ಶಂಕಿತ ಗೌರಿ ಹಂತಕರ ಸದಸ್ಯನಿಂದ ಮತ್ತೊಬ್ಬ ವಿಚಾರವಾದಿ ಕೊಲೆಗೆ ಸಂಚು!
ಬೆಂಗಳೂರು, ಮಾರ್ಚ್ 03: ಗೌರಿ ಲಂಕೇಶ್ ಹಂತಕರಿಗೆ ಸಹಾಯ ಮಾಡಿದ್ದಾನೆ ಎಂದು ಅನುಮಾನಿಸಲಾಗಿದ್ದ ಮದ್ದೂರಿನ ಹಿಂದೂ ಸಂಘಟನೆ ಮುಖಂಡ ಕೆ.ಟಿ.ನವೀನ್ ಕುಮಾರ್ ಮತ್ತೊಬ್ಬ ವಿಚಾರವಾದಿಯನ್ನು ಹತ್ಯೆ ಮಾಡಲು ಸಂಚು ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಇದೇ ಜನವರಿಯಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನ ನಾಲ್ವರು ಯುವಕರಿಗೆ ಕರೆ ಮಾಡಿದ್ದ ನವೀನ್, 'ಬಲಪಂಥೀಯ ವಿರೋಧಿ ವಿಚಾರವಾದಿಯೊಬ್ಬರನ್ನು ಹೊಡೆಯಬೇಕು' ಎಂದಿದ್ದ. ಇದೇ ವಿಚಾರವಾಗಿ 1 ತಾಸಿಗೂ ಹೆಚ್ಚು ಸಂಭಾಷಣೆ ನಡೆಸಿದ್ದರು.
ಗೌರಿ ಹಂತಕರಿಗೆ ಸಹಾಯ ಮಾಡಿದವನನ್ನು ವಶಕ್ಕೆ ಪಡೆದ ಎಸ್ಐಟಿ
ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಅನುಮಾನದ ಮೇಲೆ ಕೆಲವು ಸಂಘಟನೆಗಳ ಮುಖಂಡರ ಮೇಲೆ ಕಾರ್ಯಕರ್ತರ ಮೊಬೈಲ್ ಕರೆಗಳ ಮೇಲೆ ಕಣ್ಣಿಟ್ಟಿತ್ತು, ಅದರಲ್ಲಿ ನವೀನ್ ಕುಮಾರ್ ಕೂಡಾ ಒಬ್ಬ. ಅನುಮಾನದ ಮೇಲೆ ಆತನನ್ನು ಬಂಧಿಸಿದಾಗ ಆತನ ಬಳಿ ಜೀವಂತ ಗುಂಡು, ಬಂದೂಕು ದೊರೆತಿದ್ದವು. ಆ ನಂತರ ಅಧಿಕಾರಿಗಳು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮೊದಲು ಭಜರಂಗದಳದಲ್ಲಿದ್ದ ನವೀನ್, ನಂತರ ಅದನ್ನು ತೊರೆದು ತಾನೇ ಹಿಂದೂ ಯುವಸೇನೆ ಸಂಘಟನೆ ಕಟ್ಟಿದ್ದ. ಯಾರನ್ನು ಹೊಡೆಯುವ ಬಗ್ಗೆ ಚರ್ಚೆ ನಡೆಸಿದ್ದು ಎಂಬ ಕುರಿತು ಆರೋಪಿ ಹೇಳುತ್ತಿಲ್ಲ. ಆತನ ಜತೆ ಸಂಭಾಷಣೆ ನಡೆಸಿದ್ದ ಯುವಕರೂ ಸದ್ಯ ರಾಜ್ಯ ತೊರೆದಿದ್ದಾರೆ.
ಗೌರಿ ಹತ್ಯೆ ಪ್ರಕರಣದಲ್ಲೂ ಈತನ ಪಾತ್ರವಿರುವ ಬಗ್ಗೆ ಬಲವಾದ ಅನುಮಾನ ವ್ಯಕ್ತವಾಗಿದೆ. ಆ ನಾಲ್ವರು ಯುವಕರು ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಅವರನ್ನು ಹುಡುಕಿಕೊಂಡು ವಿಶೇಷ ತಂಡಗಳು ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಸಿಕ್ಕಿದೆ ಬಿಗ್ ಲೀಡ್