯಕ್ತಿಯನ್ನು ಕಳೆದುಕೊಂಡಾಗಲೂ ಅಲ್ಲಿ ಅಂಬರೀಶ್ ಹಾಜರಾತಿ ಇರುತ್ತಿತ್ತು. ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿತ್ತು.
ಆದರೆ, ಇಂದು ಅಂಬರೀಶ್ ಅವರೇ ಮೌನವಾಗಿದ್ದಾರೆ. ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ವಿಷ್ಣುವರ್ಧನ್ ಸಮಾಧಿ ಪಕ್ಕವೇ ಅಂಬರೀಶ್ ಸಮಾಧಿ ಆಗಬೇಕು ಎಂಬ ಒತ್ತಾಯ ಈಗಲೂ ಕೇಳಿಬರುತ್ತಿದೆ. ನೋವಿನಿಂದಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅವರನ್ನು ನಿಯಂತ್ರಿಸಲು, ಕುಟುಂಬದವರಿಗೆ ಧೈರ್ಯ ಹೇಳಲು ಅಲ್ಲಿ ಅಂಬಿ ಇಲ್ಲ.
ಕಂಠೀವರ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆಗೆ ತಕರಾರು
ಚಿತ್ರರಂಗದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಅದನ್ನು ಬಗೆಹರಿಸಲು ಇದ್ದ ಏಕೈಕ ನಾಯಕರೆಂದರೆ ಅಂಬರೀಶ್. ಯಾರದ್ದೋ ಸಿನಿಮಾ ಬಿಡುಗಡೆ ಸಮಸ್ಯೆ, ಜಗಳ, ಸಂಕಷ್ಟಗಳಿಗೆ ಪರಿಹಾರ ಅಂಬರೀಶ್ ಅವರಲ್ಲಿ ಸಿಗುತ್ತಿತ್ತು.
ಇತ್ತೀಚೆಗೆ ಚಿತ್ರರಂಗದಲ್ಲಿ ಮೀಟೂ ವಿವಾದ ಭುಗಿಲೆದ್ದಾಗ ಸಂಧಾನ ಸಭೆ ನಡೆಸಲೂ ಅಂಬರೀಶ್ ಬರಬೇಕಾಗಿತ್ತು. ಚಿತ್ರರಂಗದ ಸಂಭ್ರಮಗಳಲ್ಲಿಯೂ ಅವರ ಮಾರ್ಗದರ್ಶನ ಬೇಕಿತ್ತು. ಈಗ ಅವರ ಹೆಜ್ಜೆ ಗುರುತುಗಳ ಹಿಂದೆ ಮತ್ತೊಬ್ಬ ನಾಯಕ ಕಾಣಿಸುತ್ತಿಲ್ಲ. ಚಿತ್ರರಂಗವನ್ನು ಆವರಿಸಿರುವ ಶೂನ್ಯ ಬಹುಶಃ ಹಾಗೆಯೇ ಉಳಿಯುತ್ತದೆಯೇನೋ...