ಅಭಿಷೇಕ್ ಅಂಬರೀಷ್ಗೆ ರಾಜಕೀಯ ಆಫರ್ ನಿಜ: ಸುಮಲತಾ ಸ್ಪಷ್ಟನೆ
ಮಂಡ್ಯ, ಜೂ. 28: ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ ಎಂಬುದು ವಿರೋಧಿಗಳು ಮಾಡುತ್ತಿರುವ ಅಪಪ್ರಾಚಾರ. ಮಂಡ್ಯವನ್ನು ನಾನು ಬಿಡಲ್ಲ. ಮಂಡ್ಯದ ಜನರೂ ನನ್ನ ಬಿಡುವುದಿಲ್ಲ. ನನ್ನ ಜನರಿಗೆ ತೊಂದರೆ ಆದ್ರೆ ಹೋರಾಟ ಮಾಡುತ್ತೇನೆ. ನ್ಯಾಯ ಕೇಳುತ್ತೇನೆ. ನನ್ನದು ಫೋಟೋ ಪಾಲಿಟಿಕ್ಸ್ ಅಲ್ಲ. ಕೆಲಸ ಮಾಡಿಸಿ ಕ್ಯಾಮರಾ ಮುಂದೆ ಮೀಡಿಯಾ ನಾನು ಪ್ರಚಾರ ಪಡೆಯುವುದಿಲ್ಲ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕೊಟ್ಟಿರುವ ಪ್ರತಿಕ್ರಿಯೆಯಿದು. ಪುತ್ರ ಅಭಿಷೇಕ್ ಅಂಬರೀಷ್ ಪಾಲಿಟಿಕ್ಸ್ಗೆ ಸೇರುತ್ತಾರೆ, ಸಂಸದೆ ಸುಮಲತಾ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ವದಂತಿಗಳಿಗೆ ಸುಮಲತಾ ಅವರು ನೀಡಿದ ಪ್ರತಿಕ್ರಿಯೆ.
ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಡ್ಯಗೆ ರೈಲು ಮೂಲಕ ಆಗಮಿಸಿದ ಸುಮಲತಾ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಅಭಿಷೇಕ್ ಅಂಬರೀಷ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವದಂತಿಗಳ ನಡುವೆ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ. ಅಭಿಷೇಕ್ಗೆ ಕೆಲವು ರಾಜಕೀಯ ಪಕ್ಷಗಳಿಂದ ಆಫರ್ ಬಂದಿರುವುದು ನಿಜ. ಯಾವ ಪಕ್ಷಕ್ಕೆ ಅಭಿಷೇಕ್ ಅಗತ್ಯವೋ, ಅಭಿಷೇಕ್ ಮನಸ್ಥಿತಿಗೆ ಆ ಪಕ್ಷ ಹೊಂದಿಕೊಳ್ಳುತ್ತದೆಯೋ ಅಂತಹ ಪಕ್ಷಗಳು ಮಾತನಾಡುತ್ತವೆ ಎಂದು ತಿಳಿಸಿದ್ದಾರೆ.
ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ ಎಂಬುದು ಶುದ್ಧ ಸುಳ್ಳು. ನಾನು ಮಂಡ್ಯದ ಸಂಸದೆ. ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ. ನಾನು ಕೇಳಿಯೂ ಇಲ್ಲ. ಮಂಡ್ಯವನ್ನು ನಾನು ಬಿಡುವುದಿಲ್ಲ. ನನ್ನನ್ನು ಮಂಡ್ಯದ ಜನರೂ ಬಿಟ್ಟುಕೊಡುವುದಿಲ್ಲ. ಇದು ವಿರೋಧಿಗಳ ಅಪಪ್ರಚಾರದ ಭಾಗವಷ್ಟೇ. ಬೇರೆ ಕ್ಷೇತ್ರವನ್ನು ಕೇಳಿದ್ದಾರೆ ಎಂಬುದು ರಾಜಕೀಯ ಗಿಮಿಕ್. ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅವರು ಸೃಷ್ಟಿಸಿರುವ ವಿಚಾರವಿದು. ನಾನು ಕೀಳುಮಟ್ಟದ ರಾಜಕಾರಣ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಕೋಲ್ಡ್ ವಾರ್ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ನಮ್ಮ ರೈತರಿಗೆ, ನಮ್ಮ ಜನರಿಗೆ ತೊಂದರೆ ಆದರೆ ನಾನು ಹೋರಾಟ ಮಾಡುತ್ತೇನೆ. ನಮ್ಮ ಭಾಗದ ಜನರಿಗೆ ತೊಂದರೆ ಆದರೆ ನೇರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಪರ್ಕಿಸಿ ನ್ಯಾಯ ಕೇಳುತ್ತೇನೆ. ನನ್ನದು ಫೋಟೋ ಪಾಲಿಟಿಕ್ಸ್ ಅಲ್ಲ. ಕೆಲಸ ಮಾಡಿಸಿ ಕ್ಯಾಮರಾ ಮುಂದೆಯೂ ತೋರಿಸುವುದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.