ಶರಾವತಿ ಸಂತ್ರಸ್ತರಿಗೆ ತೊಂದರೆಯಾಗದಂತೆ ಕ್ರಮ: ಬಸವರಾಜ ಬೊಮ್ಮಾಯಿ
ಶಿವಮೊಗ್ಗ, ನವೆಂಬರ್ 25: ಶರಾವತಿ ಸಂತ್ರಸ್ತರ ಕುರಿತ ವರದಿಯನ್ನು ಕೇಂದ್ರ ಸರ್ಕಾರದ ಅನುಮತಿಗೆ ಕೂಡಲೇ ಸಲ್ಲಿಸಿ, ಆದಷ್ಟು ಬೇಗನೆ ಅನುಮತಿ ಪಡೆದು ಕ್ರಮಬದ್ಧಗೊಳಿಸಿ, ಶರಾವತಿ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರದಂದು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶರಾವತಿ ಸಂತ್ರಸ್ತರ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಹಿಂದೆ ಅಧಿಸೂಚನೆ ಹೊರಡಿಸಿದ್ದ ಆಸ್ತಿಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಪಡೆಯಬೇಕಿದೆ. ಡಿಸೆಂಬರ್ ಮೂರನೇ ವಾರ ವಿಧಾನಸಭಾ ಅಧಿವೇಶನದೊಳಗೆ ವರದಿ ನೀಡಲು ಸೂಚಿಸಿದ್ದು, ವರದಿಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಳೆದ ಬಾರಿಯ ಅಧಿಸೂಚನೆ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಆಗಿದ್ದರಿಂದ ಅದು ಸ್ಥಗಿತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ತಿಳಿಸಲಾಗಿದೆ. ಶೀಘ್ರವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ರಾಜ್ಯಕ್ಕೆ ಬಹಳ ಗಟ್ಟಿಯಾದ ಕಾನೂನು ನೆಲಗಟ್ಟಿದೆ. ಸಂವಿಧಾನದ ಕಲಂ 3ರಲ್ಲಿ ಕೂಡ ಅದನ್ನೇ ಹೇಳಲಾಗಿದೆ. ರಾಜ್ಯ ಪುನರ್ ವಿಂಗಡನಾ ಕಾಯ್ದೆಯ ಪ್ರಕಾರ ಕರ್ನಾಟಕ ಎಲ್ಲ ರೀತಿಯಿಂದಲೂ ಸರಿ ಇದೆ. 2004 ರಲ್ಲಿ ಪ್ರಕರಣ ದಾಖಲು ಮಾಡಿದಾಗಿನಿಂದ ಈವರೆಗೆ ಪ್ರಕರಣವನ್ನು ಪರಿಗಣಿಸಬೇಕೆ ಎಂಬ ಬಗ್ಗೆಯೇ ತೀರ್ಮಾನವಾಗಿಲ್ಲ. ಪ್ರಕರಣವನ್ನು ಪರಿಗಣಿಸಬಾರದು ಎಂದು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಲಾಗಿದೆ. ಅದನ್ನೇ ಗಟ್ಟಿಯಾಗಿ ಮಂಡಿಸಲಾಗುವುದು ಎಂದರು.
ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿಶೇಷ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಿದ ಮೇಲೆ ಯುಎಪಿಎ ಕಾಯ್ದೆಯಡಿ ಬರುವ ವಿಚಾರಗಳು ಹಾಗೂ ಹೊರದೇಶಗಳಿಗೆ ಸಂಪರ್ಕವಿರುವ ಪ್ರಕರಣಗಳನ್ನು ಎನ್.ಐ.ಎ ಗೆ ಹಸ್ತಾಂತರ ಮಾಡಲೇಬೇಕಾಗುತ್ತದೆ. ನಮ್ಮಲ್ಲಿಯೂ ಪೋಲಿಸರು ಉತ್ತಮ ಕೆಲಸ ಮಾಡಿದ್ದಾರೆ. ಮಂಗಳೂರು ಸ್ಫೋಟ ಪ್ರಕರಣದಲ್ಲಿ 24 ಗಂಟೆಗಳಲ್ಲಿ ವ್ಯಕ್ತಿಯ ಪತ್ತೆ ಹಚ್ಚಿದ್ದಾರೆ. ಯುಎಪಿಎ ಕಾಯ್ದೆಯಡಿ ಬರುವ ಭಯೋತ್ಪಾದಕ ಕೃತ್ಯಗಳನ್ನು ಎನ್.ಎ.ಐಗೆ ವಹಿಸಲೇಬೇಕು ಎಂದರು.
ಮಲೆನಾಡಿನ ಡೀಮ್ಡ್ ಅರಣ್ಯದ ಬಗ್ಗೆ ನಿರ್ಣಯ ಕೈಗೊಂಡು ಸುಮಾರು 6 ಲಕ್ಷಕ್ಕೂ ಹೆಚ್ಚು ಎಕರೆಗಳನ್ನು ಡೀಮ್ಡ್ ಅರಣ್ಯ ವಾಪ್ತಿಯಿಂದ ತೆಗೆದು ಕಂದಾಯ ಇಲಾಖೆಗೆ ವಹಿಸಿದೆ. ಸರ್ವೆ ಸಂಖ್ಯೆಗಳನ್ನು ನೀಡಲಾಗುವುದು. ಆರೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಅತಿ ಹೆಚ್ಚು ಶಿವಮೊಗ್ಗ ಹಾಗೂ ಮಲೆನಾಡು ಪ್ರದೇಶಕ್ಕೆ ಬರುತ್ತದೆ. ಕೆಲವನ್ನು ಕಾನೂನು ಇಲಾಖೆಯಲ್ಲಿ ಪರಿಶೀಲನೆ ಮಾಡಿ, ಇನ್ನು ಕೆಲ ವಿಚಾರಗಳನ್ನು ಸಂಪುಟದ ಉಪಸಮಿತಿ ರಚಿಸಿ ವಹಿಸಲಾಗಿದೆ ಎಂದರು.
ಇನ್ನೂ ಚುಕ್ಕೆ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸರ್ಕಾರದಿಂದ ಅಡಿಕೆಗೆ ಚುಕ್ಕೆ ರೋಗ ನಿಯಂತ್ರಣಕ್ಕೆ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ತಜ್ಞರು ನೀಡುವ ಪರಿಹಾರಗಳನ್ನು ಕಾರ್ಯಗತ ಮಾಡಲಾಗುವುದು ನವೆಂಬರ್ 27 ರಂದು ತೀರ್ಥಹಳ್ಳಿಗೆ ಭೇಟಿ ನೀಡಿ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೇಂದ್ರದ ತಂಡವೂ ಆಗಮಿಸಿದೆ. ಅತಿ ಶೀಘ್ರದಲ್ಲಿಯೇ ಪರಿಹಾರ ನೀಡುತ್ತಾರೆ ಎಂದರು.