ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಎಸಿಬಿಗೆ ಸಿಕ್ಕಿ ಬಿದ್ದ 7 ಅಧಿಕಾರಿಗಳು
ಬೆಂಗಳೂರು, ಜುಲೈ 05: ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ರಾಜ್ಯದ ಐದು ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದೆ ಅಲ್ಲದೆ ಫಿರ್ಯಾದುದಾರರ ದೂರುಗಳ ಅನ್ವಯ ಲಂಚ ಸ್ವೀಕಾರ ಸಮಯ ನೇರ ದಾಳಿ ನಡೆಸಿ ಶಾಕ್ ನೀಡಿದೆ.
ಬಾಗಲಕೋಟೆ, ಮೈಸೂರು, ತುಮಕೂರು, ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ಎಸಿಬಿ ದಾಳಿಗಳು ನಡೆದಿದ್ದು ಹಲವು ಅಧಿಕಾರಿಗಳನ್ನು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಹಿಡಿಯಲಾಗಿದೆ.
ಎಸಿಬಿ ದಾಳಿ : ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಬಂಧನ
ಬಾಗಲಕೋಟೆ ಭ್ರಷ್ಟಾಚಾರ ನಿಗ್ರಹ ದಳವು ಶಿವಲಿಂಗಪ್ಪ ಬಸ್ಪಪ್ಪ ಹಡಗಲಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಎಲೆಕ್ಟ್ರೀಕಲ್ ಸಬ್-ಡಿವಿಷನ್ ಕರ್ನಾಟಕ ನಿರಾವರಿ ನಿಗಮ, ಸವದತ್ತಿ ಎಂಬುವವರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ ಇವರ ಯರಗಟ್ಟಿಯಲ್ಲಿನ ವಾಸದ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಗಳ ಮೇಲೆ ಇಂದು ದಾಳಿ ನಡೆಸಿರುತ್ತದೆ.
ಬಾಗಲಕೋಟೆ ಎಸಿಬಿ ಪೊಲೀಸ್ ಠಾಣೆಯ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ದ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಅತ್ತಿಗುಪ್ಪೆ ಗ್ರಾಮದ ನಿವಾಸಿಯಾಗಿರುವ ಫಿರ್ಯಾದಿರವರು ಶಿರಿಯೂರು ಗ್ರಾಮದಲ್ಲಿ ಖರೀದಿಸಿರುವ ಜಮೀನನ್ನು ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಕೋರಿರುತ್ತಾರೆ. ಶ್ರೀ. ಜಿ.ವಿ ವಿಷಕಂಠನಾಯ್ಕ, ರಾಜಸ್ವ ನಿರೀಕ್ಷಕರು, ನಾಡ ಕಛೇರಿ, ಗಾವಡಗೆರೆ ಹೋಬಳಿ, ಹುಣಸೂರು ತಾಲ್ಲೂಕು ರವರು ಅರ್ಜಿದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ₹ 5,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಜುಲೈ 04ರಂದು ಜಿ.ವಿ ವಿಷಕಂಠನಾಯ್ಕ, ರಾಜಸ್ವ ನಿರೀಕ್ಷಕರು, ನಾಡ ಕಚೇರಿ, ಗಾವಡಗೆರೆ ಹೋಬಳಿ, ಹುಣಸೂರು ತಾಲ್ಲೂಕು ರವರು ಅರ್ಜಿದಾರರಿಂದ ₹4,000 ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮೈಸೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಚಿಕ್ಕಮಾಲೂರು ಗ್ರಾಮದ ನಿವಾಸಿಯಾಗಿರುವ ಫಿರ್ಯಾದಿರವರ ತಮ್ಮನ ಪತ್ನಿಯ ಹೆಸರಿನಲ್ಲಿ ಯರಗುಂಟೆ ಗ್ರಾಮದಲ್ಲಿ ಖರೀದಿಸಿರುವ ಜಮೀನಿನ ಖಾತೆ ಬದಲಾವಣೆಗಾಗಿ ಕೋರಿರುತ್ತಾರೆ. ಚಂದ್ರಶೇಖರ್, ಗ್ರಾಮಲೆಕ್ಕಾಧಿಕಾರಿಗಳು, ಯಲ್ಕೂರು ಸರ್ಕಲ್, ಐಡಿ ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಅರ್ಜಿದಾರರ ತಮ್ಮನ ಪತ್ನಿಯ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ₹ 15,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಜುಲೈ 04ರಂದು ₹ 4,500/- ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.
ಕೋಲಾರ ಟೌನ್ ಸುಮಂತಾ ನಗರದ ನಿವಾಸಿಯಾಗಿರುವ ಫಿರ್ಯಾದಿರವರು ಇ-ಸ್ವತ್ತಿನ ಖಾತೆಯಲ್ಲಿ ಬದಲಾವಣೆಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ನಾಗರಾಜ, ಎಸ್ಡಿಎ, ವಡಗುರು ಗ್ರಾಮ ಪಂಚಾಯಿತಿ ರವರು ಅರ್ಜಿದಾರರ ಖಾತೆ ಬದಲಾವಣೆ ಮಾಡಿಕೊಡಲು ₹ 10,000 ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಇಂದು ನಾಗರಾಜ, ಎಸ್ಡಿಎ, ವಡಗುರು ಗ್ರಾಮ ಪಂಚಾಯಿತಿ ರವರು ಅರ್ಜಿದಾರರಿಂದ ₹ 5,000/- ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಿವಾಸಿಯಾಗಿರುವ ಫಿರ್ಯಾದಿರವರು ಕೋಆಪರೇಟಿವ್ ಸೊಸೈಟಿ ನೊಂದಣಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಗೀತಾ, ಕಛೇರಿ ಶಾಖಾಧೀಕ್ಷಕರು, ಅಸಿಸ್ಟೆಂಟ್ ರಿಜಿಸ್ಟ್ರಾರ್ ಅಫ್ ಕೋಆಪ್ರೇಟಿವ್ ಸೊಸೈಟೀಸ್ ರವರ ಕಛೇರಿ, ದಾವಣಗೆರೆ ರವರು ಅರ್ಜಿದಾರರ ಕೋಆಪರೇಟಿವ್ ಸೊಸೈಟಿ ನೊಂದಣಿ ಮಾಡಿಕೊಡಲು ₹ 25,000/- ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಇಂದು ರಂದು ಗೀತಾ, ಕಛೇರಿ ಶಾಖಾಧೀಕ್ಷಕರು, ಅಸಿಸ್ಟೆಂಟ್ ರಿಜಿಸ್ಟ್ರಾರ್ ಅಫ್ ಕೋಆಪ್ರೇಟಿವ್ ಸೊಸೈಟೀಸ್ ರವರ ಕಛೇರಿ, ದಾವಣಗೆರೆ ರವರು ಅರ್ಜಿದಾರರಿಂದ ₹ 15,000 ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ.