ಮಧುಗಿರಿಯಲ್ಲಿ ಬಾಲಕ ಸಾವು ಪ್ರಕರಣ; ಕರ್ತವ್ಯ ಲೋಪ ಕಂಡು ಬಂದರೆ ವೈದ್ಯರ ವಿರುದ್ಧ ಕ್ರಮ: ಸುಧಾಕರ್
ಬೆಂಗಳೂರು, ಡಿಸೆಂಬರ್ 3: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಶುಕ್ರವಾರ ಐದು ವರ್ಷದ ಬಾಲಕ ನೀರಿನ ಸಂಪ್ ನಲ್ಲಿ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ಇಲಾಖಾ ತನಿಖೆ ನಡೆಸಿ ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶುಕ್ರವಾರ ಸಂಜೆ ಸುಮಾರು 4:15 ವೇಳೆಗೆ ಮಗು ನೀರಿಗೆ ಬಿದ್ದಿರುವುದನ್ನು ಗಮನಿಸಿದ ಹೆತ್ತವರು ಕಂದಮ್ಮನನ್ನು ಉಳಿಸಿಕೊಳ್ಳುವ ಆಸೆಯಿಂದ ಸುಮಾರು 5 ಗಂಟೆ ವೇಳೆಗೆ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕ
ಆ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕ ಅಧಿಕಾರಿ ಹಾಗೂ ಹಾಗೂ ಡಿ ಗ್ರೂಪ್ ಸಿಬ್ಬಂದಿಯೊಬ್ಬರು ಲಭ್ಯರಿದ್ದು, ಅಲ್ಲಿನ ವೈದ್ಯರು 4:30ರವರೆಗೆ ಓಪಿಡಿ ಸಮಯ ಮುಗಿಸಿ ಮೈದನಹಳ್ಳಿ ಪ್ರದೇಶಕ್ಕೆ ಕ್ಷೇತ್ರ ಭೇಟಿಗೆ ತೆರಳಿದ್ದರು ಎಂಬ ಮಾಹಿತಿ ತಿಳಿದು ಬಂದಿದ್ದು, ಘಟನೆಯ ಮಾಹಿತಿ ತಿಳಿದ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ವೈದ್ಯರು ಆಸ್ಪತ್ರೆಗೆ ಬರುವ ಮುಂಚೆಯೇ ಮಗು ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ.
ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 24/7 ಸೇವೆ ನೀಡುವ ಆಸ್ಪತ್ರೆಯಾಗಿರುವುದರಿಂದ ಇಬ್ಬರು ವೈದ್ಯರಿದ್ದು, ಪಾಳಿಯಂತೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಸಮಯದಲ್ಲಿ ಕನಿಷ್ಠ ಒಬ್ಬ ವೈದ್ಯರಾದರೂ ಕರ್ತವ್ಯದಲ್ಲಿ ಇರಬೇಕಾಗಿರುತ್ತದೆ. ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆ ನಡೆಸಿ ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದರ ಜೊತೆಗೆ ಆ ಸಂದರ್ಭದಲ್ಲಿ ತಡಮಾಡಿ ಕರ್ತವ್ಯ ಲೋಪ ಎಸಗಿರುವ ಅಂಬ್ಯುಲೆನ್ಸ್ ಚಾಲಕನನ್ನು ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿ ಮೇಲೆ ನಿಗಾ ಇಡಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು ಈ ಕ್ರಮದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಣೆಗಾರಿಕೆ ಹಾಗೂ ಶಿಸ್ತು ಹೆಚ್ಚಲಿದೆ.
ಕೊಡಿಗೇನಹಳ್ಳಿಯಲ್ಲಿ ನಡೆದ ದುರ್ಘಟನೆಯಲ್ಲಿ ತಮ್ಮ 5 ವರ್ಷದ ಕಂದಮ್ಮನನ್ನು ಕಳೆದುಕೊಂಡ ತಂದೆ-ತಾಯಂದಿರ ಆಕ್ರಂದನ ನನ್ನ ಮನಸ್ಸನ್ನು ಜರ್ಜರಿತಗೊಳಿಸಿದೆ. ಕ್ರೂರ ವಿಧಿಯಾಟ ಆ ಹೆತ್ತವರಿಗೆ ತಂದೊಡ್ಡಿರುವ ನೋವಿನಲ್ಲಿ ನಾನೂ ಭಾಗಿ ಎಂದಿದ್ದಾರೆ.