ಹಲ್ಲೆ ನಡೆದು ತಿಂಗಳ ಬಳಿಕ ಆರೋಪಿ ಶಾಸಕ ಗಣೇಶ್ ಬಂಧನ
Recommended Video
ಬೆಂಗಳೂರು, ಫೆಬ್ರವರಿ 20: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಕಡೆಗೂ ಪೊಲೀಸರು ಇಂದು ಬಂಧಿಸಿದ್ದಾರೆ.
ಹೊರ ರಾಜ್ಯದಲ್ಲಿ ಗಣೇಶ್ ಅವರನ್ನು ಬಂಧಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಇಂದು ರಾತ್ರಿ ಗಣೇಶ್ ಅವರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ. ಗಣೇಶ್ ಅವರನ್ನು ಹೊರರಾಜ್ಯದಲ್ಲಿ ಬಂಧಿಸಲಾಗಿದೆ. ಯಾವ ರಾಜ್ಯದಲ್ಲಿ ಭಂಧಿಸಲಾಗಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಜನವರಿ 19ರ ರಾತ್ರಿ ಜೆ.ಎನ್.ಗಣೇಶ್ ಅವರು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಈಗಲ್ಟನ್ ರೆಸಾರ್ಟ್ನಲ್ಲಿ ಹಲ್ಲೆ ಮಾಡಿದ್ದರು. ಜನವರಿ 21ರಂದು ಗಣೇಶ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಅಂದಿನಿಂದಲೂ ಗಣೇಶ್ ತಲೆಮರೆಸಿಕೊಂಡಿದ್ದರು.
ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಗಣೇಶ್ ಅವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ನಿನ್ನೆ ಅದನ್ನು ವಾಪಸ್ ಪಡೆಯಲಾಗಿತ್ತು. ಅದರ ಬೆನ್ನಿಗೆ ಇಂದು ಗಣೇಶ್ ಬಂಧನವಾಗಿದೆ.
ಗಣೇಶ್ ಅವರನ್ನು ಬಂಧಿಸಿದ ರಾಮನಗರ ಪೊಲೀಸ್
ಘಟನೆ ನಡೆದ ಒಂದು ತಿಂಗಳ ನಂತರ ರಾಮನಗರ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದಾರೆ. ಇಂದು ತಡರಾತ್ರಿ ರಾಮನಗರಕ್ಕೆ ಕರೆತಂದು ಇಂದೇ ಅಥವಾ ನಾಳೆ ಸ್ಥಳೀಯ ನ್ಯಾಯಾಲಯದ ಮುಂದೆ ಗಣೇಶ್ ಅವರನ್ನು ಹಾಜರುಪಡಿಸಲಿದ್ದಾರೆ.
ಗಣೇಶ್ ಕಾಂಗ್ರೆಸ್ ಸದಸ್ಯತ್ವ ರದ್ದು
ಘಟನೆ ನಡೆದ ಬಳಿಕ ಕೆಪಿಸಿಸಿಯು ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಿತ್ತು. ಘಟನೆ ಬಗ್ಗೆ ಕೆಪಿಸಿಸಿಯು ಆಂತರಿಕ ತನಿಖೆ ನಡೆಸುವುದಾಗಿಯೂ ಹೇಳಿತ್ತು.
ಅಜ್ಞಾತ ಸ್ಥಳದಿಂದ ಫೇಸ್ಬುಕ್ನಲ್ಲಿ ಪತ್ರ
ತಲೆಮರೆಸಿಕೊಂಡಿದ್ದ ಜೆ.ಎನ್.ಗಣೇಶ್ ಅಜ್ಞಾತ ಸ್ಥಳದಿಂದ ಫೇಸ್ಬುಕ್ನಲ್ಲಿ ಪತ್ರ ಬರೆದು ತಾವು ಅಮಾಯಕರೆಂದು ತಮ್ಮದು ತಪ್ಪಿಲ್ಲ, ಎಲ್ಲವೂ ಆನಂದ್ ಸಿಂಗ್ ಅವರದ್ದೇ ತಪ್ಪು, ಆನಂದ್ ಸಿಂಗ್ಗೆ ನಾನು ಹೊಡೆದಿಲ್ಲ, ಅವರೇ ಟೇಬಲ್ ಮೇಲೆ ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದಿದ್ದರು. ಅಲ್ಲದೆ ಆನಂದ್ ಸಿಂಗ್ ಅವರು ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಸಹ ಅವರು ಹೇಳಿದ್ದರು.
ರಮೇಶ್ ಜಾರಕಿಹೊಳಿ ಬೆಂಬಲ
ನಿನ್ನೆ ಗಣೇಶ್ ಅವರ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅವರು, ಗಣೇಶ್ಗೆ ಬೆಂಬಲ ವ್ಯಕ್ತಪಡಿಸಿ, ಅವರದ್ದು ಏನೂ ತಪ್ಪಿಲ್ಲ, ಅವರನ್ನು ಬಲಿಪಶು ಮಾಡಲಾಗಿದೆ ಎಂದಿದ್ದರು. ಗಣೇಶ್ ಅವರ ವಿರುದ್ಧ ಜಾತಿ ನಿಂದನೆ ಆಗಿದೆ, ಘಟನೆ ನಡೆದಾಗ ಸ್ಥಳದಲ್ಲಿದ್ದ ಭೀಮಾನಾಯ್ಕ್ ಅವರು ಸತ್ಯ ಹೊರತರಬೇಕು ಎಂದಿದ್ದರು. ಅಲ್ಲದೆ ಗಣೇಶ್ ಅವರು ಇದೇ ಸರ್ಕಾರದಲ್ಲಿ ಮಂತ್ರಿ ಸಹ ಆಗುತ್ತಾರೆ ಎಂದಿದ್ದರು.